ಡಾಲಿಯ ಬಡವ್ರ ಮಕ್ಳು ಬೆಳೀಬೇಕು ಕಣ್ರಯ್ಯಾ ಹಾಗೂ ರಾಜ್ ಬಿ ಶೆಟ್ಟಿ ಅವ್ರ ಟ್ಯಾಲೆಂಟ್ ಇದ್ದೋರು ಬೆಳೀಬೇಕು ಅನ್ನೋ ಬಹುದೊಡ್ಡ ಸ್ಟೇಟ್ಮೆಂಟ್ಗಳ ಮಾಸ್ ಡಿಸ್ಕಷನ್ ನಂತ್ರ ಸೋಶಿಯಲ್ ಮೀಡಿಯಾದಲ್ಲಿ ಉಲ್ಬಣಗೊಂಡಿರೋ ನ್ಯೂ ಟಾಪಿಕ್ ಅಂದ್ರೆ ಅದು ನೆಪೋಟಿಸಂ. ಆ ಕಿಡಿ ಹೊತ್ತಿಸಿದ್ದೇ ಬಾದ್ಷಾ ಸುದೀಪ್. ಅದ್ರಲ್ಲಿ ದೊಡ್ಮನೆ ಹೆಸರು ಕೂಡ ಥಳುಕು ಹಾಕಿಕೊಂಡಿತ್ತು. ಆದ್ರೀಗ ಖುದ್ದು ದೊಡ್ಮನೆ ದೊರೆ ಶಿವಣ್ಣ ಅದಕ್ಕೆ ಇತಿಶ್ರೀ ಹಾಡಿದ್ದಾರೆ. ಅದೂ ನಮ್ಮ ಗ್ಯಾರಂಟಿ ನ್ಯೂಸ್ ಫಿಲ್ಮ್ ಬ್ಯೂರೋ ಹೆಡ್ ಮೂಲಕ ಅನ್ನೋದು ಇಂಟರೆಸ್ಟಿಂಗ್. ಇದರ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ…
- ‘ನೆಪೋಟಿಸಂ’ ಬಗ್ಗೆ ಕಿಚ್ಚನ ಕಿಡಿ.. ದೊಡ್ಮನೆ ಹೆಸ್ರು ಪ್ರಸ್ತಾಪ
- ಸುದೀಪ್ ಹೇಳಿದ್ದೇ ಬೇರೆ.. ಎಲ್ಲೆಡೆ ಟ್ರೆಂಡ್ ಆಗಿದ್ದೇ ಬೇರೆ
ಡಾಕ್ಟರ್ ಮಗ ಡಾಕ್ಟರ್ ಆಗಬಾರದು.. ಹೀರೋ ಮಗ ಹೀರೋ ಆಗಬಾರದು ಅನ್ನೋ ರೂಲ್ ಎಲ್ಲೂ ಇಲ್ಲ. ಇನ್ ಕೇಸ್ ಆದ್ರೆ ಅದಕ್ಕೆ ನೆಪೋಟಿಸಂ ಅನ್ನೋ ಮುದ್ರೆ ಹಾಕಲಾಗುತ್ತೆ. ಸದ್ಯ ಅಭಿನಯ ಚಕ್ರವರ್ತಿ ಬಾದ್ಷಾ ಕಿಚ್ಚ ಸುದೀಪ್ ಕುಟುಂಬದ ಕುಡಿ ಸಂಚಿತ್ ಸಂಜೀವ್ ಜೂನಿಯರ್ ಕಿಚ್ಚನಾಗಿ ಮ್ಯಾಂಗೋ ಪಚ್ಚ ಚಿತ್ರದಿಂದ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅಂದಹಾಗೆ ಸಂಚಿತ್ ಬೇರೆ ಯಾರೂ ಅಲ್ಲ, ಸುದೀಪ್ ಅವ್ರ ಸ್ವಂತ ಅಕ್ಕನ ಮಗ. ಅಂದ್ರೆ ಸೋದರಳಿಯ. ಕಿಚ್ಚನೇ ಹೇಳಿದಂತೆ ಅವರ ಮಗ.. ಅಕ್ಷರಶಃ ಮನೆ ಮಗ.
ಕಳೆದ ಶುಕ್ರವಾರ ಮ್ಯಾಂಗೋ ಪಚ್ಚ ಸಿನಿಮಾ ಗ್ರ್ಯಾಂಡ್ ಆಗಿ ರಿಲೀಸ್ ಕೂಡ ಆಯ್ತು. ಮರು ದಿನವೇ ಚಿತ್ರತಂಡ ಸಕ್ಸಸ್ ಮೀಟ್ ಸಹ ಮಾಡಿತು. ಬೆಂಗಳೂರಿನ ಪಂಚತಾರಾ ಹೋಟೆಲ್ನಲ್ಲಿ ನಡೆದ ಆ ಮ್ಯಾಂಗೋ ಪಚ್ಚ ಸಕ್ಸಸ್ ಮೀಟ್ನಲ್ಲಿ ನೆಪೋಟಿಸಂ ಟಾಪಿಕ್ ಉಲ್ಬಣಿಸಿತು. ಸುದೀಪ್ ಕುಟುಂಬದ ಕುಡಿ ಸದ್ಯ ಸ್ಯಾಂಡಲ್ವುಡ್ ಹೀರೋ ಆಗಿರೋ ಹಿನ್ನೆಲೆ ಅವರಿಗೆ ಮಾಧ್ಯಮದವರಿಂದ ನೆಪೋಟಿಸಂ ಪ್ರಶ್ನೆ ಎದುರಿಸುವಂತಾಯ್ತು. ಅದಕ್ಕೆ ಉತ್ತರಿಸಿದ ಕಿಚ್ಚ, ನೀವು ಈ ಪ್ರಶ್ನೆಯನ್ನ ರಾಜ್ಕುಮಾರ್ ಮಕ್ಕಳು, ಅಂಬಾನಿ ಮಕ್ಕಳನ್ನ ಕೇಳಬೇಕಿತ್ತು ಎಂದರು. ಅಷ್ಟೇ ಅಲ್ಲ, ಬಾಂಬೆಯಲ್ಲಿ ಹುಟ್ಟಿಕೊಂಡ ಈ ವರ್ಡ್ ಕರ್ನಾಟಕಕ್ಕೂ ಬರಬೇಕು ಅಂತೇನಿಲ್ಲ ಎಂದರು.
ದೊಡ್ಮನೆಯ ಹೆಸರು ಪ್ರಸ್ತಾಪ ಆಗ್ತಿದ್ದಂತೆ.. ಅದ್ರಲ್ಲೂ ಅಪ್ಪು, ಶಿವಣ್ಣ ನೇಮ್ಸ್ನ ಸುದೀಪ್ ಪ್ರಸ್ತಾಪ ಮಾಡಿದ್ದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸಂಚಲನ ಮೂಡಿತು. ಸುದೀಪ್ ಅವರು ಮಾತಾಡಿದ ಆರಂಭದ ಮಾತುಗಳು ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆದವು. ಆದ್ರೆ ಕಿಚ್ಚ ಹೇಳಿದ್ದೇ ಬೇರೆ. ಅವ್ರ ಇಂಟೆನ್ಷನ್ ಬೇರೇನೇ ಇತ್ತು.
ರಾಜ್ಕುಮಾರ್ ಕಾಲದಿಂದಲೂ ಕಲೆಯನ್ನ ಗೌರವಿಸಿಕೊಂಡು ಬಂದಿದ್ದೇವೆ. ಆ ಯೋಗ್ಯತೆ, ಕಲೆ ಅವರಲ್ಲಿ ಇದ್ರೆ.. ಕನ್ನಡಿಗರು ಮೆಚ್ಚಿಕೊಂಡ್ರೆ ಎಲ್ಲವೂ ಸಾಧ್ಯ. ಅದಕ್ಕೆ ಮುಂಬೈನ ನೆಪೋಟಿಸಂ ಅನ್ನೋ ಪದ ಬಳಸಿ ಹೆಸರಿಡಬಾರದು. ಈ ನೆಪೋಟಿಸಂ ಅನ್ನೋದು ಕನ್ನಡಿಗರಿಗೆ ಸೂಟ್ ಆಗಲ್ಲ ಅಂತ ಅದೇ ವೇದಿಕೆಯಲ್ಲಿ ಮುಂದುವರೆದು ಮಾತನಾಡಿದ್ರು ಕಿಚ್ಚ ಸುದೀಪ್.
ಇನ್ನೂ ಸುದ್ದಿಗೋಷ್ಠಿ ಬಳಿಕ ಅದು ಬೇರೆ ಬೇರೆ ರೂಪ ಪಡೆದು ದೊಡ್ಮನೆಯ ದೊರೆ ಡಾ. ಶಿವರಾಜ್ಕುಮಾರ್ ಕಿವಿಗೂ ಬಿತ್ತು. ಕಣ್ಣಿಗೂ ಬಿದ್ದಿತ್ತು. ಆದ್ರೆ ಸುದೀಪ್ ಅವರು ಕಿಚ್ಚ ವಿತ್ ಪಚ್ಚ ಅನ್ನೋ ಮತ್ತೊಂದು ಸಂದರ್ಶನದಲ್ಲಿ ಚಕ್ರವರ್ತಿ ಚಂದ್ರಚೂಡ್ ಕೇಳಿದ ಕಿಚ್ಚನ ಅದೇ ನೆಪೋಟಿಸಂ ಸ್ಟೇಟ್ಮೆಂಟ್ಗೆ ಮಗದಷ್ಟು ಸವಿಸ್ತಾರವಾಗಿ, ಅರ್ಥವಾಗುವಂತೆ ವಿವರಿಸಿ ಸ್ಪಷ್ಟನೆ ನೀಡಿದ್ರು ಅಭಿನಯ ಚಕ್ರವರ್ತಿ.
- ಕಿಚ್ಚ ವಿತ್ ಪಚ್ಚ ಸಂದರ್ಶನದಲ್ಲಿ ಸುದೀಪ್ ಕೊಟ್ರು ಸ್ಪಷ್ಟನೆ
- ಶಿವಣ್ಣ-ಅಪ್ಪು ಬಗ್ಗೆ ಅಚ್ಚರಿಯ ಮಾತುಗಳನ್ನಾಡಿದ ಮಾಣಿಕ್ಯ
- ಅಂಬರೀಶ್, ರವಿಚಂದ್ರನ್ ಹೆಸರು ಹೇಳಿದ್ಯಾಕೆ ಗೊತ್ತಾ ಕಿಚ್ಚ?
- ದುಡ್ಡು ಹಾಕಿ ಚಿತ್ರ ಮಾಡ್ಬಹುದು.. ಕಲೆಕ್ಷನ್ ಎತ್ತೋಕೆ ಆಗಲ್ಲ
ರಾಜ್ಕುಮಾರ್ ಮಗ ಅಂದ ಮಾತ್ರಕ್ಕೆ ಶಿವಣ್ಣ ಅವ್ರ ಸಿನಿಮಾಗಳನ್ನ ನೋಡಿಲ್ಲ ನಾವು. ಶಿವಣ್ಣ ಅನ್ನೋ ಕಾರಣಕ್ಕೆ ನೋಡಿದ್ದೀವಿ. ನೆಪೋಟಿಸಂ ಅನ್ನೋ ಹೊಸ ಕಲ್ಚರ್ ನಮ್ಮ ಕರ್ನಾಟಕದಲ್ಲಿ ಶುರು ಆಗಬಾರದು. ಅಂಬರೀಶ್ ಅವರ ಮಗ ಅಭಿಷೇಕ್ ಕೂಡ ಆ್ಯಕ್ಟರ್ ಆಗಿ ಬರೋದ್ರಲ್ಲಿ ತಪ್ಪೇನಿದೆ. ಹುಟ್ಟಿದಾಗಿನಿಂದ ಅಪ್ಪು ನೋಡಿಕೊಂಡು ಬೆಳೆದದ್ದೇ ಅವ್ರ ತಂದೆಯನ್ನ. ಅದೇ ಹಾದಿಯಲ್ಲೇ ಬರಬೇಕು ಅಲ್ಲವೇ..? ಹೀರೋ ಮಕ್ಕಳೆಲ್ಲಾ ಹೀರೋ ಆಗೋಕೆ ಆಗಲ್ಲ. ರಾಜಕಾರಣಿ ಮಕ್ಕಳೆಲ್ಲಾ ರಾಜಕೀಯಕ್ಕೆ ಬರೋಕೆ ಆಗಲ್ಲ. ಸಿಎಂ ಮಕ್ಕಳೆಲ್ಲಾ ಸಿಎಂ ಆಗೋಕೆ ಆಗಲ್ಲ ಅಂತ ಚಂದ್ರಚೂಡ್ ಪ್ರಶ್ನೆಗೆ ಸ್ಪಷ್ಟನೆ ನೀಡಿದ್ರು ಕಿಚ್ಚ.
ಅಪ್ಪನ ಹೆಸರು ಮಗನಿಗೆ ಬರೋದ್ರಲ್ಲಿ ತಪ್ಪೇನಿಲ್ಲ. ರವಿಚಂದ್ರನ್ ಅವ್ರ ತಂದೆ ಕೂಡ ಚಿತ್ರರಂಗದವರೇ. ಹಾಗೆ ನೋಡಿದ್ರೆ ರವಿಚಂದ್ರನ್ ಸಕ್ಸಸ್ ಫೇಲ್ಯೂರ್ ಎರಡನ್ನೂ ಎದುರಿಸಿದ್ದಾರೆ. ಪೊಲೀಸ್ ಮಗ ಪೊಲೀಸ್ ಆದ್ರೆ ಖುಷಿ ಪಡ್ತಾರೆ. ಆದ್ರೆ ಚಿತ್ರರಂಗದಲ್ಲಿ ಹೀರೋ ಮಗ ಹೀರೋ ಆದ್ರೆ ಯಾಕೆ ಖುಷಿ ಪಡಲ್ಲ..? ದುಡ್ಡಿದೆ ಅಂತ ಸಿನಿಮಾ ಮಾಡಬಹುದು. ಆದ್ರೆ ಥಿಯೇಟರ್ನಲ್ಲಿ ಕಲೆಕ್ಷನ್ ಎತ್ತೋಕೆ ಆಗಲ್ಲ. ಮ್ಯಾಂಗೋ ಪಚ್ಚಗೆ ಡೀಸೆಂಟ್ ಕಲೆಕ್ಷನ್ ಇದೆ. ಹೌಸ್ಫುಲ್ ತರಹ ಏನೂ ಇಲ್ಲ. ಕಲೆ ವಿಚಾರ ಶಿವಣ್ಣ ಹಾಗೂ ಅಪ್ಪುಗಿಂತ ಬೆಟರ್ ಎಕ್ಸಾಂಪಲ್ ಯಾರೂ ಇಲ್ಲ. ಅಣ್ಣಾವ್ರ ಮಕ್ಕಳು ಅಂತ ಸ್ಟ್ಯಾಂಪ್ ಹಾಕಿ ಯಾರೂ ಲೇಬಲ್ ಮಾಡಿಲ್ಲ. ಶಿವಣ್ಣ ಹೆಸರಿರಬಹುದು. ಆದ್ರೆ ಅವರನ್ನ ಜನ ಕರೆದಿದ್ದು ಹ್ಯಾಟ್ರಿಕ್ ಹೀರೋ ಅಂತ. ಪುನೀತ್ ಹೆಸರಿರಬಹುದು.. ಆದ್ರೆ ಜನ ಅಪ್ಪು ಅಂತ ಕರೆದರು.. ಹೀಗಂತ ಡಿಟೈಲ್ಡ್ ಆಗಿ ಆ ನೆಪೋಟಿಸಂ ಕುರಿತು ಕಿಚ್ಚ ವಿವರಣೆ ನೀಡಿದ್ರು.
- ಬಾದ್ಷಾ ಹೇಳಿಕೆಗೆ ದೊಡ್ಮನೆ ದೊರೆಯಿಂದ ಫುಲ್ಸ್ಟಾಪ್
- ಶಿವಣ್ಣ- ಕಿಚ್ಚನದ್ದು ಎಲ್ಲಾ ಬಂಧಗಳನ್ನ ಮೀರಿದ ಸಂಬಂಧ..!!
- ಸುದೀಪ್-ಪ್ರಿಯಾ ಸುದೀಪ್ ಜೊತೆ ಚಿತ್ರ ವೀಕ್ಷಿಸಿದ ಶಿವಣ್ಣ
ಕಿಚ್ಚನ ಮನೆಯಲ್ಲೇ ಮ್ಯಾಂಗೋ ಪಚ್ಚ ವೀಕ್ಷಿಸಬೇಕಿದ್ದ ಶಿವಣ್ಣ, ಜನರ ನಡುವೆ ಆಡಿಯನ್ ಆಗಿ ಪಿವಿಆರ್ ಒರಾಯನ್ನಲ್ಲಿ ಸುದೀಪ್ ದಂಪತಿ ಜೊತೆ ನಿನ್ನೆ ರಾತ್ರಿ ಮ್ಯಾಂಗೋ ಪಚ್ಚ ವೀಕ್ಷಿಸಿದರು. ಸಂಚಿತ್ ನಮ್ಮ ಮನೆ ಹುಡುಗ ಇದ್ದಂತೆ. ಗೀತಕ್ಕ ಕೂಡ ಬರಬೇಕಿತ್ತು. ಅನಾರೋಗ್ಯದಿಂದ ಬರಲಾಗಲಿಲ್ಲ ಎಂದ ಸುದೀಪ್, ಶಿವಣ್ಣನ ಆ ದೊಡ್ಡ ಗುಣವನ್ನ ಕೊಂಡಾಡಿದ್ರು.
ಇನ್ನೂ ಚಿತ್ರ ವೀಕ್ಷಣೆ ಬಳಿಕ ಮಾತನಾಡಿದ ಶಿವಣ್ಣ, ಸಂಚಿತ್ ಭವಿಷ್ಯದ ಭರವಸೆಯ ನಟ ಆಗ್ತಾನೆ. ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ. ಇಟ್ಸ್ ಟ್ರೀಟ್ ಟು ವಾಚ್. ಕಥೆ ತುಂಬಾ ಚೆನ್ನಾಗಿದೆ. ಎಲ್ಲಾ ಕಲಾವಿದರು ಅದ್ಭುತವಾಗಿ ನಟಿಸಿದ್ದಾರೆ. ನನ್ನ ಕಸಿನ್ ಕೂಡ ಒಬ್ಬ ಅಭಿನಯಿಸಿದ್ದಾನೆ. ಜೈ, ಭಾವನಾ, ಮಯೂರ್ ಪಟೇಲ್ ಎಲ್ಲರೂ ತುಂಬಾ ಚೆನ್ನಾಗಿ ಆ್ಯಕ್ಟ್ ಮಾಡಿದ್ದಾರೆ ಎಂದರು. ಅಷ್ಟೇ ಅಲ್ಲ, ಹೊಸಬರ ಸಿನಿಮಾಗಳನ್ನ ನೋಡ್ಬೇಕು ಜನ. ನಾನು ಸುದೀಪ್ ಎಷ್ಟು ದಿನ ಅಂತ ಮಾಡೋಕೆ ಸಾಧ್ಯ..? ನಮ್ಮ ಭಾಷೆ, ಚಿತ್ರರಂಗ ಉಳಿಯಬೇಕು ಅಂದ್ರೆ ಹೊಸಬರ ಚಿತ್ರಗಳೂ ನೋಡಬೇಕು. ಅವ್ರನ್ನ ಬೆಳೆಸಬೇಕು ಎಂದರು.
ಇದೇ ಸಂದರ್ಭದಲ್ಲಿ ಸುದೀಪ್ ನೀಡಿದ್ದ ನೆಪೋಟಿಸಂ ಸ್ಟೇಟ್ಮೆಂಟ್ ಕುರಿತ ಪ್ರತಿಕ್ರಿಯಿಸಿದ ಶಿವಣ್ಣ, ಕೆರಳಿ ಕೆಂಡಾಮಂಡಲವಾದ್ರು. ಮೊದಲಿಗೆ ಆ ಪ್ರಶ್ನೆ ಕೇಳುವ ಅವಶ್ಯಕತೆಯೇ ಇರಲಿಲ್ಲ. ಅದ್ಯಾಕೆ ಈಗ ಕೇಳಿದ್ರು..? ಅದು ಕೇಳುವ ಪ್ರಶ್ನೆಯೇ ಎಂದರು. ಅಷ್ಟೇ ಅಲ್ಲ, ಇವ್ರ ಮಕ್ಕಳು, ಅವ್ರ ಮಕ್ಕಳೇ ಕನಸು ಕಾಣ್ಬೇಕು ಅಂತೇನಿಲ್ಲ. ನಾನು ಅದನ್ನೆಲ್ಲಾ ಕೇರ್ ಮಾಡಲ್ಲ. ಸುದೀಪ್ ಮಾತನ್ನ ಪೂರ್ತಿ ನೋಡಿದ್ದೇನೆ. ಎಲ್ಲಾ ಮನುಷ್ಯರಿಗೂ ಏನನ್ನಾದ್ರೂ ಸಾಧಿಸೋ ಹಂಬಲ ಇದ್ದೇ ಇರುತ್ತೆ. ಅದನ್ನೆಲ್ಲಾ ಸ್ವಾಗತಿಸಬೇಕು. ಅವನೇ ನಿಜವಾದ ಮನುಷ್ಯ ಅಂತ ಆ ನೆಪೋಟಿಸಂ ಹೇಳಿಕೆಗೆ ಫುಲ್ಸ್ಟಾಪ್ ಇಟ್ಟರು.
- ಗ್ಯಾರಂಟಿ ನ್ಯೂಸ್ ಫಿಲ್ಮ್ ಬ್ಯೂರೋ ಹೆಡ್ನಿಂದ್ಲೇ ಕಿಚ್ಚ ಸ್ಪಷ್ಟನೆ
- ವರದಿಗಾರನ ಮೂಲಕವೇ ವಿವಾದಕ್ಕೆ ನಟ ಸುದೀಪ್ ಅಂತ್ಯ.!
ಇನ್ನೂ ಶಿವಣ್ಣನಿಗೆ ಪ್ರಶ್ನೆ ಮಾಡ್ತಿದ್ದಂತೆ.. ಸುದೀಪ್ ಅವರು ನಮ್ಮ ಗ್ಯಾರಂಟಿ ನ್ಯೂಸ್ ಫಿಲ್ಮ್ ಬ್ಯೂರೋ ಹೆಡ್ ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ರನ್ನ ವೇದಿಕೆಗೆ ಕರೆಸಿ, ನನ್ನ ಪೂರ್ತಿ ಮಾತುಗಳನ್ನ ನೀವು ಕೇಳಿದ್ರಾ ಎಂದರು. ಹೌದು ಅನ್ನೋದಾದ್ರೆ ನಾನು ಏನು ಹೇಳಿದೆ ಅಂತ ನೀವೇ ಒಮ್ಮೆ ವಿವರಿಸಿ ಎಂದರು. ಅದಕ್ಕೆ ಲಕ್ಷ್ಮೀನಾರಾಯಣ್ ಅವರು ಕಿಚ್ಚನ ಮಾತಿನ ಆಂತರ್ಯವನ್ನ ವಿವರಿಸಿದ್ರು. ಅಲ್ಲಿಗೆ ಪ್ರಶ್ನೆ ಮಾಡಿದ್ದು ಮಾಧ್ಯಮದವರು. ಉತ್ತರ ಕೂಡ ಮಾಧ್ಯಮದವರಿಂದಲೇ ಕೊಡಿಸೋ ಮೂಲಕ ನೆಪೋಟಿಸಂ ವಿವಾದಕ್ಕೆ ಫುಲ್ಸ್ಟಾಪ್ ಇಟ್ರು ಸುದೀಪ್.
ಒಟ್ಟಾರೆ ಸುದೀಪ್ ಹಾಗೂ ಶಿವಣ್ಣ ಹೇಳಿದಂತೆ ನೆಪೋಟಿಸಂ ಅನ್ನೋದು ನೆಪ ಮಾತ್ರ. ಕಲೆ ಅನ್ನೋದು ಯಾರಪ್ಪನ ಸ್ವತ್ತೂ ಅಲ್ಲ. ಟ್ಯಾಲೆಂಟ್ ಇದ್ದೋನಿಗಷ್ಟೇ ಬೆಲೆ. ಹಣ್ಣ, ಬ್ಯಾಗ್ರೌಂಡ್ ಇದ್ದವರೆಲ್ಲಾ ಇಂದು ಸಾಕಷ್ಟು ಮಂದಿ ಸಕ್ಸಸ್ ಆಗಿಲ್ಲ ಅನ್ನೋದು ಸ್ಪಷ್ಟ. ಆದ್ರೆ ಚೊಚ್ಚಲ ಚಿತ್ರದಲ್ಲಿ ಒಂದು ಭರವಸೆ ಮೂಡಿಸಿರೋ ಸಂಚಿತ್ ಸಂಜೀವ್ ಭವಿಷ್ಯದ ಭರವಸೆಯ ಸ್ಟಾರ್ ಆಗಲಿ ಅಂತ ಹಾರೈಸೋಣ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





