ಏಳೆಂಟು ವರ್ಷಗಳ ಹಿಂದೆ 8 ಕೋಟಿ ಸಾಲ ಮಾಡಿ, ಅದನ್ನ ತೀರಿಸಲಾಗದೆ ಹೆದರಿ, ಹೇಡಿಯಂತೆ ಓಡಿ ಹೋಗಿದ್ದ ಡಿಬಾಸ್ ದರ್ಶನ್ ಮ್ಯಾನೇಜರ್ ಮಲ್ಲಿಕಾರ್ಜುನ ಸಂಕನಗೌಡರ್ ಇದೀಗ ದಿಢೀರ್ ಪ್ರತ್ಯಕ್ಷವಾಗಿದ್ದಾರೆ. ಐರಾವತ ವೆಳೆ ದಚ್ಚು ಒಂದು ಕೋಟಿ ಕೊಟ್ರೂ ತೀರಲಿಲ್ಲ ಸಾಲ. ಸಿಗಲಿಲ್ಲ ಪ್ರೇಮಬರಹ ಡಿಸ್ಟ್ರಿಬ್ಯೂಷನ್ ಲೆಕ್ಕ. ಇಷ್ಟಕ್ಕೂ ಮಲ್ಲಿ ಎಡವಿದ್ದೆಲ್ಲಿ..? ಇಷ್ಟು ವರ್ಷ ನೇಪಾಳವರೆಗೂ ಅಲೆದಿದ್ದೆಷ್ಟು..? ತಂದೆ-ತಾಯಿ ಸತ್ತಾಗ ಹಿಡಿ ಮಣ್ಣು ಕೂಡ ಹಾಕಲಾಗದ ನತದೃಷ್ಠನಾಗಿದ್ಯಾಕೆ..? ತನ್ನ ಒಡೆಯ ದಾಸ ದರ್ಶನ್ ಜೊತೆ ಮತ್ತೆ ಕೆಲಸ ಮಾಡ್ತಾರಾ..? ಮಲ್ಲಿ ಅವರ ನೆಕ್ಸ್ಟ್ ಪ್ಲ್ಯಾನ್ಸ್ ಏನು ಅನ್ನೋದ್ರ ಬಗ್ಗೆ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ…
- 8 ಕೋಟಿ ಸಾಲಕ್ಕೆ 8 ವರ್ಷ ಅಜ್ಞಾತವಾಸ.. ಏನಿದು ಮಲ್ಲಿ?!
- ಡಿಬಾಸ್ ಮ್ಯಾನೇಜರ್ ದಿಢೀರ್ ಪ್ರತ್ಯಕ್ಷ.. ಸುತ್ತಿದ್ದು ಎಲ್ಲೆಲ್ಲಿ?
- ಐರಾವತ ದರ್ಶನ್ ಕೊಟ್ರು ಕೋಟಿ.. ಡಿಬಾಸ್ ಪುಣ್ಯಕೋಟಿ
- ಪ್ರೇಮಬರಹದ ಆ 3 ಮಿಸ್ಟೇಕ್ಸ್.. ಬದಲಾಯ್ತು ಹಣೆಬರಹ..!
- ಗ್ಯಾರಂಟಿ ನ್ಯೂಸ್ ಜೊತೆ.. ಮರು ಜನ್ಮ ಪಡೆದ ಮಲ್ಲಿ ಕಥೆ..!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಿಂದಿನ ಮಾಸ್ಟರ್ಮೈಂಡ್, ಬಲಗೈ ಭಂಟ, ಒಡಹುಟ್ಟಿದವನಷ್ಟು ನೆಂಟ ಆಗಿದ್ದ ದರ್ಶನ್ ಮ್ಯಾನೇಜರ್ ಮಲ್ಲಿಕಾರ್ಜುನ ಸಂಕನಗೌಡರ್ ನಾಪತ್ತೆ ಆಗಿಬಿಟ್ಟಿದ್ರು. ಹೌದು.. ಕಳೆದ ಎಳೆಂಟು ವರ್ಷಗಳಿಂದ ಅಕ್ಷರಶಃ ಅಜ್ಞಾತವಾಸದಲ್ಲಿದ್ರು. ಅದಕ್ಕೆ ಕಾರಣ ಅವರು ಮಾಡಿಕೊಂಡಿದ್ದ ಸಾಲಗಳು. ಅವರ ಪ್ರಕಾರ ಅದು ಎಂಟು ಕೋಟಿ. ಆದ್ರೆ 25 ರಿಂದ 30 ಕೋಟಿಗೂ ಅಧಿಕ ರೂಪಾಯಿಯಷ್ಟು ಸಾಲಗಾರನಾಗಿದ್ದ ಅಂತಿವೆ ಮೂಲಗಳು.
ಮಲ್ಲಿ ಊರು ಬಿಡೋಕೆ ಕಾರಣ:
ಅರ್ಜುನ್ ಸರ್ಜಾ ನಿರ್ದೇಶಿಸಿ, ನಿರ್ಮಿಸಿದ 2018ರ ಪ್ರೇಮಬರಹ ಸಿನಿಮಾದ ಡಿಸ್ಟ್ರಿಬ್ಯೂಷನ್ನ ತೂಗುದೀಪ ಡಿಸ್ಟ್ರಿಬ್ಯೂಷನ್ ಕಂಪನಿ ಅಡಿಯಲ್ಲಿ ಮಾಡಿದ್ದ ಮಲ್ಲಿ, ಅದರ ಲೆಕ್ಕ ನೀಡದೆ, ಕೋಟ್ಯಂತರ ರೂಪಾಯಿ ಪಂಗನಾಮ ಹಾಕಿ ಪಲಾಯನ ಆಗಿದ್ರು. ಹೆಂಡ್ತಿ, ಮಗ, ತಂದೆ-ತಾಯಿಯನ್ನ ಕೂಡ ಬಿಟ್ಟು ತಲೆ ಮರೆಸಿಕೊಂಡಿದ್ರು. ಇದೀಗ ತನ್ನ ಒಡೆಯ, ಯಜಮಾನ ಡಿಬಾಸ್ ದರ್ಶನ್ ಕೊಲೆ ಪ್ರಕರಣವೊಂದರಲ್ಲಿ ಪರಪ್ಪನ ಅಗ್ರಹಾರ ಸೇರಿದ್ದು, ಇದೇ ಮರಳಿ ಬರೋಕೆ ಸದಾವಕಾಶ ಅಂತ ಮೆತ್ತಗೆ ಮೀಡಿಯಾ ಮುಂದೆ ಬಂದಿದ್ದಾರೆ ಮಲ್ಲಿಕಾರ್ಜುನ್. ಮಾಧ್ಯಮಗಳ ಮುಂದೆ ತನ್ನ ಕಂಪ್ಲೀಟ್ ಕಥೆಯನ್ನ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಮನೆ, ಮಡದಿ ಮಕ್ಕಳು ತೊರೆದು ಊರು ಬಿಟ್ಟಿದ್ಯಾವಾಗ..?
2018ರಲ್ಲಿ ಪ್ರೇಮಬರಹ ಚಿತ್ರದ ಲೆಕ್ಕಗಳು ದಾರಿ ತಪ್ಪಿದಾಗ ಅರ್ಜುನ್ ಸರ್ಜಾ ಮಲ್ಲಿ ಮೇಲೆ ಕೇಸ್ ಹಾಕಿದ್ರು. ಆಗ ವಿಧಿ ಇಲ್ಲದೆ ಯಾರಿಗೂ ಹೇಳದೆ, ಮಡದಿ, ಮಗ, ಪೋಷಕರು, ಫ್ರೆಂಡ್ಸ್, ಹಿತೈಷಿಗಳನ್ನ ಬಿಟ್ಟು ಎಸ್ಕೇಪ್ ಆಗಿದ್ರು.
8 ವರ್ಷ ಸುತ್ತಿದ್ದು ಎಲ್ಲೆಲ್ಲಿ..? ಬೆಂಗಳೂರು to ನೇಪಾಳ
ಮುಂಬೈನ ಕೊಲ್ಹಾಪುರ, ಸೊಲ್ಲಾಪುರ ಸೇರಿದಂತೆ ಕಾಶಿ.. ಹೀಗೆ ಸಾಕಷ್ಟು ಕಡೆ ಸುತ್ತಿ ಸುತ್ತಿ ಸುಸ್ತಾಗಿದ್ರಂತೆ ಮಲ್ಲಿ. ಇಂಜಿನಿಯರಿಂಗ್ ಪದವಿ ಮಾಡಿದ್ದ ಮಲ್ಲಿ, ಸಿಕ್ಕ ಕೆಲಸಗಳನ್ನೆಲ್ಲಾ ಮಾಡ್ತಾ ಜೀವನ ಸಾಗಿಸಿದ್ದಾರೆ. ಕೊನೆಗೆ ಸ್ನೇಹಿತರೊಬ್ಬರು ನೇಪಾಳದಲ್ಲಿದ್ದರಿಂದ, ಅವ್ರ ತೋಟದ ಮೆನಯಲ್ಲಿ ಕೆಲಸ ಮಾಡಿಕೊಂಡು ಕಾಲ ಕಳೆದಿದ್ದಾರೆ.
ಆತ್ಮಹತ್ಯೆಯ ಆಲೋಚನೆ.. ತಡೆದ ತಮ್ಮನ ಶುಭಕಾರ್ಯ
ಊರು ಬಿಟ್ಟು ತಲೆ ಮರೆಸಿಕೊಳ್ಳೋಕೆ ಮೊದಲೇ ಸಾಲಗಳ ಸುಳಿಯಿಂದ ಹೊರಬರಲಾಗದೆ ಒದ್ದಾಡ್ತಿದ್ದ ಮಲ್ಲಿ, ತನ್ನ ಪತ್ನಿ ಜೊತೆ ಸೂಸೈಡ್ ಮಾಡಿಕೊಳ್ಳೋ ವಿಚಾರ ಪ್ರಸ್ತಾಪಿಸಿದ್ರಂತೆ. ಅಷ್ಟರಲ್ಲಿ ರಕ್ತ ಹಂಚಿಕೊಂಡು ಹುಟ್ಟಿದ ಸಹೋದರನ ಮದುವೆ ಶುಭಕಾರ್ಯ ಬಂದ ಹಿನ್ನೆಲೆ ಆ ಆತ್ಮಹತ್ಯೆಯ ಆಲೋಚನೆ ಕೈ ಬಿಟ್ಟಿದ್ದಾರೆ ಮಲ್ಲಿ.
ಕಿಡ್ನಿ, ಕಿವಿ ಹಾಗೂ ಗಂಟಲು ಸಮಸ್ಯೆ.. ಮಲ್ಲಿಗೆ ಸರ್ಜರಿ
ತನ್ನ ಒಡೆಯ ದರ್ಶನ್ ಜೈಲು ಪಾಲು ಆದಾಗ ರೇಣುಕಾಸ್ವಾಮಿ ರೀತಿ ಮಲ್ಲಿ ಕೂಡ ಸತ್ತಿರಬಹುದು ಅಂತ ಮಾತುಗಳು ಕೇಳಿಬಂದವು. ಆಗ ನಾನು ಜೀವಂತವಾಗಿದ್ದೇನೆ ಅಂತ ಬಂದು ಸಮಾಜಕ್ಕೆ ಹೇಳೋಣ ಅಂದ್ರೆ, ಅಷ್ಟರಲ್ಲಿ ಕಿಡ್ನಿ ಸಮಸ್ಯೆ ಎದುರಾಯ್ತು. ಕಿವಿ ಹಾಗೂ ಗಂಟಲು ಸಮಸ್ಯೆ ಉಂಟಾಯ್ತು. ಸರ್ಜರಿ ಮಾಡಿಸಿಕೊಂಡೆ. ಶಸ್ತ್ರ ಚಿಕಿತ್ಸೆ ಆಗ್ತಿದ್ದಂತೆ ಸ್ಟ್ರೋಕ್ ಆಯ್ತು. 7 ತಿಂಗಳು ವಿಶ್ರಾಂತಿಯಲ್ಲಿದ್ದೆ. ಹಾಗಾಗಿ ಬರಲಾಗಲಿಲ್ಲ.
ತಂದೆ, ತಾಯಿ, ಅಜ್ಜಿ ಸಾವಿಗೆ ಹಿಡಿ ಮಣ್ಣು ಹಾಕಲಿಲ್ಲ
ಅಜ್ಞಾತವಾಸದಲ್ಲಿದ್ದ ಮಲ್ಲಿ ತಮ್ಮ ತಂದೆ, ತಾಯಿ ಹಾಗೂ ಅಜ್ಜಿ ತೀರಿಕೊಂಡಾಗಲೂ ಬರಲಾಗಲಿಲ್ಲ. ಯಾಕಂದ್ರೆ ಆಗ ಬಂದೇ ಬರ್ತಾನೆ ಅಂತ ಸಾಲಗಾರರು ಹದ್ದಿನ ಕಣ್ಣಿಟ್ಟು ಕಾಯ್ತಿದ್ರು. ಹಾಗಾಗಿ ಅವರ ಸಾವಿಗೆ ಹಿಡಿ ಮಣ್ಣು ಹಾಕಲಾಗದ ನತದೃಷ್ಠನಾಗಿಬಿಟ್ರು ಮಲ್ಲಿ. ಅಷ್ಟೇ ಅಲ್ಲ, ಆಪ್ತ ಗೆಳೆಯ ಪ್ರವೀಣ್ ಸಾವಿಗೂ ಬರಲಾಗಲಿಲ್ಲವಂತೆ.
ಅರ್ಜುನ್ ಸರ್ಜಾ ಕೇಸ್ ಬೇಲ್ಗಾಗಿ ಬೆಂಗಳೂರಿಗೆ
ರೇಣುಕಾಸ್ವಾಮಿ ಮರ್ಡರ್ ಕೇಸ್ನಲ್ಲಿ ಜೈಲು ಸೇರಿದ್ದ ದರ್ಶನ್, ಬೇಲ್ ಮೇಲೆ ಹೊರಬಂದಿದ್ದಾಗ ಅರ್ಜುನ್ ಸರ್ಜಾ ಪ್ರೇಮಬರಹ ದೋಖಾ ಕೇಸ್ ಬೇಲ್ ಪಡೆಯೋಕೆ ಬೆಂಗಳೂರಿಗೆ ಬಂದು ಹೋಗಿದ್ರಂತೆ ಮಲ್ಲಿಕಾರ್ಜುನ್. ಆಗ ದಚ್ಚು ಸಹೋದರ ದುನಕರ್ ತೂಗುದೀಪ್ನ ಭೇಟಿ ಆಗಿದ್ರಂತೆ.
ಮೊದಲಾಸಲ ಸೋಲು.. ಹೋಟೆಲ್ ಬ್ಯುಸಿನೆಸ್ ಲಾಸ್
ಯಶ್ ಮೊದಲಾಸಲ ಸಿನಿಮಾನ ಯೋಗೀಶ್ ನಾರಾಯಣ್ ಜೊತೆಗೂಡಿ ನಿರ್ಮಾಣ ಮಾಡಿದ್ದ ಮಲ್ಲಿಕಾರ್ಜುನ್, ಆಗಲೇ ಅದ್ರಿಂದ ದೊಡ್ಡ ಮೊತ್ತದ ಹಣ ಕಳೆದುಕೊಂಡಿದ್ರಂತೆ. ಅದಾದ ಬಳಿಕ ಸಾರಥಿ ಸಿನಿಮಾ ಸಮಯದಿಂದ ದರ್ಶನ್ ಹಾಗೂ ದಿನಕರ್ ಜೊತೆ ಕೆಲಸ ಮಾಡಿದ್ದಾರೆ. ಆಗ ಡಿಸ್ಟ್ರಿಬ್ಯೂಷನ್ನಲ್ಲಿ ಲಾಸ್ ಆಗಿದ್ದಾರೆ. ನಡುವೆ ವಿಜಯನಗರದಲ್ಲಿ ಹೋಟೆಲ್ ಬ್ಯುಸಿನೆಸ್ಗೆ ಕೈ ಹಾಕಿ ಕೈ ಸುಟ್ಟಿಕೊಂಡಿದ್ರಂತೆ.
ನನ್ನ ಕೈ ಖಾಲಿ.. ಮಗನ ವಿದ್ಯಾಭ್ಯಾಸ ಜವಾಬ್ದಾರಿ ಪತ್ನಿಯದ್ದು
ಇಂದಿನ ಈ ಪ್ರೆಸ್ಮೀಟ್ ಕೂಡ ಪಿಆರ್ಓಗಳಿಂದ ನಡೀತಿದೆ. ಇದನ್ನ ನಡೆಸೋಕೂ ನನ್ನ ಬಳಿ ಕಾಸಿಲ್ಲ. ಕೈ ಖಾಲಿ ಇದೆ. ಸದ್ಯ ನನ್ನ ಮಗನ ವಿದ್ಯಾಭ್ಯಾಸದ ಕಂಪ್ಲೀಟ್ ಜವಾಬ್ದಾರಿ ನನ್ನ ಪತ್ನಿಯೇ ಹೊತ್ತಿದ್ದಾರೆ. ನನ್ನ ಅಣ್ಣ ಕೂಡ ಫ್ಯಾಮಿಲಿಗೆ ಬೆನ್ನೆಲುಬಾಗಿ ನಿಂತಿದ್ದಾರೆ.
ಧ್ರುವ ಸರ್ಜಾ–ದರ್ಶನ್ ನಡುವೆ ವೈಮನಸ್ಸು ಏಕೆ..?
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಡಿಬಾಸ್ ದರ್ಶನ್ ನಡುವೆ ವೈಮನಸ್ಸು ಮೂಡಿದ್ದು, ದಚ್ಚು ಮ್ಯಾನೇಜರ್ ಆದ ಮಲ್ಲಿ ಈ ಬಗ್ಗೆ ಗ್ಯಾರಂಟಿ ನ್ಯೂಸ್ ಜೊತೆ ಎಕ್ಸ್ಕ್ಲೂಸಿವ್ ಆಗಿ ಮಾತನಾಡಿದ್ದಾರೆ. ಇಂಡಸ್ಟ್ರಿಯಲ್ಲಿ ಸಾವಿರ ನಡೆಯುತ್ತೆ. ಎಲ್ಲವನ್ನೂ ಮುಕ್ತವಾಗಿ ಹೇಳಲಾಗಲ್ಲ. ಅವರ ನಡುವೆ ಏನಾಗಿದೆ ಅನ್ನೋದು ಅವರಿಬ್ಬರಿಗಷ್ಟೇ ಗೊತ್ತು ಎಂದಿದ್ದಾರೆ.
ನಿರ್ದೇಶನ, ನಿರ್ಮಾಣ, ವಿತರಣೆಗೆ ಗುಡ್ ಬೈ
ಚಿತ್ರರಂಗದಲ್ಲಿ ತಾನು ಕೂಡ ದರ್ಶನ್ ರೀತಿ ಒಬ್ಬ ನಿರ್ಮಾಪಕ, ವಿತರಕನಾಗಿ ದೊಡ್ಡ ಮಟ್ಟಕ್ಕೆ ಬೆಳೆಯಬೇಕು ಅಂತ ಕನಸು ಕಂಡಿದ್ದ ಮಲ್ಲಿ, ಅದ್ರಿಂದಲೇ ಸಾಕಷ್ಟು ಸಾಲಗಾರ ಆಗಿದ್ದಾರೆ. ಹಾಗಾಗಿ ವಾಪಸ್ ಆಗಿರೋ ಮಲ್ಲಿ ಮತ್ತೆ ಚಿತ್ರರಂಗದಲ್ಲಿ ನಿರ್ದೇಶನ, ನಿರ್ಮಾಣ ಆಗಲಿ ಅಥ್ವಾ ಸಿನಿಮಾ ವಿತರಣೆ ಆಗಲಿ ಮಾಡಲ್ಲವಂತೆ. ಚಿತ್ರರಂಗದ ಸಹವಾಸಲೇ ಸಾಕಪ್ಪ ಅನ್ನುವಂತೆ ಮಾತನಾಡಿದ್ದಾರೆ.
ಸೆಲೆಬ್ರಿಟಿ ಇವೆಂಟ್ ಮ್ಯಾನೇಜ್ಮೆಂಟ್ ಉದ್ಯಮ
ಇವೆಂಟ್ ಮ್ಯಾನೇಜ್ಮೆಂಟ್ ಕೆಲಸಕ್ಕೆ ಕೈ ಹಾಕುವ ಮಹತ್ವದ ಯೋಜನೆ ಸದ್ಯ ಮಲ್ಲಿ ಕೈಯಲ್ಲಿದೆ. ಅದಕ್ಕೆ ಸ್ನೇಹಿತರು ಕೂಡ ಕೈ ಜೋಡಿಸ್ತಿದ್ದು, ಸದ್ಯದಲ್ಲೇ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ಆರಂಭಿಸಲಿದ್ದಾರಂತೆ.
ದರ್ಶನ್ ಹೊರಬಂದ್ಮೇಲೆ ಪಾರ್ಟ್ ಟೈಂ ಜಾಬ್
ನಟ ದರ್ಶನ್ ಕೇಸ್ನಿಂದ ಖುಲಾಸೆ ಆಗಿ ಹೊರಬಂದ ಬಳಿಕ, ಅವರೊಟ್ಟಿಗೆ ಫುಲ್ ಟೈಂ ಮಾಡಲ್ಲ. ಪಾರ್ಟ್ ಟೈಂ ಜಾಬ್ ಮಾಡಿಕೊಂಡು ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ನಡೆಸ್ತೀನಿ ಎಂದಿದ್ದಾರೆ ಮಲ್ಲಿ.
23 ಮಂದಿ ಸಾಲ ಕೊಟ್ಟವ್ರ ಬಳಿ ಸೆಕೆಂಡ್ ಚಾನ್ಸ್
ಸುಮಾರು 23 ಮಂದಿ ಬಳಿ ಸಾಲ ಪಡೆದಿರೋ ಮಲ್ಲಿ ಅಸಲಿ ಸಾಲ ಆಗಲಿ, ಬಡ್ಡಿ ಆಗಲಿ, ಚಕ್ರ ಬಡ್ಡಿ ಆಗಲಿ ನೀಡಿಲ್ಲ. ಹಾಗಾಗಿ ವಾಪಸ್ ಆದ ಬಳಿಕ ಅಷ್ಟೂ ಮಂದಿ ಮನೆಗೆ ತೆರಳಿ, ಬದುಕೋಕೆ ಒಂದು ಅವಕಾಶ ಕೊಡಿ ಅಂತ ಅಂಗಲಾಚಿದ್ದಾರೆ. ಆದಷ್ಟು ಬೇಗ ದುಡಿದು ನಿಮ್ಮ ಸಾಲ ತೀರಿಸ್ತೀನಿ. ಭರವಸೆ ಇಡಿ ಎಂದಿದ್ದಾರೆ.
ಲೈಫ್ನಲ್ಲಿ ದೇವರು ಎಲ್ಲರಿಗೂ ಸೆಕೆಂಡ್ಸ್ ಚಾನ್ಸ್ ಅನ್ನೋದನ್ನ ಕೊಡ್ತಾರಂತೆ. ಅದೇ ರೀತಿ ಮಲ್ಲಿಗೂ ಆ ಚಾನ್ಸ್ ಸಿಕ್ಕಿದೆ. ಮಿಗಿಲಾಗಿ ಮನುಷ್ಯ ಕೆಟ್ಟಮೇಲೆ ಬದುಕೋದನ್ನ ಚೆನ್ನಾಗಿ ಕಲಿತಾನೆ ಅಂತಾರೆ. ಈತ ಕೆಟ್ಟಿದ್ದಾನೆ. ಈಗ ಬದುಕೋಕೆ ಬಂದಿದ್ದಾನೆ. ಆ ಬದುಕಿಗೆ ಪರಿಸ್ಥಿತಿಗಳು ಕೂಡ ಅನುಕೂಲಕರವಾಗಿವೆ. ಸಣ್ಣ ಮಗುವಿದ್ದಾಗ ಮಗನನ್ನ ಬಿಟ್ಟು ಹೋಗಿದ್ದ ಮಲ್ಲಿಗೆ ಈಗ 8ನೇ ತರಗತಿ ಮಗನಿದ್ದಾನೆ. ಇನ್ಮೇಲೆ ಆದ್ರೂ ಧೈರ್ಯ ಹಾಗೂ ಯುಕ್ತಿಯಿಂದ ಕೆಲಸ ಮಾಡಿ, ಆಗಿರೋ ಅನಾಹುತಗಳಿಗೆಲ್ಲಾ ನಷ್ಟ ಪರಿಹಾರ ಕಟ್ಟಿಕೊಟ್ಟು, ಸಕುಟುಂಬ ಪರಿವಾರ ಸಮೇತ ಸುಖ, ಶಾಂತಿ, ನೆಮ್ಮದಿಯಿಂದ ಬದುಕಿ ಬಾಳಲಿ ಅನ್ನೋದು ನಮ್ಮ ಆಶಯ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್




