ಜಾರ್ಖಂಡ್ನ ರಾಮಗಢ ಜಿಲ್ಲೆಯಲ್ಲಿ ಅಪರೂಪದ ಹೃದಯಸ್ಪರ್ಶಿ ಘಟನೆ ನಡೆದಿದೆ. ಕಾಡಾನೆಯೊಂದು ರೈಲ್ವೆ ಹಳಿಗಳ ಮೇಲೆ ತನ್ನ ಮರಿಗೆ ಜನ್ಮ ನೀಡಿದ್ದು, ಈ ಘಟನೆಯಿಂದಾಗಿ ರೈಲು ಸಂಚಾರವನ್ನು ಎರಡು ಗಂಟೆಗಳ ಕಾಲ ಸ್ಥಗಿತಗೊಳಿಸಲಾಯಿತು.
ಈ ಘಟನೆಯ ವಿಡಿಯೊವನ್ನು ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಅವರು ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದಾರೆ. “ಮಾನವ-ಪ್ರಾಣಿಗಳ ಸಾಮರಸ್ಯದ ಈ ಕ್ಷಣವನ್ನು ಹಂಚಿಕೊಳ್ಳಲು ಸಂತೋಷವಾಗಿದೆ,” ಎಂದು ಯಾದವ್ ತಮ್ಮ ಪೋಸ್ಟ್ನಲ್ಲಿ ಬರೆದಿದ್ದಾರೆ. ಜೊತೆಗೆ ಈ ಘಟನೆಯ ಎರಡು ಆಕರ್ಷಕ ವಿಡಿಯೊಗಳನ್ನು ಸಹ ಹಂಚಿಕೊಂಡಿದ್ದಾರೆ.
ಜೂನ್ 25 ರಂದು ಗರ್ಭಿಣಿಯಾಗಿದ್ದ ಕಾಡಾನೆಯೊಂದು ಹೆರಿಗೆ ನೋವಿನಿಂದ ರೈಲ್ವೆ ಹಳಿಗಳ ಮೇಲೆ ಮಲಗಿತ್ತು ಎಂಬ ಮಾಹಿತಿ ರಾಮಗಢದ ವಿಭಾಗೀಯ ಅರಣ್ಯ ಅಧಿಕಾರಿ (ಡಿಎಫ್ಒ) ನಿತೀಶ್ ಕುಮಾರ್ ಅವರಿಗೆ ತಲುಪಿತ್ತು. ಆನೆ ಮತ್ತು ಅದರ ಮರಿಗೆ ಯಾವುದೇ ತೊಂದರೆಯಾಗದಂತೆ ರಕ್ಷಿಸಲು, ರೈಲ್ವೆ ಸಂಚಾರವನ್ನು ತಕ್ಷಣವೇ ನಿಲ್ಲಿಸಬೇಕೆಂದು ಅವರು ರೈಲ್ವೆ ಅಧಿಕಾರಿಗಳಿಗೆ ಕೋರಿದರು. ಈ ಮಾಹಿತಿಯನ್ನು ಗಂಭೀರವಾಗಿ ಪರಿಗಣಿಸಿದ ರೈಲ್ವೆ ಸಿಬ್ಬಂದಿ, ರೈಲ್ವೆ ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸಿ, ಎಲ್ಲಾ ರೈಲುಗಳ ಸಂಚಾರವನ್ನು ಎರಡು ಗಂಟೆಗಳ ಕಾಲ ಸ್ಥಗಿತಗೊಳಿಸಿದರು. ಈ ಸಮಯದಲ್ಲಿ ಆನೆಯು ತನ್ನ ಮರಿಗೆ ಜನ್ಮ ನೀಡಿತ್ತು. ನಂತರ ತಾಯಿ-ಮಗು ಇಬ್ಬರೂ ಸುರಕ್ಷಿತವಾಗಿ ಕಾಡಿನತ್ತ ತೆರಳಿದವು.
ಈ ಘಟನೆಯು ರೈಲ್ವೆ ಸಿಬ್ಬಂದಿಯ ಸೂಕ್ಷ್ಮತೆ ಮತ್ತು ಮಾನವೀಯತೆಯನ್ನು ಎತ್ತಿ ತೋರಿಸಿತು. ನಿತೀಶ್ ಕುಮಾರ್ ಅವರು ಈ ಘಟನೆಯನ್ನು “ಪ್ರಾಣಿಗಳ ಜೀವ ರಕ್ಷಣೆಗೆ ತೆಗೆದುಕೊಂಡ ತಕ್ಷಣದ ಕ್ರಮ” ಎಂದು ಬಣ್ಣಿಸಿದ್ದಾರೆ. ಈ ಘಟನೆಯ ವಿಡಿಯೊದಲ್ಲಿ, ಆನೆಯು ತನ್ನ ನವಜಾತ ಮರಿಯೊಂದಿಗೆ ಕಾಡಿನತ್ತ ನಡೆಯುವ ದೃಶ್ಯವು ಎಲ್ಲರ ಮನಸ್ಸನ್ನು ಆಕರ್ಷಿಸಿದೆ.
ಕೇಂದ್ರ ಸಚಿವ ಭೂಪೇಂದರ್ ಯಾದವ್ ಅವರ ಈ ಪೋಸ್ಟ್, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರು ಈ ಮಾನವೀಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.





