ರಾಮನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಅವರಿಗೆ ಹೃದಯಾಘಾತವಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಮಾಹಿತಿ ಪ್ರಕಾರ, ಇಕ್ಬಾಲ್ ಹುಸೇನ್ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಆಸ್ಪತ್ರೆಗೆ ಭೇಟಿ ನೀಡಿ, ಇಕ್ಬಾಲ್ ಹುಸೇನ್ ಅವರ ಆರೋಗ್ಯ ವಿಚಾರಿಸಿದ್ದಾರೆ.
ಬಳಿಕ ಅವರ ಆರೋಗ್ಯ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಿಎಂ ಡಿಕೆ ಶಿವಕುಮಾರ್, ನಮ್ಮ ಸ್ನೇಹಿತ, ಶಾಸಕ ಇಕ್ಬಾಲ್ ಹುಸೇನ್ ಅವರಿಗೆ ಚೇಸ್ಟ್ ಪೇನ್ ಬಂದಿದೆ. ಅವರು ಈಗ ಆರೋಗ್ಯವಾಗಿದ್ದಾರೆ, ಡಾಕ್ಟರ್ ನೋಡಿದ್ದಾರೆ ಯಾರೂ ಸಹ ಗಾಬರಿ ಪಡ್ಕೋಬೇಕಾಗಿಲ್ಲ. ಡಾಕ್ಟರ್ ಹತ್ತಿರ ಮಾತಾಡಿದ್ದೇನೆ. ಸೋ ನತಿಂಗ್ ಟು ವರಿ ಎಂದಿದ್ದಾರೆ ಎಂದು ತಿಳಿಸಿದ್ದಾರೆ.
ಬಿಡದಿ ಪಾದಾಯಾತ್ರೆ ವಿಚಾರ ಕುರಿತು ಪ್ರತಿಕ್ರಿಯಿಸಿ, ನಾನು ಯಾರಿಗೂ ಉತ್ತರ ಕೊಡೋಕೆ ಹೋಗಲ್ಲ. ಹಿಂದೆ ಬಿಜೆಪಿ ಸರ್ಕಾರದಲ್ಲಿ ಹಾರೋಹಳ್ಳಿ ಟೌನ್, ಬಿಡದಿ ಟೌನ್ ಮಾಡಲಿಲ್ಲವ? ಬಿಡದಿ ಟೌನ್ ಶಿಪ್ ಮಾಡೋದಕ್ಕೆ ಯಾರು ಹೊರಟಿದ್ದು ಎಂದು ಪ್ರಶ್ನಿಸಿದ್ದಾರೆ. ವಿರೋಧಪಕ್ಷ ಇರೋದೆ ಟೀಕೆ ಮಾಡೋಕೆ. ಏನೇ ಒಳ್ಳೆಯದು ಮಾಡಿದ್ರು ಅದನ್ನು ತಡೆಯೋಕೆ ಅವರು ಇರೋದು. ಅವರ ಕೈಯಲ್ಲಿ ಮಾಡಲು ಆಗದೇ ಇರುವ ಕೆಲಸಗಳನ್ನೆಲ್ಲ ನಾವು ಮಾಡುತ್ತಿದ್ದೇವೆ ಎಂದಿದ್ದಾರೆ.
ಗ್ಯಾರಂಟಿ ಯೋಜನೆಗಳ ಕುರಿತು ಪ್ರತಿಕ್ರಿಯಿಸಿ, ಗ್ಯಾರಂಟಿಯನ್ನ ಪಡೆಯುತ್ತಿರುವವರು ಯಾರು. ಅವರ ಪೋಟೋ, ಐಡೆಂಟಿಫಿಕೇಷನ್ ಬೇಕು ಆಗ ಏನೋ ತರಾತುರಿಯಲ್ಲಿ ಯಾರದ್ದೋ ಪೋನ್ ನಂಬರ್ ಕೊಟ್ಟಿದ್ದಾರೆ. ಯಾರದ್ದೋ ಅಕೌಂಟ್ ಗೆ ದುಡ್ಡು ಹೋಗ್ತಿದೆ. ನಮಗೆ ನೇರವಾಗಿ ಅವರ ಅಕೌಂಟ್ ಗೆ ದುಡ್ಡು ಹೋಗಬೇಕು. ಯಾರೋ ದುಡ್ಡು ಡ್ರಾ ಮಾಡುತ್ತಿದ್ದಾರೆ. ಅದೆಲ್ಲ ದಾಖಲೆ ನಮ್ಮ ಬಳಿ ಇದೆ. ಕರ್ನಾಟಕದವರಿಗೆ ನಾವು ಈ ಗ್ಯಾರಂಟಿ ಕೊಡ್ತೀರೋದು. ಹೊರಗಡೆ ರಾಜ್ಯದವರಿಗೆ ಗ್ಯಾರಂಟಿ ಕೊಡುತ್ತಿಲ್ಲ ನಾವು. ಬಸ್ ನಲ್ಲಿ ಉಚಿತ ಪ್ರಯಾಣಕ್ಕೂ ಕರ್ನಾಟಕ ರಾಜ್ಯದಲ್ಲಿ ಯಾರಿಗೆ ವೋಟು ಇದೆ ಅವರಿಗೆ ಕೊಡಬೇಕು. ವೋಟು ಇಲ್ಲದವರಿಗೆ ಯಾಕೆ ಕೊಡಬೇಕು ನಾವು.? ಇಲ್ಲಿ ಯಾರು ಇದ್ದಾರೆ ಅವರಿಗೆ ಮಾತ್ರ ನಾವು ಅನುಕೂಲ ಮಾಡಬೇಕು ಎಂದಿದ್ದಾರೆ.
ಕ್ಯಾಬಿನೆಟ್ ನಲ್ಲಿ ಉಚಿತ ಪ್ರಯಾಣಕ್ಕೆ ಒಂದು ಐಡೆಂಟಿಟಿ ಕಾರ್ಡ್ ಕೊಡಬೇಕು ಅಂತ ತೀರ್ಮಾನಿಸಿದ್ದೇವೆ. ಇದು ಈ ಹಿಂದೆಯೇ ತೀರ್ಮಾನ ಆಗಿತ್ತು. ಅದನ್ನು ಸ್ಟ್ರೀಮ್ ಲೈನ್ ಮಾಡ್ತೀವಿ ಅಷ್ಟೇ. ಯಾರಿಗೂ ಯಾವ ಕಾರಣಕ್ಕೂ ಗ್ಯಾರಂಟಿ ನಿಲ್ಲಿಸಲ್ಲ. ಗ್ಯಾರಂಟಿ ನಿಲ್ಲಿಸೋದು ನಮ್ಮ ಕಾರ್ಯಕ್ರಮ ಅಲ್ಲ. ನಮ್ಮ ಗ್ಯಾರಂಟಿ ಇಡೀ ದೇಶಕ್ಕೆ ಮಾದರಿ. ಮಹಾರಾಷ್ಟ್ರ, ಮಧ್ಯಪ್ರದೇಶ, ಆಂಧ್ರಪ್ರದೇಶ ಸೇರಿದಂತೆ ಎಲೆಕ್ಷನ್ ಮಾಡಿದ ರಾಜ್ಯಗಳಲ್ಲಿ ನಮ್ಮ ಗ್ಯಾರಂಟಿ ತೆಗೆದುಕೊಂಡಿದ್ದಾರೆ. ಬೆಲೆ ಗಗನಕ್ಕೆ ಹೋಗಿ ಆದಾಯ ಪಾತಾಳ ಕ್ಕೆ ಹೋಯ್ತು ಅಂದರೂ ಗ್ಯಾರಂಟಿ ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.





