ಚಂಡೀಗಢ: ಹರಿಯಾಣದ ಗುರುಗ್ರಾಮದಲ್ಲಿ ಟೆನ್ನಿಸ್ ಆಟಗಾರ್ತಿಯಾಗಿದ್ದ ರಾಧಿಕಾ ಯಾದವ್ ಅವರನ್ನು ತಂದೆ ದೀಪಕ್ ಯಾದವ್ ಗುಂಡಿಕ್ಕಿ ಕೊಲೆ ಮಾಡಿರುವ ಪ್ರಕರಣಕ್ಕೆ ಈಗ ಸ್ಫೋಟಕ ಆಯಾಮ ಸಿಕ್ಕಿದೆ. ರಾಧಿಕಾ ಒಂದು ಮ್ಯೂಸಿಕ್ ಆಲ್ಬಂನಲ್ಲಿ ನಟಿಸಿದ್ದಕ್ಕೆ ತಂದೆಗೆ ಆಕ್ಷೇಪವಿದ್ದು, ಈ ವಿಷಯದಿಂದ ಉಂಟಾದ ಜಗಳವೇ ಕೊಲೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ, ರಾಧಿಕಾ ತನ್ನ ಸೆಕ್ಟರ್ 57ರಲ್ಲಿರುವ ಟೆನ್ನಿಸ್ ಅಕಾಡೆಮಿಯನ್ನು ಮುಚ್ಚಲು ತಂದೆಯ ಸೂಚನೆಯನ್ನು ಒಪ್ಪದಿರುವುದು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಹೆಚ್ಚು ನೋಡುತ್ತಿದ್ದಕ್ಕೆ ದೀಪಕ್ ಯಾದವ್ ಸಿಟ್ಟಾಗಿದ್ದ ಎಂಬ ಮಾಹಿತಿ ಬೆಳಕಿಗೆ ಬಂದಿತ್ತು. ಆದರೆ, ಇತ್ತೀಚಿನ ತನಿಖೆಯಲ್ಲಿ, ‘ಕರ್ವಾನ್’ ಎಂಬ ಮ್ಯೂಸಿಕ್ ಆಲ್ಬಂನಲ್ಲಿ ರಾಧಿಕಾ ರೊಮ್ಯಾಂಟಿಕ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ತಂದೆಗೆ ಆಕ್ಷೇಪಕ್ಕೆ ಮುಖ್ಯ ಕಾರಣವಾಗಿತ್ತು ಎಂದು ತಿಳಿದುಬಂದಿದೆ.
ಮ್ಯೂಸಿಕ್ ಆಲ್ಬಂ ವಿವಾದ
ರಾಧಿಕಾ ಯಾದವ್ ‘ಕರ್ವಾನ್’ ಎಂಬ ಮ್ಯೂಸಿಕ್ ಆಲ್ಬಂನಲ್ಲಿ ನಟ ಇನಾಂ ಜೊತೆ ರೊಮ್ಯಾಂಟಿಕ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಳು. ಈ ಆಲ್ಬಂನನ್ನು ಜೀಶನ್ ಅಹ್ಮದ್ ನಿರ್ಮಾಣ ಮಾಡಿದ್ದು, LLF ರೆಕಾರ್ಡ್ಸ್ ಲೇಬಲ್ನಡಿ 2024ರಲ್ಲಿ ಬಿಡುಗಡೆಯಾಗಿತ್ತು. ಈ ವಿಡಿಯೋದಲ್ಲಿ ರಾಧಿಕಾ ಅವರ ಪಾತ್ರಕ್ಕೆ ತಂದೆ ದೀಪಕ್ ಯಾದವ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಆಕೆಯಿಂದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕಲು ಸೂಚಿಸಿದ್ದರಾದರೂ, ರಾಧಿಕಾ ಒಪ್ಪಿರಲಿಲ್ಲ. ಈ ವಿಷಯವು ತಂದೆ-ಮಗಳ ನಡುವೆ ಆಗಾಗ ಜಗಳಕ್ಕೆ ಕಾರಣವಾಗಿತ್ತು.
ಮಾಜಿ ಬ್ಯಾಂಕ್ ಉದ್ಯೋಗಿಯಾಗಿದ್ದ ದೀಪಕ್ ಯಾದವ್ಗೆ, ರಾಧಿಕಾ ತನ್ನ ಟೆನ್ನಿಸ್ ಅಕಾಡೆಮಿಯಿಂದ ಸಿಗುತ್ತಿದ್ದ ಜನಪ್ರಿಯತೆಯೂ ಇಷ್ಟವಿರಲಿಲ್ಲ. ಆಕೆಯ ಅಕಾಡೆಮಿಯನ್ನು ಮುಚ್ಚುವಂತೆ ಸೂಚಿಸಿದ್ದರೂ, ರಾಧಿಕಾ ನಿರಾಕರಿಸಿದ್ದಳು. ಇದರ ಜೊತೆಗೆ, ಮ್ಯೂಸಿಕ್ ಆಲ್ಬಂ ವಿವಾದವು ದೀಪಕ್ರ ಕೋಪವನ್ನು ಇನ್ನಷ್ಟು ಹೆಚ್ಚಿಸಿತು. ಗುರುವಾರ ರಾಧಿಕಾ ಮನೆಯಲ್ಲಿ ಅಡುಗೆ ಮಾಡುತ್ತಿದ್ದ ವೇಳೆ, ದೀಪಕ್ ಯಾದವ್ ಗುಂಡಿನ ದಾಳಿ ನಡೆಸಿ ಆಕೆಯನ್ನು ಕೊಲೆಗೈದಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.
ರಾಧಿಕಾ ಯಾದವ್ರ ಸಾಧನೆ:
ರಾಧಿಕಾ ಯಾದವ್ (ಮಾರ್ಚ್ 23, 2000 – ನವೆಂಬರ್ 4, 2024) ಭಾರತೀಯ ಟೆನ್ನಿಸ್ನ ಉದಯೋನ್ಮುಖ ತಾರೆಯಾಗಿದ್ದಳು. ಐಟಿಎಫ್ ಮಹಿಳಾ ಡಬಲ್ಸ್ನಲ್ಲಿ 113ನೇ ಶ್ರೇಯಾಂಕವನ್ನು ಪಡೆದಿದ್ದ ಆಕೆ, ಹರಿಯಾಣದ ಮಹಿಳಾ ಡಬಲ್ಸ್ ಶ್ರೇಯಾಂಕದಲ್ಲಿ ಐದನೇ ಸ್ಥಾನದಲ್ಲಿದ್ದಳು. ಸ್ಕಾಟಿಷ್ ಹೈ ಇಂಟರ್ನ್ಯಾಷನಲ್ ಶಾಲೆಯಲ್ಲಿ 2018ರಲ್ಲಿ ವಾಣಿಜ್ಯದಲ್ಲಿ 12ನೇ ತರಗತಿಯನ್ನು ಪೂರ್ಣಗೊಳಿಸಿದ್ದ ರಾಧಿಕಾ, ಗುರುಗ್ರಾಮದ ಸೆಕ್ಟರ್ 57ರಲ್ಲಿ ಮಕ್ಕಳಿಗೆ ತರಬೇತಿ ನೀಡಲು ಟೆನ್ನಿಸ್ ಅಕಾಡೆಮಿಯನ್ನು ಆರಂಭಿಸಿದ್ದಳು. ಆಕೆಯ ಈ ಸಾಧನೆಗಳು ಆಕೆಯನ್ನು ಯುವ ಆಟಗಾರ್ತಿಯರಿಗೆ ಸ್ಫೂರ್ತಿಯಾಗಿಸಿದ್ದವು.
ಬಂಧನಕ್ಕೊಳಗಾದ ದೀಪಕ್ ಯಾದವ್ರಿಂದ ವಿಚಾರಣೆಯಲ್ಲಿ ಹೆಚ್ಚಿನ ಮಾಹಿತಿಗಳು ಬೆಳಕಿಗೆ ಬಂದಿವೆ. ಪೊಲೀಸರು ಈಗ ಮ್ಯೂಸಿಕ್ ಆಲ್ಬಂನಿಂದ ಉಂಟಾದ ವಿವಾದವನ್ನು ಕೊಲೆಗೆ ಮುಖ್ಯ ಕಾರಣವಾಗಿ ಗುರಿತಿಸಿದ್ದಾರೆ. ಈ ಘಟನೆಯು ಗುರುಗ್ರಾಮದಲ್ಲಿ ಆಘಾತವನ್ನುಂಟು ಮಾಡಿದ್ದು, ರಾಧಿಕಾ ಯಾದವ್ರ ದುರಂತ ಸಾವು ಕ್ರೀಡಾಲೋಕದಲ್ಲಿ ಶೋಕ ಮೂಡಿಸಿದೆ.





