ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಆರಂಭಕ್ಕೂ ಮುನ್ನವೇ ಬಾಂಗ್ಲಾದೇಶದ ಸ್ಟಾರ್ ವೇಗಿ ಮುಸ್ತಫಿಝುರ್ ರೆಹಮಾನ್ ಅವರಿಗೆ ದೊಡ್ಡ ಆಫರ್ ಬಂದಿದೆ. ಕೋಟಿ ಕೋಟಿ ಹಣಕ್ಕೆ ಕೆಕೆಆರ್ ತಂಡಕ್ಕೆ ಸೇರ್ಪಡೆಯಾಗಿದ್ದ ಅವರು, ಅನಿರೀಕ್ಷಿತವಾಗಿ ತಂಡದಿಂದ ಹೊರಬಿದ್ದಿದ್ದಾರೆ. ಆದರೆ, ಇದೀಗ ಅವರಿಗೆ ಪಾಕಿಸ್ತಾನ್ ಸೂಪರ್ ಲೀಗ್ (PSL) ಕಡೆಯಿಂದ ಬೃಹತ್ ಆಫರ್ ಬಂದಿರುವುದು ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಕೆಕೆಆರ್ನಿಂದ ಬಿಡುಗಡೆ: ಕಾರಣವೇನು?
ಇತ್ತೀಚೆಗೆ ನಡೆದ ಐಪಿಎಲ್ ಮಿನಿ ಹರಾಜಿನಲ್ಲಿ 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಬಂದಿದ್ದ ಮುಸ್ತಫಿಝುರ್ ಅವರನ್ನು ಕೊಲ್ಕತ್ತಾ ನೈಟ್ ರೈಡರ್ಸ್ (KKR) ಫ್ರಾಂಚೈಸಿಯು ಭಾರಿ ಪೈಪೋಟಿಯ ನಡುವೆ 9.2 ಕೋಟಿ ರೂ. ನೀಡಿ ಖರೀದಿಸಿತ್ತು. ಆದರೆ, ಒಪ್ಪಂದ ನಡೆದ ಕೆಲವೇ ದಿನಗಳಲ್ಲಿ ಬಿಸಿಸಿಐ (BCCI) ಮಧ್ಯಪ್ರವೇಶಿಸಿ ಅವರನ್ನು ತಂಡದಿಂದ ಕೈಬಿಡುವಂತೆ ಕೆಕೆಆರ್ಗೆ ಸೂಚನೆ ನೀಡಿತು.
ಇದಕ್ಕೆ ಪ್ರಮುಖ ಕಾರಣ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ದಾಳಿ ಮತ್ತು ಹತ್ಯೆಗಳು. ಈ ಘಟನೆಗಳನ್ನು ಖಂಡಿಸಿ ಭಾರತದಲ್ಲಿ ಬಾಂಗ್ಲಾ ಆಟಗಾರರ ವಿರುದ್ಧ ವ್ಯಾಪಕ ಪ್ರತಿಭಟನೆಗಳು ವ್ಯಕ್ತವಾಗಿದ್ದವು. ಪ್ರತಿಭಟನಾಕಾರರು ಮುಸ್ತಫಿಝುರ್ ಅವರನ್ನು ಮೈದಾನಕ್ಕಿಳಿಯಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಬಿಸಿಸಿಐ, ಭದ್ರತೆ ಮತ್ತು ಸಾರ್ವಜನಿಕ ಭಾವನೆಗಳ ದೃಷ್ಟಿಯಿಂದ ಅವರನ್ನು ಐಪಿಎಲ್ನಿಂದ ಹೊರಗಿಡುವ ನಿರ್ಧಾರ ತೆಗೆದುಕೊಂಡಿತು.
ಪಿಎಸ್ಎಲ್ನಿಂದ ಬಂದ ಬಿಗ್ ಆಫರ್:
ಭಾರತದಲ್ಲಿ ಐಪಿಎಲ್ನಿಂದ ಹೊರಬಂದ ಬೆನ್ನಲೆ ಬೆನ್ನಲ್ಲೇ ಮುಸ್ತಫಿಝುರ್ ಅವರಿಗೆ ಪಾಕಿಸ್ತಾನದ ಕಡೆಯಿಂದ ಆಹ್ವಾನ ಬಂದಿದೆ. ಪಾಕಿಸ್ತಾನ್ ಸೂಪರ್ ಲೀಗ್ನ (PSL) ಹಲವು ಫ್ರಾಂಚೈಸಿಗಳು ಈ ವೇಗಿಯನ್ನು ಸೆಳೆಯಲು ಮುಂದಾಗಿವೆ. ವರದಿಗಳ ಪ್ರಕಾರ, ಪಿಎಸ್ಎಲ್ನ ಕೆಲವು ಪ್ರಮುಖ ತಂಡಗಳು ಮುಸ್ತಫಿಝುರ್ ಅವರನ್ನು ಸಂಪರ್ಕಿಸಿ ತಮ್ಮ ಲೀಗ್ನಲ್ಲಿ ಆಡುವಂತೆ ಆಫರ್ ನೀಡಿವೆ.
ಮುಸ್ತಫಿಝುರ್ ಕೂಡ ಈ ಆಫರ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಈಗಾಗಲೇ ಪಿಎಸ್ಎಲ್ ಹರಾಜಿಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ ಎನ್ನಲಾಗಿದೆ. ಜನವರಿ 8 ರಂದು ಪಾಕಿಸ್ತಾನ್ ಸೂಪರ್ ಲೀಗ್ನ ಆಟಗಾರರ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಅಲ್ಲಿ ಅವರು ಭಾರಿ ಮೊತ್ತಕ್ಕೆ ಮಾರಾಟವಾಗುವ ಸಾಧ್ಯತೆ ಇದೆ.
ಐಪಿಎಲ್ನಿಂದ ಹೊರಬಿದ್ದ ನಂತರ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಮತ್ತು ಭಾರತದ ನಡುವೆ ಕ್ರಿಕೆಟ್ ಸಂಬಂಧ ಹದಗೆಡುತ್ತಿದೆ. ಈ ನಡುವೆ ಮುಸ್ತಫಿಝುರ್ ಪಾಕಿಸ್ತಾನದ ಲೀಗ್ ಆರಿಸಿಕೊಂಡಿರುವುದು ಭಾರಿ ಚರ್ಚೆಗೆ ಕಾರನವಾಗಬಹುದು. ಒಟ್ಟಾರೆಯಾಗಿ, ಐಪಿಎಲ್ನ 9.2 ಕೋಟಿ ರೂ. ನಷ್ಟವನ್ನು ಪಿಎಸ್ಎಲ್ ಮೂಲಕ ತುಂಬಿಕೊಳ್ಳಲು ಬಾಂಗ್ಲಾ ವೇಗಿ ಸಜ್ಜಾಗಿದ್ದಾರೆ.





