ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಟಿಕೆಟ್ಗಳನ್ನು ಹೆಚ್ಚಿನ ಬೆಲೆಗೆ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಬೃಹತ್ ಜಾಲವನ್ನು ಬೆಂಗಳೂರು ಸಿಸಿಬಿ ಪೊಲೀಸರು ಭೇದಿಸಿದ್ದಾರೆ. ಈ ದಂಧೆಯಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಸದಸ್ಯ ಗಣೇಶ್ ಹರಿಕೇಶ್ ಎಂಬುವರ ಹೆಸರು ಬೆಳಕಿಗೆ ಬಂದಿದೆ. ಆರ್ಸಿಬಿ ಟಿಕೆಟ್ ನಿರ್ವಹಣೆ ಹೊತ್ತಿರುವ ಡಿಎನ್ಎ ಎಂಟರ್ಟೈನ್ಮೆಂಟ್ ನೆಟ್ವರ್ಕ್ಸ್ ಸಂಸ್ಥೆಗೆ ಸಿಸಿಬಿ ನೋಟಿಸ್ ಜಾರಿ ಮಾಡಿದೆ.
ಪೊಲೀಸರು ಚಂದ್ರಶೇಖರ್ ಪಿ. (49 ವರ್ಷ) ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಇವರು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶ್ರೀ ಲಕ್ಷ್ಮಿ ಕ್ಯಾಟರರ್ಸ್ ನಲ್ಲಿ ಕ್ಯಾಂಟೀನ್ ಕೆಲಸಗಾರರಾಗಿ (ಕ್ಯಾಪ್ಟನ್) ಕೆಲಸ ಮಾಡುತ್ತಿದ್ದರು. ವಿಚಾರಣೆ ವೇಳೆ ಚಂದ್ರಶೇಖರ್ ಕೆಎಸ್ಸಿಎ ಸದಸ್ಯ ಗಣೇಶ್ ಹರಿಕೇಶ್ ಹೆಸರನ್ನು ಬಹಿರಂಗಪಡಿಸಿದ್ದಾನೆ. ಗಣೇಶ್ ಪ್ರಸ್ತುತ ತಪ್ಪಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ದಂಧೆ ಹೇಗೆ ನಡೆಯುತ್ತಿತ್ತು?
- ಗಣೇಶ್ ಹರಿಕೇಶ್ ಸ್ವಸ್ತಿಕ್ ಹೆವಿ ಇಂಜಿನಿಯರಿಂಗ್ ಅಂಡ್ ಇಂಡಸ್ಟ್ರಿಯಲ್ ಆಟೋಮೋಟಿವ್ ಮತ್ತು ಧರಣಿ ಕಂಪ್ಯೂಟರ್ಸ್ ಎಂಬ ಎರಡು ಖಾಸಗಿ ಕಂಪನಿಗಳ ಹೆಸರಿನಲ್ಲಿ ಆನ್ಲೈನ್ (ಟಿಕೆಟ್ಜೀನಿ ಮೂಲಕ) ದೊಡ್ಡ ಪ್ರಮಾಣದಲ್ಲಿ ಟಿಕೆಟ್ಗಳನ್ನು ಖರೀದಿಸುತ್ತಿದ್ದ.
- ಈ ಟಿಕೆಟ್ಗಳನ್ನು ಚಂದ್ರಶೇಖರ್ ಮೂಲಕ ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು. ಉದಾಹರಣೆಗೆ, ₹15,000 ಬೆಲೆಯ ಟಿಕೆಟ್ ಅನ್ನು ₹19,000ಕ್ಕೆ ಮಾರಾಟ ಮಾಡುತ್ತಿದ್ದರು.
- ಈಗಾಗಲೇ RCB vs SRH ಪಂದ್ಯಕ್ಕೆ 81 ಟಿಕೆಟ್ಗಳನ್ನು ಬ್ಲ್ಯಾಕ್ನಲ್ಲಿ ಮಾರಾಟ ಮಾಡಲಾಗಿದೆ. RCB vs LSG ಪಂದ್ಯಕ್ಕೆ 100ಕ್ಕೂ ಹೆಚ್ಚು ಟಿಕೆಟ್ಗಳನ್ನು ಸಿದ್ಧಪಡಿಸಿಕೊಂಡಿದ್ದರು.
- ಒಟ್ಟಾರೆ 181 ಟಿಕೆಟ್ಗಳು (ಸುಮಾರು ₹17.5 ಲಕ್ಷ ಮೌಲ್ಯ) ಅಕ್ರಮವಾಗಿ ಖರೀದಿಸಿ ಮಾರಾಟ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಡಿಎನ್ಎ ಸಂಸ್ಥೆಗೆ ಶಾಕ್ :
ಟಿಕೆಟ್ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ಡಿಎನ್ಎ ಎಂಟರ್ಟೈನ್ಮೆಂಟ್ ನೆಟ್ವರ್ಕ್ಸ್ ಸಂಸ್ಥೆಗೆ ಸಿಸಿಬಿ ನೋಟಿಸ್ ನೀಡಿದೆ. ಟಿಕೆಟ್ಗಳು ಆರೋಪಿಗಳ ಕೈಗೆ ಹೇಗೆ ತಲುಪಿದವು ಎಂಬುದನ್ನು ತಿಳಿಯಲು ತನಿಖೆ ನಡೆಸಲಾಗುತ್ತಿದೆ. ಎರಡು ಖಾಸಗಿ ಕಂಪನಿಗಳ ಮ್ಯಾನೇಜಿಂಗ್ ಡೈರೆಕ್ಟರ್ಗಳನ್ನೂ ವಿಚಾರಣೆಗೆ ಒಳಪಡಿಸಲಾಗಿದೆ.
ಪೊಲೀಸರು ಈಗಾಗಲೇ ಹಲವು ಪ್ರಕರಣಗಳನ್ನು ದಾಖಲಿಸಿದ್ದು, ದಂಧೆಯ ಮೂಲವನ್ನು ಪತ್ತೆಹಚ್ಚುವಲ್ಲಿ ಸಕ್ರಿಯರಾಗಿದ್ದಾರೆ. ಕಾರ್ಪೊರೇಟ್ ಕೋಟಾ ಲೂಪ್ಹೋಲ್ ಅನ್ನು ಬಳಸಿಕೊಂಡು ಈ ಅಕ್ರಮ ನಡೆಯುತ್ತಿತ್ತು ಎಂದು ತನಿಖೆ ಬಹಿರಂಗಪಡಿಸಿದೆ.
ಫ್ಯಾನ್ಗಳು ಟಿಕೆಟ್ಗಳನ್ನು ಅಧಿಕೃತ ಮೂಲಗಳಿಂದ ಮಾತ್ರ ಖರೀದಿಸುವಂತೆ ಪೊಲೀಸರು ಸಲಹೆ ನೀಡಿದ್ದಾರೆ. ಈ ಪ್ರಕರಣವು ಐಪಿಎಲ್ ಟಿಕೆಟ್ ವ್ಯವಸ್ಥೆಯಲ್ಲಿ ಇನ್ನಷ್ಟು ಕಟ್ಟುನಿಟ್ಟಿನ ನಿಯಂತ್ರಣಕ್ಕೆ ಕಾರಣವಾಗುವ ಸಾಧ್ಯತೆ ಇದೆ.





