ಉತ್ತರ ಪ್ರದೇಶದ ಜಾಲೌನ್ ಜಿಲ್ಲೆಯಲ್ಲಿ ನಡೆದ ದುರಂತ ಘಟನೆಯೊಂದು ಪೊಲೀಸ್ ಇಲಾಖೆಯನ್ನೇ ಬೆಚ್ಚಿ ಬೀಳಿಸಿದೆ. ಕುಠೌಂಡ್ ಠಾಣೆಯಲ್ಲಿ ಪ್ರಭಾವಿ ಇನ್ಸ್ಪೆಕ್ಟರ್ ಅರುಣ್ ಕುಮಾರ್ ರೈ ಎಂಬುವವರು ತಮ್ಮ ರಿವಾಲ್ವರ್ನಿಂದ ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ ಈ ಸಾವಿನ ಹಿಂದೆ ದೊಡ್ಡ ರಹಸ್ಯವೊಂದು ಬಯಲಾಗಿದೆ. ಇನ್ಸ್ಪೆಕ್ಟರ್ ಅರುಣ್ ಕುಮಾರ್ ರೈ ಸಾವಿನ ಪ್ರಕರಣದ ತನಿಖೆ ವೇಳೆ ಮಹಿಳಾ ಕಾನ್ಸ್ಟೆಬಲ್ ಮೀನಾಕ್ಷಿ ಶರ್ಮಾ ಅವರೊಂದಿಗೆ ಸಂಬಂಧ ಹೊಂದಿದ್ದರು ಎಂಬ ಮಾಹಿತಿ ಬಹಿರಂಗವಾಗಿದೆ.
ಘಟನೆಯ ವಿವರ
ಪೊಲೀಸರ ಪ್ರಕಾರ, ಜಾಲೌನ್ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಇನ್ಸ್ಪೆಕ್ಟರ್ ಅರುಣ್ ಕುಮಾರ್ ರೈ ಅವರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಇದು ಆತ್ಮಹತ್ಯೆಯೋ ಅಥವಾ ಸಾವಿಗೆ ಬೇರೆ ಕಾರಣವಿದೆಯೋ ಎಂಬುದರ ಬಗ್ಗೆ ಗೊಂದಲವಿತ್ತು. ಆದರೆ ಈ ಪ್ರಕರಣದ ತನಿಖೆ ಮುಂದುವರೆದಂತೆ ಹಲವು ಮಾಹಿತಿಗಳು ಹೊರಬಂದಿವೆ. ತನಿಖಾಧಿಕಾರಿಗಳು ಅರುಣ್ ಕುಮಾರ್ ಅವರ ಮೊಬೈಲ್ ಕರೆ ವಿವರಗಳು ಹಾಗೂ ಸಂಪರ್ಕ ವಿವರವನ್ನು ಪರಿಶೀಲಿಸಿದಾಗ, ಮಹಿಳಾ ಪೇದೆ ಮೀನಾಕ್ಷಿ ಶರ್ಮಾ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು ಎಂಬುದು ಬೆಳಕಿಗೆ ಬಂದಿದೆ.
ಮೀನಾಕ್ಷಿಗೆ ಕರೆ ಮಾಡಿದ್ದ ಇನ್ಸ್ ಪೆಕ್ಟರ್ ಅರುಣ್
ಅರುಣ್ ಕುಮಾರ್ ಅವರು ಮೀನಾಕ್ಷಿಗೆ 100ಕ್ಕೂ ಹೆಚ್ಚು ಬಾರಿ ಕರೆ ಮಾಡಿರುವ ದಾಖಲೆಗಳು ಲಭ್ಯವಾಗಿವೆ. ಇದರೊಂದಿಗೆ, ಮೀನಾಕ್ಷಿ ಶರ್ಮಾ ಅವರ ಮೊಬೈಲ್ ಫೋನ್ ಪರಿಶೀಲನೆಯ ವೇಳೆ, ಅರುಣ್ ಮಾತ್ರವಲ್ಲದೆ ವಿವಿಧ ಜಿಲ್ಲೆಗಳ ಸಬ್ ಇನ್ಸ್ಪೆಕ್ಟರ್ಗಳು, ಇನ್ಸ್ಪೆಕ್ಟರ್ಗಳು ಹಾಗೂ ಕೆಲ ಪುರುಷ ಪೇದೆಗಳೊಂದಿಗೆ ನಡೆಸಿದ ವಿಡಿಯೋ ಕಾಲ್ಗಳ ರೆಕಾರ್ಡಿಂಗ್ಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವಿಡಿಯೋ ಸಂಭಾಷಣೆಗಳನ್ನು ಮೀನಾಕ್ಷಿ ಉದ್ದೇಶಪೂರ್ವಕವಾಗಿ ಸಂಗ್ರಹಿಸಿಕೊಂಡಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.
ಪೊಲೀಸರಿಗೆ ಬ್ಲಾಕ್ ಮೇಲ್ ಮಾಡಿ ಹಣ ವಸೂಲಿ
ಈ ರೆಕಾರ್ಡಿಂಗ್ಗಳನ್ನು ಆಧಾರವಾಗಿ ಬಳಸಿಕೊಂಡು ಕೆಲ ಪೊಲೀಸ್ ಅಧಿಕಾರಿಗಳಿಗೆ ಬ್ಲಾಕ್ಮೇಲ್ ಮಾಡಿ ಹಣ ವಸೂಲಿ ಮಾಡಲಾಗಿದೆ ಎಂಬ ಗಂಭೀರ ಆರೋಪವಿದೆ. ಮೃತ ಇನ್ಸ್ಪೆಕ್ಟರ್ ಅರುಣ್ ಕುಮಾರ್ ರೈ ಅವರ ಬಳಿ ಸುಮಾರು 25 ಲಕ್ಷ ರೂಪಾಯಿ ಹಣದ ಬೇಡಿಕೆ ಇಡಲಾಗಿತ್ತು ಎಂಬ ಮಾಹಿತಿ ತನಿಖೆಯಲ್ಲಿ ಹೊರಬಂದಿದೆ. ಹಣದ ಒತ್ತಡ ಮತ್ತು ಮಾನಸಿಕ ಕಿರುಕುಳವೇ ಅರುಣ್ ಕುಮಾರ್ ಅವರ ಆತ್ಮಹತ್ಯೆಗೆ ಕಾರಣವಾಗಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.





