ನ್ಯೂಯಾರ್ಕ್: ಭಾರತದ ಶ್ರೀಮಂತ ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಯ ಪ್ರತೀಕವಾಗಿರುವ ಅಪರೂಪದ ಮೂರು ಶಿಲ್ಪಗಳು ದಶಕಗಳ ನಂತರ ಮತ್ತೆ ಸ್ವದೇಶಕ್ಕೆ ಮರಳಲು ಸಿದ್ಧವಾಗಿವೆ. ದಕ್ಷಿಣ ಭಾರತದ ವಿವಿಧ ದೇವಾಲಯಗಳಿಂದ ಅಕ್ರಮವಾಗಿ ಕಳ್ಳಸಾಗಣೆ ಮಾಡಲಾಗಿದ್ದ ವಿಜಯನಗರ ಕಾಲದ ಸಂತ ಸುಂದರರ್ ವಿಗ್ರಹ ಸೇರಿ ಮೂರು ಪುರಾತನ ಶಿಲ್ಪಗಳನ್ನು ಭಾರತಕ್ಕೆ ಹಸ್ತಾಂತರಿಸುವ ನಿರ್ಧಾರವನ್ನು ಅಮೆರಿಕ ಕೈಗೊಂಡಿದೆ.
ವಾಷಿಂಗ್ಟನ್ ಡಿಸಿಯಲ್ಲಿ ಇರುವ ಸ್ಮಿತ್ಸೋನಿಯನ್ ಸಂಸ್ಥೆಯ ರಾಷ್ಟ್ರೀಯ ಏಷ್ಯನ್ ಕಲಾ ವಸ್ತುಸಂಗ್ರಹಾಲಯವು ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದು, ಶಿಲ್ಪಗಳ ಮೂಲ, ಕಳ್ಳಸಾಗಣೆ ಹಿನ್ನೆಲೆ ಮತ್ತು ದಾಖಲೆಗಳನ್ನು ಆಧರಿಸಿ ಕಠಿಣ ಸಂಶೋಧನೆ ನಡೆಸಿದ ಬಳಿಕವೇ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.
ಯಾವೆಲ್ಲ ಶಿಲ್ಪಗಳು ವಾಪಸ್?
ಸ್ವದೇಶಕ್ಕೆ ಮರಳಲಿರುವ ಮೂರು ಶಿಲ್ಪಗಳು ವಿವಿಧ ಕಾಲಘಟ್ಟಗಳ ಶಿಲ್ಪಕಲೆಯ ಶ್ರೇಷ್ಠ ಉದಾಹರಣೆಗಳಾಗಿವೆ. ಮೊದಲನೆಯದು, ಚೋಳರ ಕಾಲದ (ಕ್ರಿ.ಶ. 990ರ ಅವಧಿಯ) ಶಿವ ನಟರಾಜ ವಿಗ್ರಹ. ಇದು ತಮಿಳುನಾಡಿನ ತಂಜಾವೂರು ಜಿಲ್ಲೆಯ ತಿರುತ್ತುರೈಪ್ಪುಂಡಿ ತಾಲೂಕಿನ ಭಾವ ಔಷಧೇಶ್ವರ ದೇಗುಲಕ್ಕೆ ಸೇರಿದ್ದ ಅಮೂಲ್ಯ ಶಿಲ್ಪವಾಗಿದೆ. ಎರಡನೆಯದು, 12ನೇ ಶತಮಾನದ ಸೋಮಸ್ಕಂದ ವಿಗ್ರಹ, ಇದು ಮಣ್ಣರ್ಕುಡಿ ತಾಲೂಕಿನ ಅಲತ್ತೂರು ಗ್ರಾಮದ ವಿಶ್ವನಾಥ ದೇಗುಲಕ್ಕೆ ಸೇರಿದದ್ದಾಗಿದೆ. ಮೂರನೆಯದು, ವಿಜಯನಗರ ಕಾಲದ (16ನೇ ಶತಮಾನ) ಪರವಯೀ ಸಮೇತ ಸಂತ ಸುಂದರರ್ ವಿಗ್ರಹ, ಇದು ಕಲ್ಲಕುರುಚ್ಚಿ ತಾಲೂಕಿನ ಶಿವ ದೇವಸ್ಥಾನದಿಂದ ಕಳ್ಳಸಾಗಣೆ ಮಾಡಲಾಗಿತ್ತು.
ಈ ಮೂರು ಶಿಲ್ಪಗಳೂ ಧಾರ್ಮಿಕ ಮಹತ್ವ ಮಾತ್ರವಲ್ಲ, ಶಿಲ್ಪಕಲೆಯ ದೃಷ್ಟಿಯಿಂದಲೂ ಅತ್ಯಂತ ಅಪರೂಪದವುಗಳಾಗಿವೆ.
ಕಳ್ಳತನ ಮತ್ತು ಕಳ್ಳಸಾಗಣೆಯ ಹಿನ್ನೆಲೆ
ಶಿವ ನಟರಾಜ ವಿಗ್ರಹದ ಛಾಯಾಚಿತ್ರವನ್ನು 1957ರಲ್ಲಿ ತೆಗೆಯಲಾಗಿದ್ದು, ನಂತರ 2002ರಲ್ಲಿ ಅದು ನ್ಯೂಯಾರ್ಕ್ನ ವಸ್ತುಸಂಗ್ರಹಾಲಯಕ್ಕೆ ತಲುಪಿರುವ ದಾಖಲೆಗಳಿವೆ. ಸೋಮಸ್ಕಂದ ಮತ್ತು ಸಂತ ಸುಂದರರ್ ವಿಗ್ರಹಗಳ ಛಾಯಾಚಿತ್ರಗಳನ್ನು ಕ್ರಮವಾಗಿ 1559 ಮತ್ತು 1956ರಲ್ಲಿ ದಾಖಲಿಸಲಾಗಿತ್ತು. ಈ ಎರಡೂ ಶಿಲ್ಪಗಳನ್ನು 1987ರಲ್ಲಿ ಇತರ ಸುಮಾರು 1,000 ವಸ್ತುಗಳ ಜೊತೆಗೆ ವಿದೇಶಿ ವಸ್ತುಸಂಗ್ರಹಾಲಯಕ್ಕೆ ಮಾರಾಟ ಮಾಡಲಾಗಿದೆ ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಈ ಶಿಲ್ಪಗಳ ಮೂಲಕ್ಕೆ ಸಂಬಂಧಿಸಿದ ಹಳೆಯ ಛಾಯಾಚಿತ್ರಗಳು ಫ್ರೆಂಚ್ ಇನ್ಸ್ಟಿಟ್ಯೂಟ್ ಆಫ್ ಪಾಂಡಿಚೇರಿ ಸಂಸ್ಥೆಯ ಫೋಟೊ ಗ್ಯಾಲರಿಯಲ್ಲಿ ಲಭ್ಯವಾಗಿದ್ದು, ಅವು ಸಂಶೋಧನೆಗೆ ಪ್ರಮುಖ ಸಾಕ್ಷ್ಯಗಳಾಗಿ ಕಾರ್ಯನಿರ್ವಹಿಸಿವೆ.
ಭಾರತ-ಅಮೆರಿಕ ಸಹಕಾರ
ಶಿಲ್ಪಗಳನ್ನು ಭಾರತಕ್ಕೆ ಮರಳಿ ತರಲು ಭಾರತ ಮತ್ತು ಅಮೆರಿಕ ಸರ್ಕಾರಗಳು ಅಂತಿಮ ಹಂತದ ಸಿದ್ಧತೆಗಳನ್ನು ನಡೆಸುತ್ತಿವೆ. ಪುರಾತನ ವಸ್ತುಗಳ ಕಳ್ಳಸಾಗಣೆ ವಿರುದ್ಧ ಜಾಗತಿಕ ಮಟ್ಟದಲ್ಲಿ ಕೈಗೊಳ್ಳಲಾಗುತ್ತಿರುವ ಕ್ರಮಗಳಿಗೆ ಈ ನಿರ್ಧಾರ ಹೊಸ ಬಲ ನೀಡಿದೆ.





