ಈಗಿನ ಕಾಲದಲ್ಲಿ ಮದುವೆಯಾಗಲು ಹುಡುಗಿಯರು ಸಿಗಲಿಲ್ಲ ಅಂತಾ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳನ್ನು ಕೇಳಿರುತ್ತೀರಾ.. ಆದರೆ ಇಲ್ಲೊಂದು ವಿಚಿತ್ರ ಘಟನೆ ಎಲ್ಲರ ಗಮನ ಸೆಳೆದಿದೆ. ಯುವಕನೊರ್ವ ಇಬ್ಬರು ಯುವತಿಯರನ್ನು ಅವರ ಕುಟುಂಬ ಹಾಗೂ ಸಮುದಾಯದ ಒಪ್ಪಿಗೆ ಪಡೆದು ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಘಟನೆ ತೆಲಂಗಾಣದ ಲಿಂಗಾಪುರ ತಾಲೂಕಿನ ಘುಮನೂರು ಗ್ರಾಮದಲ್ಲಿ ನಡೆದಿದೆ.
ಸೂರ್ಯದೇವ್ ಎಂಬ ಯುವನೊರ್ವ ತನ್ನ ಬಾಲ್ಯದಿಂದಲೇ ಅಕ್ಕಪಕ್ಕದ ಗ್ರಾಮಗಳ ಇಬ್ಬರು ಯುವತಿಯರಾದ ಲಾಲ್ದೇವಿ ಮತ್ತು ಜಲಕರ್ದೇವಿ ಅವರನ್ನು ಪ್ರೀತಿಸುತ್ತಿದ್ದ. ಆದರೆ ಇದಕ್ಕೆ ಅವರ ಸಂಬಂಧಿಕರು, ಗ್ರಾಮಸ್ಥರು ಮತ್ತು ಬುಡಕಟ್ಟು ಸಮುದಾಯದ ಹಿರಿಯರು ಒಪ್ಪಿಗೆ ನೀಡಿರಲಿಲ್ಲ. ಗ್ರಾಮದ ಹಿರಿಯರು, ಇಬ್ಬರೂ ಯುವತಿಯರ ಕುಟುಂಬದವರೊಂದಿಗೆ ಮಾತುಕತೆ ನಡೆಸಿ, ಸಂಬಂಧಿಕರ ಒಪ್ಪಿಗೆ ಪಡೆಯಲಾಯಿತು. ನಂತರ ಯುವಕ ಇಬ್ಬರನ್ನು ಕೈಹಿಡಿದಿದ್ದಾನೆ.
ಈ ಕುರಿತು ಸೂರ್ಯದೇವ್ ಪ್ರತಿಕ್ರಿಯೆ ನೀಡಿದ್ದು, “ನಾನು ಇಬ್ಬರೂ ಯುವತಿಯರನ್ನೂ ಪ್ರೀತಿಸಿದ್ದೆ. ನಾನು ಯಾರಿಗೂ ದೋಖಾ ಕೊಡಲು ಇಚ್ಛಿಸಿಲ್ಲ. ಅವರ ಕುಟುಂಬಗಳು, ನನ್ನ ಕುಟುಂಬ ಹಾಗೂ ಗ್ರಾಮಸ್ಥರು ನನ್ನ ನಿರ್ಧಾರವನ್ನು ಗೌರವಿಸಿ ಒಪ್ಪಿದ್ದಾರೆ. ಇದು ನನ್ನ ಜೀವನದ ಸಂತೋಷದ ಕ್ಷಣ,” ಎಂದು ಮದುವೆ ದಿನದಲ್ಲಿ ಹೇಳಿದನು.
ಈ ವಿಶೇಷ ಮದುವೆಗೆ ಸಾಂಪ್ರದಾಯಿಕ ರೀತಿಯಲ್ಲಿ ಎಲ್ಲಾ ವಿಧಿ-ವಿಧಾನಗಳು ನೆರವೇರಿಸಲಾಯಿತು. ಮದುವೆ ಆಮಂತ್ರಣ ಪತ್ರಿಕೆಗಳನ್ನು ಮುದ್ರಿಸಿ, ಸಮುದಾಯದ ಎಲ್ಲಾ ಜನರನ್ನು ಆಹ್ವಾನಿಸಲಾಯಿತು. ನಿಗದಿತ ದಿನದಲ್ಲಿ ಸೂರ್ಯದೇವ್, ಲಾಲ್ದೇವಿ ಮತ್ತು ಜಲಕರ್ದೇವಿ ಅವರ ಹಿರಿಯರ ಆಶೀರ್ವಾದದೊಂದಿಗೆ ಹಸೆಮಣೆ ಏರಿದರು. ಮೂರು ಕುಟುಂಬಗಳ ಸದಸ್ಯರು, ಬಂಧು-ಬಳಗ ಹಾಗೂ ಗ್ರಾಮದ ಜನರು ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ನವದಂಪತಿಗಳಿಗೆ ಶುಭ ಹಾರೈಸಿದರು.
ಮದುವೆಯ ನಂತರ ಸೂರ್ಯದೇವ್, ಲಾಲ್ದೇವಿ ಮತ್ತು ಜಲಕರ್ದೇವಿ ಸುದ್ದಿಗಾರರೊಂದಿಗೆ ಮಾತನಾಡಿದ್ದು, “ನಾ ಇಬ್ಬರೂ ಹೆಂಡತಿಗಳನ್ನು ಸಮಾನವಾಗಿ ಗೌರವಿಸುತ್ತೇವೆ. ನಮ್ಮ ಸಂಬಂಧ ಪ್ರೀತಿಯ ಮೇಲೆ ಅವಲಂಬಿತವಾಗಿದೆ. ಎಲ್ಲರ ಆಶೀರ್ವಾದದಿಂದ ಸಂತೋಷವಾಗಿ ಬದುಕುವೆವು,” ಎಂದು ಹೇಳಿದ್ದಾರೆ.





