ರಾಜಸ್ಥಾನ: ಪತ್ನಿಯೊಂದಿಗೆ ಜಗಳ ಮಾಡಿಕೊಂಡ ಗಂಡ, ಕೇವಲ 5 ತಿಂಗಳ ನವಜಾತ ಅವಳಿ ಹೆಣ್ಣು ಮಕ್ಕಳನ್ನು ನೆಲಕ್ಕೆ ಹೊಡೆದು, ಹತ್ಯೆಗೈದಿರುವ ಘಟನೆ ರಾಜಸ್ಥಾನದ ಸಿಕರ್ ಜಿಲ್ಲೆಯ ನೀಮ್ಕಾಥಾನಾ ಪ್ರದೇಶದಲ್ಲಿ ನಡೆದಿದೆ. ನಂತರ ಮಕ್ಕಳ ಶವಗಳನ್ನು ಮರೆಮಾಚಲು ಆರೋಪಿ ಮಣ್ಣಿನಲ್ಲಿ ಹೂತು ಹಾಕಿದ್ದಾನೆ. ಮೃತ ಶಿಶುಗಳ ಮಾವನ ದೂರಿನಿಂದ ಈ ಪ್ರಕರಣ ಬೆಳಕಿಗೆ ಬಂದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ವಿವರಣೆ
ಸಿಕರ್ ಜಿಲ್ಲೆಯ ನೀಮ್ಕಾಥಾನಾ ನಗರದಲ್ಲಿ ವಾಸವಿದ್ದ ಅನಿತಾ ಎಂಬ ಮಹಿಳೆ ಮತ್ತು ಆಕೆಯ ಪತಿ ಅಶೋಕ್ ಕುಮಾರ್ ನಡುವೆ ನಿರಂತರವಾಗಿ ಜಗಳವಾಡುತ್ತಿದ್ದರು. ಮದುವೆಯಾದ ದಿನದಿಂದಲೇ ಪತ್ನಿ ಅನಿತಾ ಮೇಲೆ ಅಶೋಕ್ ಮಾನಸಿಕ ಹಾಗೂ ಶಾರೀರಿಕ ಹಿಂಸೆ ನೀಡುತ್ತಿದ್ದನು. ಹಲವು ಬಾರಿ ಜಗಳ ನಡೆದರೂ, ಕುಟುಂಬಸ್ಥರ ಮಧ್ಯಸ್ಥಿಕೆಯಿಂದ ವಿಷಯ ಸರಿಪಡಿಸಲಾಗುತ್ತಿತ್ತು. ಆದರೆ ಈ ಬಾರಿ ಇವರಿಬ್ಬರ ಜಗಳ ವಿಕೋಪಕ್ಕೆ ತಿರುಗಿ ಭೀಕರ ಅಂತ್ಯಕ್ಕೆ ತಲುಪಿದೆ.
ಗುರುವಾರ ಮಧ್ಯಾಹ್ನ 2:30ರಿಂದ 3 ಗಂಟೆ ಸುಮಾರಿಗೆ, ಇವರಿಬ್ಬರ ನಡುವೆ ತೀವ್ರ ಜಗಳ ನಡೆದಿದೆ. ಆಕಸ್ಮಿಕವಾಗಿ ಉಂಟಾದ ಸಿಟ್ಟಿನಲ್ಲಿ ಅಶೋಕ್, ತನ್ನ ಇಬ್ಬರು ಮುದ್ದಾದ ಪುಟ್ಟ ಮಕ್ಕಳಾದ 5 ತಿಂಗಳ ನವ್ಯಾ ಮತ್ತು ನಿಧಿಯನ್ನು ನೆಲಕ್ಕೆ ಬಿಸಾಡಿ ಕ್ರೌರ್ಯದಿಂದ ಹತ್ಯೆ ಮಾಡಿದ್ದಾನೆ. ತಕ್ಷಣವೇ ಶಿಶುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರು ಇಬ್ಬರೂ ಶಿಶುಗಳು ಮೃತಪಟ್ಟಿರುವುದಾಗಿ ಘೋಷಿಸಿದರು.
ಘಟನೆ ನಡೆದ ಬಳಿಕ ಅಶೋಕ್ ಮತ್ತು ಆತನ ಕುಟುಂಬದವರು ಈ ವಿಷಯವನ್ನು ಮುಚ್ಚಿಡಲು ಯತ್ನಿಸಿದರು. ಮಕ್ಕಳ ಶವಗಳನ್ನು ಮನೆಯಿಂದ ಸುಮಾರು 2 ಕಿಲೋಮೀಟರ್ ದೂರ ಖಾಲಿ ಜಾಗದಲ್ಲಿ ಹೂತು ಹಾಕಿ, ಮೇಲ್ಭಾಗದಲ್ಲಿ ಕಲ್ಲುಗಳು ಮತ್ತು ಪೊದೆಗಳನ್ನಿಟ್ಟು ಯಾರಿಗೂ ಅನುಮಾನಬಾರದಂತೆ ಮಾಡಿದ್ದರು. ಮಕ್ಕಳ ಸಾವಿನ ಬಗ್ಗೆ ಯಾರಿಗೂ ತಿಳಿಯದಂತೆ ಘಟನೆಯನ್ನು ಗುಪ್ತವಾಗಿಡಲು ಸಂಚು ರೂಪಿಸಿದ್ದರು.
ಈ ಕುರಿತು ಗುರುವಾರ ರಾತ್ರಿ ಸುಮಾರು 11:30 ಕ್ಕೆ, ಮೃತ ಮಕ್ಕಳ ಮಾವ ಸುನೀಲ್ ಯಾದವ್ ನೀಮ್ಕಾಥಾನಾ ಪೊಲೀಸರಿಗೆ ಮಾಹಿತಿ ನೀಡಿದರು. ಇದರಿಂದ ಈ ವಿಷಯ ಬೆಳಕಿಗೆ ಬಂದಿದೆ. ಮಾಹಿತಿ ಪಡೆದ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿ, ಶವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು.
ಪೊಲೀಸರ ತನಿಖೆಯಲ್ಲಿ ಅಶೋಕ್ ಕುಮಾರ್ನ ಹತ್ಯೆಗೈದ ವಿಷಯ ಬಹಿರಂಗವಾಗಿದೆ. ಈ ಘಟನೆ ಸಂಬಂಧ ಅಶೋಕ್ ವಿರುದ್ಧ ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಕೊಲೆ ಮತ್ತು ಇತರ ಸೆಕ್ಷನ್ಗಳಡಿ ಪ್ರಕರಣ ದಾಖಲಾಗಿದ್ದು, ಆತನನ್ನು ಬಂಧಿಸಲಾಗಿದೆ.





