ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೀಪಾವಳಿ ಹಬ್ಬವನ್ನು ಭಾರತೀಯ ನೌಕಾಪಡೆಯ ಯೋಧರೊಂದಿಗೆ ಆಚರಿಸಿದ್ದಾರೆ. ಈ ಬಾರಿ ಅವರು ಭಾರತದ ಸ್ವದೇಶಿ ಯುದ್ಧ ನೌಕೆ INS ವಿಕ್ರಾಂತ್ನಲ್ಲಿ ದೀಪೋತ್ಸವವನ್ನು ಆಚರಿಸಿದರು. ಗೋವಾ ಮತ್ತು ಕಾರವಾರದ ಕಡಲ ತೀರದಲ್ಲಿ ಬೀಡುಬಿಟ್ಟಿರುವ ಈ ಭವ್ಯ ಯುದ್ಧ ನೌಕೆಯಲ್ಲಿ ಕಳೆದ ರಾತ್ರಿ ತಂಗಿದ್ದ ಪ್ರಧಾನಿ, ಯೋಧರೊಂದಿಗೆ ಹಬ್ಬದ ಸಂಭ್ರಮವನ್ನು ಹಂಚಿಕೊಂಡರು.
INS ವಿಕ್ರಾಂತ್ ಭಾರತದ ಮೊದಲ ಸ್ವದೇಶಿ ವಿಮಾನವಾಹಕ ನೌಕೆಯಾಗಿದ್ದು, 2022ರಲ್ಲಿ ಸೇವೆಗೆ ಸೇರಿಕೊಂಡಿತ್ತು. ಇದರ ಡೆಕ್ಗೆ ಭೇಟಿ ನೀಡಿದ ಪ್ರಧಾನಿ ಮೋದಿ, ಯುದ್ಧ ನೌಕೆಯಲ್ಲಿ ಸನ್ನದ್ಧವಾಗಿರುವ ಯುದ್ಧ ವಿಮಾನಗಳನ್ನು ಪರಿಶೀಲಿಸಿದರು. ಮಿಗ್-29K ಯುದ್ಧ ವಿಮಾನಗಳು ಅವರ ಮುಂದೆ ತಮ್ಮ ಶಕ್ತಿ ಪ್ರದರ್ಶನ ಮಾಡಿದವು. ಈ ಕಾರ್ಯಕ್ರಮದಲ್ಲಿ ಯೋಧರು ಪ್ರಧಾನಿಯ ಎದುರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು.
ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಮಾತನಾಡಿದ್ದು, INS ವಿಕ್ರಾಂತ್ನ ಸಾಮರ್ಥ್ಯ ಮತ್ತು ಪ್ರಾಮುಖ್ಯತೆಯನ್ನು ವಿವರಿಸಿದರು. “ಯೋಧರೇ ನನ್ನ ಕುಟುಂಬ, ನಿಮ್ಮ ಜೊತೆಗೇ ನನ್ನ ದೀಪಾವಳಿ” ಎಂದು ಹೇಳಿದ ಅವರು, ಯೋಧರ ತ್ಯಾಗ ಮತ್ತು ಸೇವೆಯನ್ನು ಕೊಂಡಾಡಿದರು.
ಅಲ್ಲದೆ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಮೂಲ INS ವಿಕ್ರಾಂತ್ ವಹಿಸಿದ್ದ ಪಾತ್ರವನ್ನು ನೆನಪಿಸಿಕೊಂಡರು. ಆಪರೇಷನ್ ಸಿಂದೂರ ವೇಳೆ ಈ ನೌಕೆ ಪಾಕಿಸ್ತಾನದ ನಿದ್ರೆಗೆಡಿಸಿತು ಎಂದು ಅವರು ಹೇಳಿದರು. ಕೆಲವೇ ದಿನಗಳಲ್ಲಿ ಪಾಕಿಸ್ತಾನವನ್ನು ಮಂಡಿಯೂರುವಂತೆ ಮಾಡಿದ ಈ ಯುದ್ಧ ನೌಕೆಯ ಐತಿಹಾಸಿಕ ಕೊಡುಗೆಯನ್ನು ಸ್ಮರಿಸಿದರು.
ಇದೇ ಸಂದರ್ಭದಲ್ಲಿ ಪ್ರಧಾನಿ ಬ್ರಹ್ಮೋಸ್ ಕ್ಷಿಪಣಿಯ ಸಾಮರ್ಥ್ಯವನ್ನೂ ಕೊಂಡಾಡಿದರು. ಭಾರತದ ಸ್ವದೇಶಿ ರಕ್ಷಣಾ ತಂತ್ರಜ್ಞಾನದ ಸಾಧನೆಯಾಗಿರುವ ಬ್ರಹ್ಮೋಸ್, ವಿಶ್ವದ ಅತ್ಯಂತ ವೇಗದ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಯಾಗಿದೆ. ಇದು INS ವಿಕ್ರಾಂತ್ನಂತಹ ಯುದ್ಧ ನೌಕೆಗಳ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದು ಮೋದಿ ತಿಳಿಸಿದರು.
ದೀಪಾವಳಿ ಎಂಬುದು ಬೆಳಕಿನ ಹಬ್ಬ ಮಾತ್ರವಲ್ಲ, ಅದು ದುಷ್ಟಶಕ್ತಿಗಳ ಮೇಲೆ ಒಳ್ಳೆಯತನದ ಗೆಲುವಿನ ಸಂಕೇತವಾಗಿದೆ ಎಂದು ಅವರು ಹೇಳಿದರು. ಯೋಧರು ದೇಶದ ಗಡಿಗಳನ್ನು ರಕ್ಷಿಸುತ್ತಾ, ಕುಟುಂಬದಿಂದ ದೂರವಿದ್ದರೂ ಹಬ್ಬಗಳನ್ನು ಆಚರಿಸುತ್ತಾರೆ. ಅಂತಹ ಯೋಧರೊಂದಿಗೆ ದೀಪಾವಳಿ ಆಚರಿಸುವುದು ನನ್ನ ಕರ್ತವ್ಯ ಎಂದು ಮೋದಿ ಭಾವುಕರಾಗಿ ಹೇಳಿದರು.





