ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತೀಯ ಸೇನೆ ತೀವ್ರ ಕಾರ್ಯಾಚರಣೆಯನ್ನು ಕೈಗೊಂಡಿದೆ. ಲಷ್ಕರ್-ಎ-ತೈಬಾ (ಎಲ್ಇಟಿ) ಕಮಾಂಡರ್ ಸೇರಿದಂತೆ ಐದು ಭಯೋತ್ಪಾದಕರ ಮನೆಗಳನ್ನು ಶೋಪಿಯಾನ್, ಕುಲ್ಗಾಮ್, ಮತ್ತು ಪುಲ್ವಾಮಾ ಜಿಲ್ಲೆಗಳಲ್ಲಿ ಧ್ವಂಸಗೊಳಿಸಲಾಗಿದೆ. ಈ ಕಾರ್ಯಾಚರಣೆಯು ಉಗ್ರರ ಎದೆಯಲ್ಲಿ ಭಯವನ್ನು ಸೃಷ್ಟಿಸಿದ್ದು, ಭಾರತೀಯ ಸೇನೆ ಇಂಚಿಂಚು ಪ್ರದೇಶವನ್ನು ಸಂಘಟಿತವಾಗಿ ಶೋಧಿಸುತ್ತಿದೆ.
ಕಾರ್ಯಾಚರಣೆಯ ವಿವರಗಳು
ಏಪ್ರಿಲ್ 22, 2025 ರಂದು ಪಹಲ್ಗಾಮ್ನ ಬೈಸರನ್ ಘಾಟಿಯಲ್ಲಿ ಪ್ರವಾಸಿಗರ ಮೇಲೆ ನಡೆದ ದಾಳಿಯಲ್ಲಿ 26 ಜನರು ಮೃತಪಟ್ಟಿದ್ದರು. ಈ ಘಟನೆಯ ನಂತರ ಮೋದಿ ಸರ್ಕಾರವು ಸೇನೆಗೆ ಮುಕ್ತ ಕೈಯನ್ನು ನೀಡಿದ್ದು, ಭಾರತೀಯ ಸೇನೆ ಉಗ್ರರ ವಿರುದ್ಧ ದೊಡ್ಡ ಮಟ್ಟದ ಕಾರ್ಯಾಚರಣೆಯನ್ನು ಆರಂಭಿಸಿದೆ. ಈಗಾಗಲೇ ಒಟ್ಟು 7 ಉಗ್ರರ ಮನೆಗಳನ್ನು ಧ್ವಂಸಗೊಳಿಸಲಾಗಿದೆ.
ಶೋಪಿಯಾನ್, ಕುಲ್ಗಾಮ್ ಮತ್ತು ಪುಲ್ವಾಮಾ ಜಿಲ್ಲೆಗಳಲ್ಲಿ ಭದ್ರತಾ ಪಡೆಗಳು ಎಲ್ಇಟಿ ಉಗ್ರರ ಮತ್ತು ದಾಳಿಗೆ ಸಂಬಂಧಿಸಿದ ಶಂಕಿತರ ವಿರುದ್ಧ ಕಾರ್ಯಾಚರಣೆಯನ್ನು ನಡೆಸಿದೆ. ಶೋಪಿಯಾನ್ನ ಚೋಟಿಪೋರಾ ಗ್ರಾಮದಲ್ಲಿ, ಎಲ್ಇಟಿ ಕಮಾಂಡರ್ ಶಾಹಿದ್ ಅಹ್ಮದ್ ಕುಟ್ಟೆ ಉಗ್ರನ ಮನೆಯನ್ನು ನೆಲಸಮಗೊಳಿಸಲಾಗಿದೆ. ಈತ ಕಳೆದ 3-4 ವರ್ಷಗಳಿಂದ ಭಯೋತ್ಪಾದನಾ ಸಂಬಂಧಿತ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದಾನೆ ಮತ್ತುದೇಶ ವಿರೋಧಿ ಕಾರ್ಯಾಚರಣೆಗಳನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ. ಎಂದು ಹೇಳಲಾಗಿದೆ. ಕುಲ್ಗಾಮ್ನ ಮಾತಲಂ ಪ್ರದೇಶದಲ್ಲಿ ಸಕ್ರಿಯ ಭಯೋತ್ಪಾದಕ ಜಾಹಿದ್ ಅಹ್ಮದ್ನ ಮತ್ತೊಂದು ಮನೆಯನ್ನು ಕೆಡವಲಾಯಿತು.
ಪುಲ್ವಾಮಾದ ಮುರ್ರಾನ್ ಪ್ರದೇಶದಲ್ಲಿ, ಭಯೋತ್ಪಾದಕ ಅಹ್ಸಾನ್ ಉಲ್ ಹಕ್ನ ಮನೆ ಸ್ಫೋಟಿಸಿ ನೆಲಸಮ ಮಾಡಲಾಗಿದೆ. 2018 ರಲ್ಲಿ ಪಾಕಿಸ್ತಾನದಲ್ಲಿ ಭಯೋತ್ಪಾದಕ ತರಬೇತಿ ಪಡೆದು, ಇತ್ತೀಚೆಗೆ ಕಣಿವೆಗೆ ಮತ್ತೆ ಪ್ರವೇಶಿಸಿದ್ದ ಎಂದು ಹೇಳಲಾಗಿದೆ. ಜೂನ್ 2023 ರಿಂದ ಸಕ್ರಿಯವಾಗಿರುವ ಎಲ್ಇಟಿ ಭಯೋತ್ಪಾದಕ ಎಹ್ಸಾನ್ ಅಹ್ಮದ್ ಶೇಖ್ನ ಮತ್ತೊಂದು ಎರಡಂತಸ್ತಿನ ಮನೆಯನ್ನು ಕೆಡವಲಾಗಿದೆ. ಐದನೇ ಭಯೋತ್ಪಾದಕ ಹರಿಸ್ ಅಹ್ಮದ್ನ ಪುಲ್ವಾಮಾದ ಕಚಿಪೋರಾ ಪ್ರದೇಶದಲ್ಲಿರುವ ಮನೆಯನ್ನು ಕೂಡ ಸ್ಫೋಟ ಮಾಡಲಾಗಿದೆ. ಈ ಎಲ್ಲ ಭಯೋತ್ಪಾದಕರನ್ನು ವಾಂಟೆಡ್ ಲಿಸ್ಟ್ಗೆ ಸೇರಿಸಲಾಗಿದೆ.
ಶಂಕಿತ ಉಗ್ರರ ಹುಡುಕಾಟ
ಪಹಲ್ಗಾಮ ದಾಳಿಯಲ್ಲಿ ಭಾಗಿಯಾಗಿರುವ ಶಂಕಿತರಾದ ಆದಿಲ್ ಥೋಕರ್, ಹಾಶಿಮ್ ಮೂಸಾ (ಸುಲೇಮಾನ್) ಮತ್ತು ಅಲಿ ಭಾಯ್ (ತಲ್ಹಾ ಭಾಯ್) ರೇಖಾಚಿತ್ರಗಳನ್ನು ಅನಂತ್ನಾಗ್ ಪೊಲೀಸರು ಬಿಡುಗಡೆ ಮಾಡಿದ್ದರು. ಇವರಲ್ಲಿ ಇಬ್ಬರು ಪಾಕಿಸ್ತಾನಿ ಪ್ರಜೆಗಳಾಗಿದ್ದು, ಇವರ ಬಗ್ಗೆ ಮಾಹಿತಿ ನೀಡುವವರಿಗೆ 20 ಲಕ್ಷ ರೂ. ಬಹುಮಾನ ಘೋಷಿಸಿದ್ದಾರೆ. ಸೇನೆ, ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಮತ್ತು ಜಮ್ಮು ಕಾಶ್ಮೀರ ಪೊಲೀಸರು ಈ ಶಂಕಿತರ ಹುಡುಕಾಟಕ್ಕಾಗಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ.