ಜಮ್ಮು ಕಾಶ್ಮೀರದ ಪಹಲ್ಗಾಮ್ನ ಬೈಸರನ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 25 ಪ್ರವಾಸಿಗರು ಮತ್ತು ಒಬ್ಬ ಕಾಶ್ಮೀರಿ ನಾಗರಿಕ ದಾರುಣವಾಗಿ ಹತ್ಯೆಗೊಳಗಾದ ಘಟನೆಯು ದೇಶವನ್ನು ಬೆಚ್ಚಿಬೀಳಿಸಿದೆ. ಈ ಘಟನೆಯ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನವದೆಹಲಿಯಲ್ಲಿ ನಡೆದ ಭದ್ರತಾ ಸಂಪುಟ ಸಮಿತಿಯ (CCS) ಎರಡನೇ ಸಭೆಯಲ್ಲಿ ಕಠಿಣ ಕ್ರಮಗಳಿಗೆ ಸೂಚನೆ ನೀಡಲಾಗಿದೆ. ಪಹಲ್ಗಾಮ್ ಭಯೋತ್ಪಾದಕರನ್ನು ಜೀವಂತವಾಗಿ ಹಿಡಿಯುವಂತೆ ಭದ್ರತಾ ಸಂಸ್ಥೆಗಳಿಗೆ ಖಡಕ್ ಆದೇಶ ನೀಡಲಾಗಿದೆ.
ಆರಂಭಿಕ ಗುಪ್ತಚರ ವರದಿಗಳ ಪ್ರಕಾರ, ಈ ದಾಳಿಯಲ್ಲಿ ಪಾಕಿಸ್ತಾನದ ಸ್ಪಷ್ಟ ಪಾತ್ರವನ್ನು ತೋರಿಸುವ ಸಾಕಷ್ಟು ಪುರಾವೆಗಳಿವೆ. ಗುಂಡಿನ ದಾಳಿಯ ನಿಖರವಾದ ಮಾದರಿಯು ಭಯೋತ್ಪಾದಕರಿಗೆ ಪಾಕಿಸ್ತಾನದಲ್ಲಿ ತರಬೇತಿ ನೀಡಲಾಗಿದೆ ಎಂದು ಸೂಚಿಸುತ್ತದೆ. ಈ ದಾಳಿಯ ಸತ್ಯವನ್ನು ಬಹಿರಂಗಪಡಿಸಲು ಉಗ್ರರನ್ನು ಜೀವಂತವಾಗಿ ಹಿಡಿಯುವುದು ಅತ್ಯಗತ್ಯ ಎಂದು ಮೂಲಗಳು ತಿಳಿಸಿವೆ. ಜೊತೆಗೆ, ಸ್ಥಳೀಯ ಸಹ-ಸಂಚುಕೋರರು ಮತ್ತು ಭಯೋತ್ಪಾದಕರಿಗೆ ಸಹಾಯ ಮಾಡಿದವರನ್ನು ಮಟ್ಟಹಾಕಲು ಏಜೆನ್ಸಿಗಳಿಗೆ ಸೂಚಿಸಲಾಗಿದೆ.
ದಾಳಿಯಲ್ಲಿ ಸುಮಾರು ನಾಲ್ವರು ಭಯೋತ್ಪಾದಕರು ಭಾಗಿಯಾಗಿದ್ದಾರೆ ಎಂದು ವರದಿಗಳು ತಿಳಿಸಿದರೂ, ದಾಳಿಕೋರರ ನಿಖರ ಸಂಖ್ಯೆಯನ್ನು ಖಚಿತಪಡಿಸಲು ಇನ್ನೂ ಸಾಧ್ಯವಾಗಿಲ್ಲ. ಹೆಚ್ಚಿನ ಪ್ರತ್ಯಕ್ಷದರ್ಶಿಗಳು ತೀವ್ರ ಆಘಾತಕ್ಕೊಳಗಾಗಿರುವ ಕಾರಣ, ಸಾಕ್ಷ್ಯ ನೀಡುವ ಸ್ಥಿತಿಯಲ್ಲಿ ಇಲ್ಲ. ಸ್ಥಳೀಯ ಪೊಲೀಸರು ಬಿಡುಗಡೆ ಮಾಡಿದ ರೇಖಾಚಿತ್ರಗಳಲ್ಲಿ ಒಂದು, ಹಾಶಿಮ್ ಎಂಬ ವಿದೇಶಿ ಭಯೋತ್ಪಾದಕನಿಗೆ ಹೋಲುತ್ತದೆ ಎಂದು ಮೂಲಗಳು ತಿಳಿಸಿವೆ. ಭಯೋತ್ಪಾದಕರನ್ನು ಹಿಡಿಯಲು ವಿವಿಧ ಭದ್ರತಾ ಸಂಸ್ಥೆಗಳ ನಡುವೆ ಸತತ ಸಭೆಗಳು ನಡೆಯುತ್ತಿವೆ.
ವಿಶ್ವಸಂಸ್ಥೆಯಲ್ಲಿ ಭಾರತವು ಪಹಲ್ಗಾಮ್ ದಾಳಿಯನ್ನು 26/11ರ ನಂತರದ ಅತಿದೊಡ್ಡ ಭಯೋತ್ಪಾದಕ ದಾಳಿ ಎಂದು ಕರೆದಿದೆ. ಭಾರತದ ಉಪ ಖಾಯಂ ಪ್ರತಿನಿಧಿ ಯೋಜನಾ ಪಟೇಲ್, ಈ ದಾಳಿಯು ನಾಗರಿಕರ ಮೇಲಿನ ಕ್ರೂರ ದಾಳಿಯಾಗಿದ್ದು, ದಶಕಗಳಿಂದ ಗಡಿಯಾಚೆಗಿನ ಭಯೋತ್ಪಾದನೆಯಿಂದ ಭಾರತ ಸಂತ್ರಸ್ಥವಾಗಿದೆ ಎಂದು ಹೇಳಿದ್ದಾರೆ. ಈ ದಾಳಿಯ ಸಂತ್ರಸ್ಥರ ನೋವನ್ನು ಭಾರತ ಆಳವಾಗಿ ಅನುಭವಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಈ ದಾಳಿಯ ಬಳಿಕ 22 ಭಾರತೀಯ ರಾಜತಾಂತ್ರಿಕ ಸಿಬ್ಬಂದಿ ಪಾಕಿಸ್ತಾನವನ್ನು ತೊರೆದು ಅಟ್ಟಾರಿ-ವಾಘಾ ಗಡಿಯ ಮೂಲಕ ಭಾರತಕ್ಕೆ ಮರಳಿದ್ದಾರೆ. ಇದರ ಜೊತೆಗೆ, ಪಂಜಾಬ್ ಸರ್ಕಾರವು ಪಾಕಿಸ್ತಾನ ಗಡಿಯಲ್ಲಿ ಡ್ರೋನ್ ವಿರೋಧಿ ವ್ಯವಸ್ಥೆಗಳನ್ನು ನಿಯೋಜಿಸುವ ತೀರ್ಮಾನವನ್ನು ಘೋಷಿಸಿದೆ. ಈ ವ್ಯವಸ್ಥೆಯು ಮಾದಕ ದ್ರವ್ಯಗಳು ಮತ್ತು ಶಸ್ತ್ರಾಸ್ತ್ರಗಳ ಸಾಗಾಟವನ್ನು ತಡೆಯಲಿದ್ದು, ಒಳನುಸುಳುವಿಕೆಯನ್ನು ನಿಯಂತ್ರಿಸಲು ಭದ್ರತಾ ಸಂಸ್ಥೆಗಳಿಗೆ ನೆರವಾಗಲಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಕಚೇರಿ ತಿಳಿಸಿದೆ.