ಕೈಗೆಟುಕುವ ದರ ಮತ್ತು ಅತ್ಯುತ್ತಮ ಗ್ರಾಹಕ ಸೇವೆಯ ಮೂಲಕ ಭಾರತೀಯ ಪ್ರಯಾಣಿಕರ ವಿಶ್ವಾಸ ಗಳಿಸಿರುವ ‘ಆಕಾಶ ಏರ್’ ತನ್ನ ಸೇವಾ ಜಾಲವನ್ನು ಮತ್ತಷ್ಟು ವಿಸ್ತರಿಸಿದೆ. ನೊಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಾಣಿಜ್ಯ ವಿಮಾನ ಸೇವೆ ಆರಂಭಿಸಿದ ಮೊದಲ ವಿಮಾನಯಾನ ಸಂಸ್ಥೆ ಎಂಬ ಹೆಗ್ಗಳಿಕೆಯನ್ನು ಆಕಾಶ ಏರ್ ಪಡೆದುಕೊಂಡಿದೆ.
ಜೂನ್ 16ರಂದು ನಡೆದ ಉದ್ಘಾಟನಾ ಸಮಾರಂಭದಲ್ಲಿ ಮೊದಲ ವಿಮಾನವು ನವೀ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 7.25ಕ್ಕೆ ಹೊರಟು, 9.35ಕ್ಕೆ ನೊಯ್ಡಾ ವಿಮಾನ ನಿಲ್ದಾಣವನ್ನು ತಲುಪಿದ್ದು, ನಂತರ ಬೆಳಿಗ್ಗೆ 10.15ಕ್ಕೆ ನೊಯ್ಡಾದಿಂದ ಹೊರಟ ವಿಮಾನ ಮಧ್ಯಾಹ್ನ 12.30ಕ್ಕೆ ಮತ್ತೆ ನವೀ ಮುಂಬೈ ತಲುಪಿದೆ.
ಈ ಹೊಸ ಸೇವೆ ಕರ್ನಾಟಕದ ಜನರಿಗೆ, ಅದರಲ್ಲೂ ಬೆಂಗಳೂರಿನ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲಿದೆ. ಬೆಂಗಳೂರು ಮತ್ತು ನೊಯ್ಡಾ ನಡುವಿನ ತಡೆರಹಿತ ದೈನಂದಿನ ವಿಮಾನ ಸೇವೆಯನ್ನು ಆಕಾಶ ಏರ್ ಆರಂಭಿಸಿದೆ. ‘QP 1575’ ವಿಮಾನವು ಪ್ರತಿದಿನ ಸಂಜೆ 4.25ಕ್ಕೆ ಬೆಂಗಳೂರಿನಿಂದ ಹೊರಟು, ರಾತ್ರಿ 7.15ಕ್ಕೆ ನೊಯ್ಡಾ ತಲುಪಲಿದೆ. ಅದೇ ರೀತಿ, ‘QP 1576’ ವಿಮಾನವು ನೊಯ್ಡಾದಿಂದ ರಾತ್ರಿ 7.55ಕ್ಕೆ ಹೊರಟು, ರಾತ್ರಿ 11 ಗಂಟೆಗೆ ಮತ್ತೆ ಬೆಂಗಳೂರು ತಲುಪಲಿದೆ. ಇದರಿಂದ ಉದ್ಯಮಿಗಳು, ಐಟಿ ವಲಯದ ಉದ್ಯೋಗಿಗಳು ಹಾಗೂ ಪ್ರವಾಸಿಗರಿಗೆ ಸುಲಭ ಮತ್ತು ವೇಗದ ಸಂಪರ್ಕ ಸಿಗಲಿದೆ.
ವಿಮಾನ ಸೇವೆಗಳ ಜೊತೆಗೆ ನೊಯ್ಡಾ ವಿಮಾನ ನಿಲ್ದಾಣದ ಆವರಣದಲ್ಲಿಯೇ ಅತ್ಯಾಧುನಿಕ ವಿಮಾನ ನಿರ್ವಹಣೆ ಮತ್ತು ದುರಸ್ತಿ ಕೇಂದ್ರವನ್ನು ಸ್ಥಾಪಿಸುವ ಯೋಜನೆಯನ್ನೂ ಸಂಸ್ಥೆ ಕೈಗೊಂಡಿದೆ. ಈ ಸೌಲಭ್ಯವು ವಿಮಾನಗಳ ಸುರಕ್ಷತೆ, ನಿರ್ವಹಣೆ ಮತ್ತು ಕಾರ್ಯಾಚರಣಾ ದಕ್ಷತೆಯನ್ನು ಹೆಚ್ಚಿಸಲು ನೆರವಾಗಲಿದೆ.
ಆಗಸ್ಟ್ 2022ರಲ್ಲಿ ತನ್ನ ಕಾರ್ಯಾಚರಣೆಯನ್ನು ಆರಂಭಿಸಿದ್ದ ಆಕಾಶ ಏರ್, ಕೇವಲ ಮೂರು ವರ್ಷಗಳಲ್ಲೇ 2.8 ಕೋಟಿಗೂ ಹೆಚ್ಚು ಪ್ರಯಾಣಿಕರಿಗೆ ಸೇವೆ ಒದಗಿಸುವ ಮೂಲಕ ವೇಗವಾಗಿ ಬೆಳೆಯುತ್ತಿರುವ ವಿಮಾನಯಾನ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚು ಲೆಗ್ರೂಮ್, ಯುಎಸ್ಬಿ ಚಾರ್ಜಿಂಗ್ ಪೋರ್ಟ್ಗಳು ಹಾಗೂ ‘ಕೆಫೆ ಆಕಾಶ’ ಮೂಲಕ ವಿವಿಧ ಆಹಾರ ಆಯ್ಕೆಗಳನ್ನು ಒದಗಿಸಲಾಗುತ್ತಿದೆ.
ಪ್ರಸ್ತುತ ಬೆಂಗಳೂರು, ಮುಂಬೈ, ದೆಹಲಿ, ಚೆನ್ನೈ ಸೇರಿದಂತೆ ದೇಶದ 27 ನಗರಗಳು ಮತ್ತು ವಿದೇಶಗಳ ಏಳು ನಗರಗಳಿಗೆ ಆಕಾಶ ಏರ್ ತನ್ನ ಸೇವೆಯನ್ನು ವಿಸ್ತರಿಸಿದೆ. ಹೊಸ ಮಾರ್ಗಗಳ ಸೇರ್ಪಡೆಯೊಂದಿಗೆ ದೇಶೀಯ ವಿಮಾನಯಾನ ಕ್ಷೇತ್ರದಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸುವತ್ತ ಸಂಸ್ಥೆ ಹೆಜ್ಜೆ ಇಟ್ಟಿದೆ.
ಈ ಬಗ್ಗೆ ಮಾತನಾಡಿದ ಆಕಾಶ ಏರ್ನ ಸಹ-ಸ್ಥಾಪಕ ಮತ್ತು ಮುಖ್ಯ ವಾಣಿಜ್ಯ ಅಧಿಕಾರಿ ಆನಂದ್ ಶ್ರೀನಿವಾಸನ್, ನೊಯ್ಡಾದಿಂದ ಕಾರ್ಯಾಚರಣೆ ಆರಂಭಿಸಿರುವುದು ಸಂಸ್ಥೆಗೆ ಮಹತ್ವದ ಮೈಲುಗಲ್ಲು ಎಂದು ತಿಳಿಸಿದರು. ಈ ಹೊಸ ಸೇವೆಯ ಮೂಲಕ ರಾಷ್ಟ್ರೀಯ ರಾಜಧಾನಿ ಪ್ರದೇಶ ಮತ್ತು ಸುತ್ತಮುತ್ತಲಿನ ರಾಜ್ಯಗಳ ಪ್ರಯಾಣಿಕರಿಗೆ ಉತ್ತಮ ಸಂಪರ್ಕ ಸೌಲಭ್ಯ ದೊರೆಯಲಿದೆ ಎಂದರು.
ಗ್ರಾಹಕರಿಗೆ ವಿಶ್ವಾಸಾರ್ಹ, ಸುಗಮ ಮತ್ತು ಆರಾಮದಾಯಕ ಪ್ರಯಾಣ ಅನುಭವವನ್ನು ಒದಗಿಸುವುದು ಸಂಸ್ಥೆಯ ಪ್ರಮುಖ ಗುರಿಯಾಗಿದ್ದು, ಅದಕ್ಕಾಗಿ ಆಕಾಶ ಏರ್ ಬದ್ಧವಾಗಿದೆ ಎಂದು ಆನಂದ್ ಶ್ರೀನಿವಾಸನ್ ತಿಳಿಸಿದರು. ಹೊಸ ವಿಮಾನ ನಿಲ್ದಾಣದಿಂದ ಕಾರ್ಯಾಚರಣೆ ಆರಂಭಿಸಿರುವುದರಿಂದ ಪ್ರಯಾಣಿಕರಿಗೆ ಹೆಚ್ಚಿನ ಆಯ್ಕೆಗಳು ಹಾಗೂ ಉತ್ತಮ ಸೇವೆ ಲಭ್ಯವಾಗಲಿದೆ ಎಂದರು.





