ನವದೆಹಲಿ ಆ.26: ನೇಪಾಳದಲ್ಲಿ ಸಂಭವಿಸಿರುವ ಭೀಕರ ದಿಢೀರ್ ಪ್ರವಾಹದ ಪರಿಣಾಮ ಗಂಡಕ್ ನದಿಯಲ್ಲಿ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಎದುರಾಗಿದ್ದು, ಬಿಹಾರ ಮತ್ತು ಉತ್ತರ ಪ್ರದೇಶದ ಗಡಿ ಪ್ರದೇಶಗಳಲ್ಲಿ ಪ್ರವಾಹದ ಆತಂಕ ಹೆಚ್ಚಾಗಿದೆ. ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಹೈ ಅಲರ್ಟ್ ಘೋಷಿಸಿದ್ದು, ಒಟ್ಟು 20 ರಕ್ಷಣಾ ತಂಡಗಳನ್ನು ಸಜ್ಜುಗೊಳಿಸಲಾಗಿದೆ.
ಕೇಂದ್ರ ಜಲ ಆಯೋಗ (CWC) ನೀಡಿರುವ ಮಾಹಿತಿ ಹಾಗೂ ನೇಪಾಳದಿಂದ ಲಭ್ಯವಾಗಿರುವ ವರದಿಗಳ ಆಧಾರದ ಮೇಲೆ NDRF ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ನೇಪಾಳದ ಫುರ್ಕೆ ಖೋಲಾ ಪ್ರದೇಶದಲ್ಲಿ ತ್ರಿಶೂಲಿ ನದಿಯ ನೀರಿನ ಮಟ್ಟದಲ್ಲಿ ಏಕಾಏಕಿ ಏರಿಕೆ ಕಂಡುಬಂದಿದೆ. ಈ ಪ್ರದೇಶ ಭಾರತ-ನೇಪಾಳ ಗಡಿಯಿಂದ ಸುಮಾರು 160 ಕಿ.ಮೀ ದೂರದಲ್ಲಿದೆ.
ನೇಪಾಳ-ಚೀನಾ ಗಡಿ ಸಮೀಪ ಸಂಭವಿಸಿರುವ ಶಂಕಿತ ಹಿಮನದಿ ಸರೋವರ ಸ್ಫೋಟ ಪ್ರವಾಹ (GLOF) ಅಥವಾ ಇತರ ನೈಸರ್ಗಿಕ ಕಾರಣಗಳಿಂದ ನದಿಯಲ್ಲಿ ಹಠಾತ್ ನೀರಿನ ಏರಿಕೆ ಉಂಟಾಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಗಂಡಕ್ ನದಿ ಪಾತ್ರದಲ್ಲಿ ಆತಂಕ
ನೇಪಾಳದಲ್ಲಿ ಉಂಟಾಗಿರುವ ಪ್ರವಾಹದ ನೀರು ಕೆಳಭಾಗಕ್ಕೆ ಹರಿದು ಗಂಡಕ್ ನದಿಯನ್ನು ಸೇರುವ ಸಾಧ್ಯತೆ ಇರುವುದರಿಂದ ಬಿಹಾರ ಮತ್ತು ಉತ್ತರ ಪ್ರದೇಶದ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ನದಿಪಾತ್ರದ ಸ್ಥಳೀಯ ಆಡಳಿತಗಳಿಗೆ ಪರಿಸ್ಥಿತಿಯ ಮೇಲೆ ನಿರಂತರ ನಿಗಾ ಇರಿಸುವಂತೆ ಸೂಚಿಸಲಾಗಿದೆ.
ಬಿಹಾರದಲ್ಲಿ 9 NDRF ತಂಡಗಳನ್ನು ನಿಯೋಜಿಸಲಾಗಿದೆ. ಪಶ್ಚಿಮ ಚಂಪಾರಣ್ ಮತ್ತು ಮುಜಫರ್ಪುರ ಸೇರಿದಂತೆ ಪ್ರವಾಹದ ಅಪಾಯ ಎದುರಾಗಬಹುದಾದ ಪ್ರದೇಶಗಳಲ್ಲಿ ತಂಡಗಳು ಸಿದ್ಧವಾಗಿವೆ. ಉತ್ತರ ಪ್ರದೇಶದಲ್ಲಿ 11 ತಂಡಗಳನ್ನು ನಿಯೋಜಿಸಲಾಗಿದ್ದು, ಗಂಡಕ್ ನದಿಯ ಸಮೀಪದ ಕುಶಿನಗರ ಜಿಲ್ಲೆಗೂ ರಕ್ಷಣಾ ಸಿಬ್ಬಂದಿಯನ್ನು ಕಳುಹಿಸಲಾಗಿದೆ.
ತುರ್ತು ಕಾರ್ಯಾಚರಣೆಗೆ NDRF ಸಜ್ಜು
ರಾಜ್ಯ ಸರ್ಕಾರಗಳು ಹಾಗೂ ಕೇಂದ್ರ ಜಲ ಆಯೋಗದೊಂದಿಗೆ ಸಮನ್ವಯ ಸಾಧಿಸಿರುವ NDRF, ಯಾವುದೇ ತುರ್ತು ಪರಿಸ್ಥಿತಿ ಎದುರಾದರೆ ತಕ್ಷಣ ಕಾರ್ಯಾಚರಣೆ ಆರಂಭಿಸಲು ಹೆಚ್ಚುವರಿ ತಂಡಗಳನ್ನು ಸ್ಟ್ಯಾಂಡ್ಬೈನಲ್ಲಿ ಇರಿಸಿದೆ.
ಇದೇ ವೇಳೆ ನೇಪಾಳ ಸರ್ಕಾರ ಭಾರತದಿಂದ ರಕ್ಷಣಾ ನೆರವು ಕೋರಿದರೆ, ಕೆಲವು NDRF ತಂಡಗಳನ್ನು ಭಾರತೀಯ ವಾಯುಪಡೆಯ ಗಾಜಿಯಾಬಾದ್ ನಿಲ್ದಾಣದಿಂದ ಏರ್ಲಿಫ್ಟ್ ಮಾಡಿ ನೇಪಾಳಕ್ಕೆ ಕಳುಹಿಸಲು ಸಿದ್ಧತೆ ಮಾಡಲಾಗಿದೆ.
ಸದ್ಯ ನೇಪಾಳದ ಪ್ರವಾಹ ಪರಿಸ್ಥಿತಿ, ಗಂಡಕ್ ನದಿಯ ನೀರಿನ ಮಟ್ಟ ಹಾಗೂ ಗಡಿ ಭಾಗದ ಸ್ಥಿತಿಗತಿಗಳ ಮೇಲೆ ಭಾರತೀಯ ಅಧಿಕಾರಿಗಳು ನಿರಂತರವಾಗಿ ನಿಗಾ ವಹಿಸುತ್ತಿದ್ದಾರೆ.





