ಸುಭಿಕ್ಷವಾದ ಭಾರತದಲ್ಲಿ ಎಲ್ಲ ಜನಾಂಗದ ಜನರು ಸೌಹಾರ್ದತೆಯಿಂದ ವಾಸಿಸುತ್ತಿದ್ದಾರೆ. ದೇಶದಲ್ಲಿ ಸಂಪನ್ಮೂಲಗಳಿಗೇನೂ ಕೊರತೆಯಿಲ್ಲದಿದ್ದರೂ, ನೆರೆಯ ಪಾಕಿಸ್ತಾನವು ಗಡಿ ಭಾಗದಲ್ಲಿ ಪ್ರಚೋದನಕಾರಿ ಚಟುವಟಿಕೆಗಳು ಹಾಗೂ ಸಿಂಧೂ ನದಿ ನೀರು ಹಂಚಿಕೆ ವಿಚಾರದಲ್ಲಿ ಸದಾ ಕಿರಿಕಿರಿ ಉಂಟುಮಾಡುತ್ತಿತ್ತು. ಇದರಿಂದಾಗಿ ಲಡಾಖ್ ನ ಗಡಿ ಪ್ರದೇಶದ ಭಾರತೀಯ ರೈತರು ತಮ್ಮದೇ ಭೂಭಾಗದಲ್ಲಿದ್ದರೂ ಜಲಕ್ಷಾಮ ಎದುರಿಸುವಂತಾಗಿತ್ತು. ಇದೀಗ ಆ ಸಮಸ್ಯೆಗೆ ಭಾರತೀಯ ಆಡಳಿತ ಬ್ರೇಕ್ ಹಾಕಿದೆ.
ಪಾಕ್ ಗೆ ಹರಿಯುತ್ತಿದ್ದ ನೀರು ಬಂದ್-ಹನಿ ನೀರಿಗೂ ಪರದಾಟ:
ಇಷ್ಟೂ ದಿನ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ನೆಪವಾಗಿಟ್ಟುಕೊಂಡು ಶೋಕಿ ಮಾಡುತ್ತಿದ್ದ ಪಾಕಿಸ್ತಾನಕ್ಕೆ ಭಾರತ ತಕ್ಕ ಉತ್ತರವನ್ನೇ ನೀಡಿದೆ. ಭಾರತದ ಗಡಿಯಿಂದ ಹರಿದು ಪಾಕಿಸ್ತಾನಕ್ಕೆ ಸೇರುತ್ತಿದ್ದ ಹಿಮನದಿಯ ನೀರನ್ನು ಭಾರತ ತನ್ನ ಭೂಭಾಗದಲ್ಲೇ ಸದ್ಬಳಕೆ ಮಾಡಿಕೊಳ್ಳಲು ಆರಂಭಿಸಿದೆ. ಇದರಿಂದಾಗಿ ಪಾಕಿಸ್ತಾನಕ್ಕೆ ಹರಿಯುತ್ತಿದ್ದ ಅಪಾರ ಪ್ರಮಾಣದ ನೀರು ಸ್ಥಗಿತಗೊಂಡಿದ್ದು, ಪಾಕ್ ಇದೀಗ ಜಲ ಬಿಕ್ಕಟ್ಟಿಗೆ ಸಿಲುಕಿ ಭಾರತದ ಮುಂದೆ ಮನವಿ ಮಾಡುವ ಸ್ಥಿತಿಗೆ ತಲುಪಿದೆ.
12 ಹಳ್ಳಿಗಳಿಗೆ ಜೀವಜಲ-ದಿನವೂ ಹರಿಯಲಿದೆ ನೀರು:
ಈ ಹಿಂದೆ ಸೂಕ್ತ ಕಾಲುವೆ ವ್ಯವಸ್ಥೆಯಿಲ್ಲದೆ, ಗ್ಲೇಷಿಯರ್ ಕರಗಿದ ನೀರು ಸಿಂಧೂ ನದಿ ಸೇರಿ ಪಾಕಿಸ್ತಾನಕ್ಕೆ ಹರಿದುಹೋಗುತ್ತಿತ್ತು. ಇದರಿಂದಾಗಿ ಲಡಾಖ್ ಭಾಗದ ಭಾರತಕ್ಕೆ ಸೇರಿದ 12 ಕ್ಕೂ ಹೆಚ್ಚು ಹಳ್ಳಿಗಳು ಹನಿ ನೀರಿಗೂ ಪರದಾಡುತ್ತಿದ್ದವು. ಸಾವಿರಾರು ಎಕರೆ ಭೂಮಿಯಲ್ಲಿದ್ದ ಸೇಬು, ಬಟಾಣಿ ಹಾಗೂ ಧಾನ್ಯಗಳ ಬೆಳೆಗಳು ಒಣಗಿ ರೈತರು ಸಂಕಷ್ಟದಲ್ಲಿದ್ದರು.
ಅಗಸ್ಟ್ 14 ರಂದು ಲಡಾಖ್ ನ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರು ಈ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಅವರು, ಜೆಸಿಬಿಗಳ ಮೂಲಕ ಚರಂಡಿ/ಕಾಲುವೆಗಳನ್ನು (Igoo-Phey Canal) ಕೊರೆಸಿ, ದಿನವೊಂದಕ್ಕೆ ವ್ಯರ್ಥವಾಗುತ್ತಿದ್ದ ಬರೋಬ್ಬರಿ 9 ಕೋಟಿ ಲೀಟರ್ (36.6 Cusecs) ನೀರನ್ನು ಭಾರತದ ಹಳ್ಳಿಗಳ ಕಡೆಗೆ ತಿರುಗಿಸುವ ವ್ಯವಸ್ಥೆ ಮಾಡಿದ್ದಾರೆ.
ಈ ಮೊದಲು ವಾರಕ್ಕೆ ಒಮ್ಮೆ ಮಾತ್ರ ನೀರು ಕಾಣುತ್ತಿದ್ದ ಲಡಾಖ್ ನ ರೈತರು, ಇದೀಗ ಪ್ರತಿದಿನವೂ ತಮ್ಮ ಕೃಷಿ ಭೂಮಿಗೆ ನೀರು ಹರಿಯುತ್ತಿರುವುದನ್ನು ಕಂಡು ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಭಾರತದ ಈ ದಿಟ್ಟ ನಿರ್ಧಾರವು ತನ್ನ ದೇಶದ ರೈತರ ಹಿತ ಕಾಯುವ ಜತೆಗೆ, ಪಾಕಿಸ್ತಾನಕ್ಕೂ ಸೂಕ್ತ ತಿರುಗೇಟು ನೀಡಿದಂತಾಗಿದೆ.





