ನವದೆಹಲಿ, ಡಿ.12: ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರು ಈ ಬಾರಿ ಸಂಪೂರ್ಣ ವಿಭಿನ್ನ ರೂಪದಲ್ಲಿ ಸಾರ್ವಜನಿಕರ ಗಮನ ಸೆಳೆದಿದ್ದಾರೆ. ಬ್ಲಿಂಕಿಟ್ ಡೆಲಿವರಿ ರೈಡರ್ ಆಗಿ ಕೆಲಸ ಮಾಡುತ್ತಿರುವ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ..
ರಾಜಕೀಯ ನಾಯಕರೊಬ್ಬರು ಬ್ಲಿಂಕಿಟ್ ಡೆಲಿವರಿ ಬಾಯ್ ಆಗಿ ವೃತ್ತಿಯೊಂದನ್ನು ಅನುಭವಿಸುವುದು ಅಪರೂಪ. ಆದರೆ ದಿನನಿತ್ಯದ ಡೆಲಿವರಿ ಏಜೆಂಟ್ಗಳು ಎದುರಿಸುವ ಸಂಕಷ್ಟಗಳು, ಒತ್ತಡಗಳು ಹಾಗೂ ಅಸಮಾನತೆಯನ್ನು ಹತ್ತಿರದಿಂದ ಅರ್ಥಮಾಡಿಕೊಳ್ಳಲು ರಾಘವ್ ಚಡ್ಡಾ ಅವರು ಈ ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಬ್ಲಿಂಕಿಟ್ ಸಂಸ್ಥೆಯ ಬ್ರಾಂಡ್ ಟೀ-ಶರ್ಟ್ ಹಾಗೂ ಜಾಕೆಟ್ ಧರಿಸಿ, ಸ್ಕೂಟರ್ ಮೇಲೆ ಕುಳಿತು ಸಾಮಾನ್ಯ ಡೆಲಿವರಿ ಪಾರ್ಟ್ನರ್ ಜೊತೆಗೂಡಿ ಆರ್ಡರ್ ಪೂರೈಸಲು ತೆರಳಿರುವ ದೃಶ್ಯಗಳು ವಿಡಿಯೋದಲ್ಲಿ ಕಾಣಿಸಿಕೊಂಡಿವೆ.
ಈ ಸಣ್ಣ ಕ್ಲಿಪ್ನಲ್ಲಿ ಅಂಗಡಿಯಿಂದ ವಸ್ತುಗಳನ್ನು ಸಂಗ್ರಹಿಸುವುದು, ಟ್ರಾಫಿಕ್ ನಡುವೆಯೇ ಗ್ರಾಹಕರ ಮನೆಗಳಿಗೆ ವಿತರಣೆಗೆ ತೆರಳುವುದು, ಸಮಯದ ಒತ್ತಡದಲ್ಲಿ ಕೆಲಸ ಮಾಡುವ ಅನುಭವ ಇವೆಲ್ಲವೂ ಸ್ಪಷ್ಟವಾಗಿ ಕಾಣುತ್ತವೆ. ಆರಂಭದಿಂದ ಅಂತ್ಯದವರೆಗೆ ಡೆಲಿವರಿ ರೈಡರ್ಗಳ ದಿನಚರಿಯ ಅನುಭವವನ್ನು ಚಡ್ಡಾ ಅವರು ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ.
ತಮ್ಮ ಅನುಭವದ ಬಗ್ಗೆ ಮಾತನಾಡಿರುವ ರಾಘವ್ ಚಡ್ಡಾ, “ಬೋರ್ಡ್ ರೂಮ್ಗಳು ಮತ್ತು ಸಂಸತ್ ಸಭಾಂಗಣಗಳಿಂದ ಹೊರಬಂದು ನೈಜ ಬದುಕಿನ ಹೋರಾಟವನ್ನು ಅರಿತುಕೊಳ್ಳಬೇಕೆಂದು ಈ ಪ್ರಯತ್ನ ಮಾಡಿದೆ. ಗಿಗ್ ಕಾರ್ಮಿಕರು ಎದುರಿಸುವ ಒತ್ತಡ, ಕಡಿಮೆ ಆದಾಯ, ಸಾಮಾಜಿಕ ಭದ್ರತೆಯ ಕೊರತೆ ಇವೆಲ್ಲವನ್ನು ಹತ್ತಿರದಿಂದ ನೋಡುವುದು ಈ ಸಾಹಸದ ಉದ್ದೇಶ” ಎಂದು ತಿಳಿಸಿದ್ದಾರೆ. ಶೀಘ್ರದಲ್ಲೇ ಈ ಕುರಿತು ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳುವುದಾಗಿ ಅವರು ಹೇಳಿದ್ದಾರೆ.
Away from boardrooms, at the grassroots. I lived their day.
Stay tuned! pic.twitter.com/exGBNFGD3T
— Raghav Chadha (@raghav_chadha) January 12, 2026
ಇತ್ತೀಚೆಗೆ ಡೆಲಿವರಿ ಉದ್ಯೋಗಿಗಳಿಗೆ ಸಂಬಂಧಿಸಿದ ವಿಚಾರಗಳು ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿವೆ. ಕಳೆದ ಡಿಸೆಂಬರ್ನಲ್ಲಿ ಬ್ಲಿಂಕಿಟ್ ಡೆಲಿವರಿ ಸಿಬ್ಬಂದಿಯೊಬ್ಬರ ಆದಾಯದ ಕುರಿತ ವಿಡಿಯೋ ವೈರಲ್ ಆಗಿತ್ತು. ದಿನಕ್ಕೆ 12 ರಿಂದ 14 ಗಂಟೆಗಳ ಕಾಲ ದುಡಿಯಬೇಕಾದ ಅನಿವಾರ್ಯತೆ, ಸರಿಯಾದ ಸಂಬಳದ ಕೊರತೆ ಹಾಗೂ ಭವಿಷ್ಯದ ಭದ್ರತೆ ಇಲ್ಲದಿರುವ ಬಗ್ಗೆ ವ್ಯಾಪಕ ಚರ್ಚೆ ನಡೆಯಿತು. ಈ ವಿಚಾರವನ್ನು ರಾಘವ್ ಚಡ್ಡಾ ಅವರು ಸಂಸತ್ತಲ್ಲಿಯೂ ಪ್ರಸ್ತಾಪಿಸಿ, ಗಿಗ್ ಕಾರ್ಮಿಕರ ಹಕ್ಕುಗಳ ಬಗ್ಗೆ ಧ್ವನಿ ಎತ್ತಿದ್ದರು.
ಅಷ್ಟೇ ಅಲ್ಲ, ಈ ಹಿಂದೆ ಅವರು ಡೆಲಿವರಿ ಸಿಬ್ಬಂದಿಯನ್ನು ತಮ್ಮ ನಿವಾಸಕ್ಕೆ ಆಹ್ವಾನಿಸಿ, ಅವರ ಸಮಸ್ಯೆಗಳನ್ನು ನೇರವಾಗಿ ಆಲಿಸಿದ್ದರು. ಇದೀಗ ಸ್ವತಃ ಅವರೇ ಡೆಲಿವರಿ ರೈಡರ್ ಆಗಿ ಕೆಲಸ ಮಾಡಿ ಅನುಭವ ಪಡೆದಿರುವುದು ಸಾರ್ವಜನಿಕರಲ್ಲಿ ಹೆಚ್ಚಿನ ಕುತೂಹಲ ಮೂಡಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕರು “ಮಾತಿಗಿಂತ ಅನುಭವಕ್ಕೆ ಮಹತ್ವ ನೀಡಿದ ನಾಯಕ” ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಈ ಅನುಭವದ ನಂತರ ಗಿಗ್ ಕಾರ್ಮಿಕರ ಹಿತಕ್ಕಾಗಿ ಯಾವ ನೀತಿ ಬದಲಾವಣೆಗಳನ್ನು ಅವರು ಮುಂದಿಟ್ಟುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡುತ್ತಿದ್ದಾರೆ.





