ಚೆನ್ನೈ: ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಕನ್ನಡದ ಕಣ್ಮಣಿ ಡಾ. ರಾಜ್ಕುಮಾರ್ ಅಪಹರಣ ಪ್ರಕರಣದ ಕಾನೂನು ಹೋರಾಟಕ್ಕೆ ಬರೋಬ್ಬರಿ ಕಾಲು ಶತಮಾನದ ಬಳಿಕ ಅಂತ್ಯ ಸಿಕ್ಕಿದೆ. ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆನ್ನಲಾದ ವೀರಪ್ಪನ್ನ ಒಂಬತ್ತು ಸಹಚರರನ್ನು ಮದ್ರಾಸ್ ಹೈಕೋರ್ಟ್ ಬುಧವಾರ ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿದೆ.
ಹೈಕೋರ್ಟ್ ತೀರ್ಪಿನ ಹಿನ್ನೆಲೆ
2018ರಲ್ಲಿ ಈರೋಡ್ನ ಗೋಪಿಚೆಟ್ಟಿಪಾಳ್ಯಂನ ಸೆಷನ್ಸ್ ನ್ಯಾಯಾಲಯವು ಸಾಕ್ಷ್ಯಾಧಾರಗಳ ಕೊರತೆಯಿಂದ ಈ ಒಂಬತ್ತು ಮಂದಿಯನ್ನು ಬಿಡುಗಡೆಗೊಳಿಸಿತ್ತು. ಇದನ್ನು ಪ್ರಶ್ನಿಸಿ ತಮಿಳುನಾಡು ಪೊಲೀಸರು ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಪಿ. ವೇಲ್ಮುರುಗನ್ ಮತ್ತು ಎಂ. ಜ್ಯೋತಿರಾಮನ್ ಅವರ ವಿಭಾಗೀಯ ಪೀಠವು, ಆರೋಪಿಗಳ ವಿರುದ್ಧದ ಅಪರಾಧವನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಅಭಿಪ್ರಾಯಪಟ್ಟು ಕೆಳ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿದೆ.
ಪೊಲೀಸರ ವೈಫಲ್ಯ ಎಲ್ಲಿ?
ನ್ಯಾಯಾಲಯದ ಗಮನಕ್ಕೆ ಬಂದಂತೆ, ಈ ಪ್ರಕರಣದಲ್ಲಿ ತನಿಖಾ ಸಂಸ್ಥೆಗಳು ಹಲವು ಲೋಪಗಳನ್ನು ಎಸಗಿವೆ. ಇದಕ್ಕೆ ಸಂಬಂಧಿಸಿದಂತೆ ಸ್ವತಃ ಅಪಹರಣಕ್ಕೊಳಗಾಗಿದ್ದ ಡಾ. ರಾಜ್ಕುಮಾರ್ ಅಥವಾ ಅವರ ಪತ್ನಿ ಪಾರ್ವತಮ್ಮ ಅವರನ್ನು ಪೊಲೀಸರು ಪೂರ್ಣಪ್ರಮಾಣದಲ್ಲಿ ವಿಚಾರಣೆ ನಡೆಸಿ ಸಾಕ್ಷಿ ದಾಖಲಿಸಿರಲಿಲ್ಲ. ರಾಜ್ ಬಿಡುಗಡೆಗಾಗಿ ಕಾಡಿಗೆ ತೆರಳಿದ್ದ ಮಧ್ಯಸ್ಥಿಕೆದಾರರನ್ನು ಸಹ ಪೊಲೀಸರು ಸರಿಯಾಗಿ ಪ್ರಶ್ನಿಸಿರಲಿಲ್ಲ.ಬಂಧಿತ 9 ಮಂದಿ ಮತ್ತು ವೀರಪ್ಪನ್ ನಡುವಿನ ನೇರ ಸಂಬಂಧವನ್ನು ಸಾಬೀತುಪಡಿಸುವ ಯಾವುದೇ ಗಟ್ಟಿಯಾದ ದಾಖಲೆಗಳನ್ನು ಒದಗಿಸುವಲ್ಲಿ ಪೊಲೀಸ್ ಇಲಾಖೆ ಸೋತಿದೆ.
ಆ 108 ದಿನಗಳ ಕರಾಳ ನೆನಪು
ಜುಲೈ 30, 2000ರಂದು ತಮಿಳುನಾಡಿನ ಗಡಿಭಾಗದ ದೊಡ್ಡ ಗಾಜನೂರು ತೋಟದ ಮನೆಯಲ್ಲಿದ್ದ ಡಾ. ರಾಜ್ಕುಮಾರ್ ಅವರನ್ನು ದಂತಚೋರ ವೀರಪ್ಪನ್ ಮತ್ತು ಆತನ ತಂಡ ಅಪಹರಿಸಿತ್ತು. ರಾಜ್ ಅವರೊಂದಿಗೆ ಸಂಬಂಧಿಕರಾದ ಗೋವಿಂದರಾಜ್, ನಾಗೇಶ್ ಮತ್ತು ನಾಗಪ್ಪ ಅವರನ್ನೂ ಕಿಡ್ನಾಪ್ ಮಾಡಲಾಗಿತ್ತು. ಇಡೀ ಕರ್ನಾಟಕವೇ ಸ್ತಬ್ಧಗೊಂಡಿದ್ದ ಆ ಸಮಯದಲ್ಲಿ, 108 ದಿನಗಳ ಕಾಲ ಕಾಡಿನಲ್ಲಿ ವನವಾಸ ಅನುಭವಿಸಿದ ರಾಜ್ಕುಮಾರ್, ಅಂತಿಮವಾಗಿ ನವೆಂಬರ್ 15ರಂದು ಬಿಡುಗಡೆಯಾಗಿದ್ದರು.
ಈ ಪ್ರಕರಣದಲ್ಲಿ ಒಟ್ಟು 14 ಮಂದಿಯ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಆದರೆ, 2004ರಲ್ಲಿ ನಡೆದ ‘ಆಪರೇಷನ್ ಕಕೂನ್’ ಎನ್ಕೌಂಟರ್ನಲ್ಲಿ ವೀರಪ್ಪನ್ ಸೇರಿದಂತೆ ಪ್ರಮುಖ ಆರೋಪಿಗಳಾದ ಸೇತುಕುಳಿ ಗೋವಿಂದನ್ ಮತ್ತು ಚಂದ್ರಗೌಡ ಮೃತಪಟ್ಟಿದ್ದರು. ಮತ್ತೊಬ್ಬ ಆರೋಪಿ ಮಲ್ಲು ತನಿಖೆಯ ಹಂತದಲ್ಲೇ ಸಾವನ್ನಪ್ಪಿದ್ದ. ಉಳಿದ 9 ಮಂದಿ (ಗೋವಿಂದರಾಜ್, ಆಂಡ್ರಿಲ್, ಪಸುವಣ್ಣ, ಪುಟ್ಟುಸಾಮಿ, ಕಲ್ಮಂಡಿರಾಮನ್, ಮಾರನ್, ಸೆಲ್ವಂ, ಅಮೃತಲಿಂಗಂ ಮತ್ತು ನಾಗರಾಜ್) ಕಳೆದ 18 ವರ್ಷಗಳಿಂದ ವಿಚಾರಣೆ ಎದುರಿಸುತ್ತಿದ್ದರು. ಇಂದಿನ ಹೈಕೋರ್ಟ್ ತೀರ್ಪಿನಿಂದಾಗಿ ಅವರೆಲ್ಲರೂ ಈಗ ಕಾನೂನುಬದ್ಧವಾಗಿ ದೋಷಮುಕ್ತರಾಗಿದ್ದಾರೆ.





