ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಸಂಸ್ಥಾಪಕ ಹಾಗೂ ಮಾಜಿ ಆಯುಕ್ತ ಲಲಿತ್ ಮೋದಿ ಹಲವು ವರ್ಷಗಳ ಬಳಿಕ ಅಚ್ಚರಿ ಹೇಳಿಕೆಯೊಂದನ್ನು ನೀಡಿದ್ದಾರೆ. ಕ್ರಿಕೆಟ್ ಆಡಳಿತದಿಂದ ಶಾಶ್ವತವಾಗಿ ದೂರ ಸರಿಯಲು ಅಂಡರ್ವರ್ಲ್ಡ್ ಡಾನ್ ದಾವೂದ್ ಇಬ್ರಾಹಿಂ ಮತ್ತು ಆತನ ಡಿ-ಕಂಪನಿಯಿಂದ ಬಂದಿದ್ದ ನಿರಂತರ ಜೀವ ಬೆದರಿಕೆಗಳೇ ಪ್ರಮುಖ ಕಾರಣ ಎಂದು ಅವರು ತಿಳಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಲಲಿತ್ ಮೋದಿ, ಐಪಿಎಲ್ನಲ್ಲಿ ಅಕ್ರಮ ಬೆಟ್ಟಿಂಗ್ ಮತ್ತು ಸ್ಪಾಟ್ ಫಿಕ್ಸಿಂಗ್ ವಿರುದ್ಧ ತಾವು ಕೈಗೊಂಡ ಕಠಿಣ ಕ್ರಮಗಳೇ ಅಂಡರ್ವರ್ಲ್ಡ್ ಕೋಪಕ್ಕೆ ಕಾರಣವಾಗಿದ್ದವು ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಮೇಲೆ ಹಲವು ಬಾರಿ ಹತ್ಯೆ ಸಂಚು ರೂಪಿಸಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ.
ಲಲಿತ್ ಮೋದಿ ಅವರ ಪ್ರಕಾರ, 2012ರಲ್ಲಿ ಲಂಡನ್ನಲ್ಲಿ ನಡೆದ ಘಟನೆಯೊಂದು ತಮ್ಮ ಜೀವನದ ಅತ್ಯಂತ ಭಯಾನಕ ಅನುಭವವಾಗಿತ್ತು. ಮಧ್ಯರಾತ್ರಿ ವೇಳೆ ಲಂಡನ್ ಮೂಲದ ಫಿಕ್ಸರ್ ಒಬ್ಬರಿಂದ ಕರೆ ಬಂದಿದ್ದು, ಪ್ರಭಾವಿ ಮಧ್ಯವರ್ತಿಯೊಬ್ಬರ ಪೆಂಟ್ಹೌಸ್ಗೆ ಬರಲು ಒತ್ತಡ ಹೇರಲಾಗಿತ್ತು. ಅಲ್ಲಿಗೆ ತೆರಳಿದ ಬಳಿಕ ಆ ವ್ಯಕ್ತಿ ಸ್ಯಾಟಲೈಟ್ ಫೋನ್ ಮೂಲಕ ದಾವೂದ್ ಇಬ್ರಾಹಿಂಗೆ ಕರೆ ಮಾಡಿ, ಸ್ಪೀಕರ್ನಲ್ಲಿ ಮಾತುಕತೆ ಕೇಳುವಂತೆ ಮಾಡಿದ್ದ ಎಂದು ಮೋದಿ ಹೇಳಿದ್ದಾರೆ.
ಆ ಸಂದರ್ಭದಲ್ಲಿ ದಾವೂದ್ ನೇರವಾಗಿ “ಇಂದಿನಿಂದ ನಿನ್ನ ಆಟ ಮುಗಿಯಿತು” ಎಂಬ ಎಚ್ಚರಿಕೆಯ ಮಾತು ಹೇಳಿದ್ದಾನೆ ಎಂದು ಲಲಿತ್ ಮೋದಿ ನೆನಪಿಸಿಕೊಂಡಿದ್ದಾರೆ. ಈ ಘಟನೆಯ ಬಳಿಕ ತಮ್ಮ ಮೇಲೆ ಒತ್ತಡ ಮತ್ತಷ್ಟು ಹೆಚ್ಚಾಗಿದ್ದು, ಐಪಿಎಲ್ ಫ್ರಾಂಚೈಸಿಯೊಂದರ ನಿಯಂತ್ರಣ ನೀಡುವಂತೆ ಹಾಗೂ ಬೆಟ್ಟಿಂಗ್ ಜಾಲಕ್ಕೆ ಉಂಟಾದ ನಷ್ಟವನ್ನು ಭರಿಸುವಂತೆ ಅಂಡರ್ವರ್ಲ್ಡ್ ಒತ್ತಾಯಿಸಿತ್ತು ಎಂದು ಅವರು ಹೇಳಿದ್ದಾರೆ.
2009ರಲ್ಲಿ ಭಾರತದಲ್ಲಿ ಲೋಕಸಭೆ ಚುನಾವಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಐಪಿಎಲ್ ಟೂರ್ನಿಯನ್ನು ದಕ್ಷಿಣ ಆಫ್ರಿಕಾಕ್ಕೆ ಸ್ಥಳಾಂತರಿಸುವ ನಿರ್ಧಾರವೂ ಅಂಡರ್ವರ್ಲ್ಡ್ ಅಸಮಾಧಾನಕ್ಕೆ ಕಾರಣವಾಗಿತ್ತು ಎಂದು ಮೋದಿ ತಿಳಿಸಿದ್ದಾರೆ. ಚುನಾವಣೆ ಕಾರಣದಿಂದ ಟೂರ್ನಿ ರದ್ದಾಗಬಹುದು ಎಂದು ಭಾವಿಸಿ ಬುಕ್ಕಿಗಳು ಕೋಟ್ಯಂತರ ರೂಪಾಯಿಗಳ ಬೆಟ್ಟಿಂಗ್ ನಡೆಸಿದ್ದರು. ಆದರೆ ಟೂರ್ನಿ ಯಶಸ್ವಿಯಾಗಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಪರಿಣಾಮ ಅವರಿಗೆ ಭಾರೀ ಆರ್ಥಿಕ ನಷ್ಟ ಉಂಟಾಗಿತ್ತು.
ಇದಕ್ಕೂ ಮೊದಲು 2008ರಿಂದ 2010ರವರೆಗೆ ಐಪಿಎಲ್ ಮುಖ್ಯಸ್ಥರಾಗಿದ್ದ ಅವಧಿಯಲ್ಲಿ ಸ್ಪಾಟ್ ಫಿಕ್ಸಿಂಗ್ ಹಾಗೂ ಅಕ್ರಮ ಬೆಟ್ಟಿಂಗ್ ವಿರುದ್ಧ ಮೋದಿ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದರು. ಈ ಹಿನ್ನೆಲೆ ಅಂಡರ್ವರ್ಲ್ಡ್ನಿಂದ ಬಂದಿದ್ದ ಕೋಟ್ಯಂತರ ಡಾಲರ್ಗಳ ಆಮಿಷವನ್ನೂ ತಿರಸ್ಕರಿಸಿದ್ದಾಗಿ ಅವರು ಹೇಳಿದ್ದಾರೆ.
ತಮ್ಮ ಹೇಳಿಕೆಯ ಪ್ರಕಾರ, ಮುಂಬೈನಲ್ಲಿ ತಮ್ಮ ನಿವಾಸದ ಹೊರಗೆ ಗುಂಡಿನ ದಾಳಿ ನಡೆದಿತ್ತು. ಜೊತೆಗೆ ದಕ್ಷಿಣ ಆಫ್ರಿಕಾ ಹಾಗೂ ಲಂಡನ್ನಲ್ಲಿ ತಮ್ಮ ಹತ್ಯೆಗೆ ಸಂಚು ರೂಪಿಸಲಾಗಿತ್ತು. ತಮ್ಮ ಮಗನನ್ನು ಅಪಹರಿಸುವ ಯತ್ನವೂ ನಡೆದಿತ್ತು ಎಂದು ಮೋದಿ ಆರೋಪಿಸಿದ್ದಾರೆ.
ಈ ಎಲ್ಲಾ ಘಟನೆಗಳ ಬಳಿಕ ಕ್ರಿಕೆಟ್ ಆಡಳಿತದಿಂದ ಸಂಪೂರ್ಣ ದೂರ ಸರಿಯುವುದೇ ಸುರಕ್ಷಿತ ಮಾರ್ಗ ಎಂದು ತೀರ್ಮಾನಿಸಿದ್ದಾಗಿ ಮೋದಿ ತಿಳಿಸಿದ್ದಾರೆ. ತಾವು ಯಾವುದೇ ರಾಜಿ ಮಾಡಿಕೊಂಡಿಲ್ಲ. ಬದಲಿಗೆ ಕ್ರಿಕೆಟ್ ಕ್ಷೇತ್ರದಿಂದ ಹಿಂದೆ ಸರಿಯುವುದಾಗಿ ಹೇಳಿದ ಬಳಿಕವೇ ತಮ್ಮ ವಿರುದ್ಧದ ಬೆದರಿಕೆಗಳು ಕಡಿಮೆಯಾದವು ಎಂದು ಅವರು ಹೇಳಿದ್ದಾರೆ.
“ದಾವೂದ್ ಇಬ್ರಾಹಿಂ ನನ್ನನ್ನು ಕ್ರಿಕೆಟ್ನಿಂದ ಹೊರದಬ್ಬಲು ಪ್ರಮುಖ ಕಾರಣವೇ?” ಎಂಬ ಪ್ರಶ್ನೆಗೆ ಉತ್ತರಿಸಿದ ಮೋದಿ, “ಹೌದು, ಅದುವೇ ಅತಿ ದೊಡ್ಡ ಕಾರಣ” ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಐಪಿಎಲ್ ಅನ್ನು ಜಾಗತಿಕ ಮಟ್ಟದಲ್ಲಿ ಬ್ರ್ಯಾಂಡ್ ಆಗಿ ಬೆಳೆಸಿದ ಲಲಿತ್ ಮೋದಿ ಅವರ ಕ್ರಿಕೆಟ್ ಆಡಳಿತದ ಪಯಣ 2010ರಲ್ಲಿ ಅಂತ್ಯಗೊಂಡಿತ್ತು. ಆರ್ಥಿಕ ಅಕ್ರಮಗಳ ಆರೋಪದ ಹಿನ್ನೆಲೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅವರನ್ನು ಅಮಾನತುಗೊಳಿಸಿತ್ತು. ಬಳಿಕ 2013ರಲ್ಲಿ ನಿಷೇಧ ಹೇರಲಾಗಿತ್ತು.
ಅಂದಿನಿಂದ ಲಂಡನ್ನಲ್ಲಿ ನೆಲೆಸಿರುವ ಮೋದಿ ವಿರುದ್ಧ ವಿವಿಧ ತನಿಖೆಗಳು ಮುಂದುವರಿದಿದ್ದರೂ, ಭಾರತ ತೊರೆಯಲು ಮತ್ತು ಕ್ರಿಕೆಟ್ ಜಗತ್ತಿನಿಂದ ದೂರ ಸರಿಯಲು ಜೀವ ಬೆದರಿಕೆಗಳೇ ಪ್ರಮುಖ ಕಾರಣವಾಗಿದ್ದವು ಎಂಬುದನ್ನು ಅವರು ಇದೀಗ ಮೊದಲ ಬಾರಿಗೆ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.





