ಚಂಡೀಗಢ, ಫೆಬ್ರುವರಿ 25: ಐಡಿಎಫ್ಸಿ ಫಸ್ಟ್ ಬ್ಯಾಂಕ್ನ ಚಂಡೀಗಢ ಶಾಖೆಯಲ್ಲಿ ನಡೆದಿರುವ ₹590 ಕೋಟಿ ಮೌಲ್ಯದ ಭಾರೀ ವಂಚನೆ ಪ್ರಕರಣ ದೇಶವನ್ನೇ ನಡುಗಿಸಿದೆ. ಹರಿಯಾಣ ಸರ್ಕಾರದ ವಿವಿಧ ಇಲಾಖೆಗಳ ಖಾತೆಗಳಲ್ಲಿದ್ದ ಹಣವನ್ನು ಅಕ್ರಮವಾಗಿ ವರ್ಗಾಯಿಸಿದ ಪ್ರಕರಣದಲ್ಲಿ ಬ್ಯಾಂಕ್ನ ಮಾಜಿ ಬ್ರಾಂಚ್ ಮ್ಯಾನೇಜರ್ ರಿಭವ್ ರಿಷಿ ಮುಖ್ಯ ಆರೋಪಿಯಾಗಿದ್ದಾರೆ. ಈ ಹಗರಣವು ಸುಲಭವಾಗಿ ನಡೆಯಲಿಲ್ಲ, ಇದರ ಹಿಂದೆ ಪೂರ್ವ ಯೋಜಿತ ಮಾಸ್ಟರ್ ಪ್ಲಾನ್ ಕಾರ್ಯನಿರ್ವಹಿಸಿದೆ ಎಂದು ತನಿಖೆಯಲ್ಲಿ ಪತ್ತೆಯಾಗಿದೆ.
ಹರಿಯಾಣದ ಭ್ರಷ್ಟಾಚಾರ ವಿರೋಧಿ ದಳ (ACB) ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದು, ಮಾಜಿ ಬ್ರಾಂಚ್ ಮ್ಯಾನೇಜರ್ ರಿಭವ್ ರಿಷಿ, ಮಾಜಿ ರಿಲೇಶನ್ಶಿಪ್ ಮ್ಯಾನೇಜರ್ ಅಭಯ್, ರಿಭವ್ ಅವರ ಪತ್ನಿ ಸ್ವಾತಿ ಸಿಂಗ್ಲಾ ಹಾಗೂ ಆಕೆಯ ಸಹೋದರ ಅಭಿಷೇಕ್ ಸಿಂಗ್ಲಾ ಅವರನ್ನು ಬಂಧಿಸಿದೆ. ಅಧಿಕಾರಿಗಳ ಪ್ರಕಾರ, ಈ ನಾಲ್ವರೂ ಸೇರಿ ಸರ್ಕಾರಿ ಹಣವನ್ನು ಅಕ್ರಮವಾಗಿ ಬೇರೆ ಖಾತೆಗಳಿಗೆ ವರ್ಗಾಯಿಸುವ ಮೂಲಕ ದೊಡ್ಡ ಮಟ್ಟದ ವಂಚನೆ ನಡೆಸಿದ್ದಾರೆ.
ಪತ್ನಿಯ ಕಂಪನಿಗೆ ₹300 ಕೋಟಿ ವರ್ಗಾವಣೆ
ಹಗರಣದ ಒಟ್ಟು ಮೊತ್ತದಲ್ಲಿ ಸುಮಾರು ₹300 ಕೋಟಿ ಹಣವನ್ನು ‘ಸ್ವಸ್ತಿಕ್ ದೇಶ್ ಪ್ರಾಜೆಕ್ಟ್ಸ್’ ಎಂಬ ಖಾಸಗಿ ಕಂಪನಿಗೆ ವರ್ಗಾಯಿಸಲಾಗಿತ್ತು. ಈ ಕಂಪನಿಯಲ್ಲಿ ರಿಭವ್ ಅವರ ಪತ್ನಿ ಸ್ವಾತಿ ಸಿಂಗ್ಲಾ 75% ಪಾಲು ಹೊಂದಿದ್ದು, ಅವಳ ಸಹೋದರ ಅಭಿಷೇಕ್ ಸಿಂಗ್ಲಾ 25% ಪಾಲುದಾರರಾಗಿದ್ದಾರೆ. ಸರ್ಕಾರಿ ಇಲಾಖೆಗಳ ಹಣವನ್ನು ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಂಡಿದ್ದಾರೆ ಎನ್ನಲಾಗಿದೆ..
ತನಿಖಾಧಿಕಾರಿಗಳ ಹೇಳಿಕೆಯ ಪ್ರಕಾರ, ಈ ಹಣವನ್ನು ಮೊದಲು ಕಂಪನಿಯ ಖಾತೆಗೆ ಹಾಕಿ, ನಂತರ ಬೇರೆ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ವರ್ಗಾಯಿಸಲಾಗಿದೆ. ಇದರಿಂದ ಹಣದ ಹಾದಿಯನ್ನು ಪತ್ತೆಹಚ್ಚುವುದು ಕಷ್ಟವಾಗುವಂತೆ ಯೋಜನೆ ರೂಪಿಸಲಾಗಿತ್ತು.
ಹಗರಣ ಬೆಳಕಿಗೆ ಬಂದದ್ದು ಹೇಗೆ?
ಈ ಭಾರೀ ವಂಚನೆ ಆಕಸ್ಮಿಕವಾಗಿ ಬೆಳಕಿಗೆ ಬಂದಿದೆ. ಹರಿಯಾಣ ಸರ್ಕಾರದ ಒಂದು ಇಲಾಖೆ ತನ್ನ ಖಾತೆಯನ್ನು ಮುಚ್ಚಿ, ಹಣವನ್ನು ಮತ್ತೊಂದು ಬ್ಯಾಂಕ್ಗೆ ವರ್ಗಾಯಿಸಲು ಕೋರಿಕೆ ಸಲ್ಲಿಸಿತು. ಈ ಪ್ರಕ್ರಿಯೆಯ ವೇಳೆ ಬ್ಯಾಂಕ್ ದಾಖಲೆಗಳಲ್ಲಿ ತೋರಿದ ಮೊತ್ತ ಮತ್ತು ವಾಸ್ತವಿಕ ಖಾತೆ ಶೇಷದ ನಡುವೆ ಭಾರೀ ವ್ಯತ್ಯಾಸ ಕಂಡುಬಂದಿತು. ಇದೇ ರೀತಿಯ ವ್ಯತ್ಯಾಸ ಇತರ ಸರ್ಕಾರಿ ಖಾತೆಗಳಲ್ಲೂ ಪತ್ತೆಯಾಗುತ್ತಿದ್ದಂತೆ, ವಿಷಯ ಗಂಭೀರ ಸ್ವರೂಪ ಪಡೆದುಕೊಂಡಿತು.
ಪ್ರಾಥಮಿಕ ತನಿಖೆಯಲ್ಲಿ ಒಳಗಿನ ಸಿಬ್ಬಂದಿಯೇ ಈ ಕೃತ್ಯದಲ್ಲಿ ಭಾಗಿಯಾಗಿರುವುದು ಸ್ಪಷ್ಟವಾಯಿತು. ಬಳಿಕ ಎಸಿಬಿ ತನಿಖೆ ಆರಂಭಿಸಿ, ದಾಖಲೆಗಳು ಹಾಗೂ ಡಿಜಿಟಲ್ ಟ್ರೇಲ್ ಪರಿಶೀಲಿಸಿದಾಗ, ಹಗರಣದ ಸಂಪೂರ್ಣ ರೂಪ ಬಯಲಾಯಿತು.
ರಾಜೀನಾಮೆ ನೀಡಿ ಮರೆಯಾಗಿದ್ದ ಆರೋಪಿಗಳು
ಈ ಪ್ರಕರಣದ ಪ್ರಮುಖ ಆರೋಪಿಗಳಾದ ರಿಭವ್ ಮತ್ತು ಅಭಯ್ ಸುಮಾರು ಆರು ತಿಂಗಳ ಹಿಂದೆ ಬ್ಯಾಂಕ್ ಸೇವೆಯಿಂದ ರಾಜೀನಾಮೆ ನೀಡಿದ್ದರು. ಇದೂ ಕೂಡಾ ತನಿಖಾಧಿಕಾರಿಗಳಿಗೆ ಅನುಮಾನ ಹುಟ್ಟಿಸಿತು. ಎಸಿಬಿ ಮಹಾನಿರ್ದೇಶಕ ಎ.ಎಸ್. ಚಾವ್ಲಾ ಅವರ ಪ್ರಕಾರ, ಆರೋಪಿಗಳು ಪೂರ್ವಭಾವಿಯಾಗಿ ಯೋಜನೆ ರೂಪಿಸಿ ನಂತರ ಸೇವೆಯಿಂದ ಹೊರಬಂದಿರುವ ಸಾಧ್ಯತೆಯನ್ನೂ ಪರಿಶೀಲಿಸಲಾಗುತ್ತಿದೆ.
ಇದಲ್ಲದೆ, ಹರಿಯಾಣದ ಸರ್ಕಾರಿ ಇಲಾಖೆಗಳ ಖಾತೆಯನ್ನು ರಾಜ್ಯದ ವ್ಯಾಪ್ತಿಯ ಹೊರಗೆ ಚಂಡೀಗಢದಲ್ಲಿ ತೆರೆಯಲು ಹಿರಿಯ ಮ್ಯಾನೇಜ್ಮೆಂಟ್ ಹೇಗೆ ಅನುಮತಿ ನೀಡಿತು ಎಂಬುದರ ಕುರಿತಾಗಿ ತನಿಖೆ ಮುಂದುವರಿದಿದೆ.
ಬ್ಯಾಂಕ್ನಿಂದ ₹583 ಕೋಟಿ ಮರುಪಾವತಿ
ಪ್ರಕರಣ ಬೆಳಕಿಗೆ ಬಂದ ತಕ್ಷಣ ಐಡಿಎಫ್ಸಿ ಫಸ್ಟ್ ಬ್ಯಾಂಕ್ ಮಹತ್ವದ ನಿರ್ಧಾರ ಕೈಗೊಂಡಿದೆ. ಹರಿಯಾಣ ಸರ್ಕಾರದ ಇಲಾಖೆಗಳು ಕ್ಲೈಮ್ ಮಾಡಿದ ಅಸಲು ಮತ್ತು ಬಡ್ಡಿ ಸೇರಿ ಒಟ್ಟು ₹583 ಕೋಟಿ ಮೊತ್ತವನ್ನು ಬ್ಯಾಂಕ್ ಮರುಪಾವತಿಸಿದೆ. “ಗ್ರಾಹಕರಿಗೆ ಮೊದಲ ಆದ್ಯತೆ” ಎಂಬ ತತ್ವದಡಿ ನಾವು ಹಣವನ್ನು ತಡೆಹಿಡಿಯದೆ ಮರುಪಾವತಿ ಮಾಡಿದ್ದೇವೆ ಎಂದು ಬ್ಯಾಂಕ್ ಪ್ರಕಟಣೆ ತಿಳಿಸಿದೆ.
ಬ್ಯಾಂಕಿನ ತ್ವರಿತ ಕ್ರಮಕ್ಕೆ ಹರಿಯಾಣ ಸರ್ಕಾರ ಮೆಚ್ಚುಗೆ ವ್ಯಕ್ತಪಡಿಸಿದೆ. ಪ್ರಕರಣದ ಸಂಪೂರ್ಣ ತನಿಖೆ ಮುಗಿಯುವವರೆಗೆ ಇನ್ನಷ್ಟು ವಿವರಗಳು ಬಹಿರಂಗವಾಗುವ ಸಾಧ್ಯತೆ ಇದೆ.





