ಹರಿಯಾಣದ ಫರಿದಾಬಾದ್ನಲ್ಲಿ ಒಂದು ಆಘಾತಕಾರಿ ಘಟನೆ ನಡೆದಿದೆ. ಕಳೆದ ಎರಡು ತಿಂಗಳಿನಿಂದ ಕಾಣೆಯಾಗಿದ್ದ ಯುವತಿಯೊಬ್ಬಳ ಮೃತದೇಹವು ಆಕೆಯ ಗಂಡನ ಮನೆಯ ಮುಂದಿನ ರಸ್ತೆಯ 10 ಅಡಿ ಗುಂಡಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ತನಿಖೆಯಲ್ಲಿ ಕೊಲೆಗೆ ಯುವತಿಯ ಮಾವನೇ ಕಾರಣ ಎಂಬ ಸ್ಫೋಟಕ ಸತ್ಯ ಬಯಲಾಗಿದೆ. ಪೊಲೀಸರು ಯುವತಿಯ ಗಂಡ, ಅತ್ತೆ, ಮಾವ ಮತ್ತು ಓರ್ವ ಸಂಬಂಧಿಯನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.
ಮೃತ ಯುವತಿಯನ್ನು ತನು ಸಿಂಗ್ (24) ಎಂದು ಗುರುತಿಸಲಾಗಿದೆ. ಉತ್ತರ ಪ್ರದೇಶದ ಶಿಕೋಹಾಬಾದ್ನಿವಾಸಿಯಾದ ತನು, 2023ರಲ್ಲಿ ಫರಿದಾಬಾದ್ನ ರೋಶನ್ ನಗರದ ಅರುಣ್ ಸಿಂಗ್ನನ್ನು ಮದುವೆಯಾಗಿದ್ದಳು. ಆದರೆ, ಮದುವೆಯಾದ ಕೆಲವೇ ತಿಂಗಳಲ್ಲಿ ಆಕೆಯ ಗಂಡ, ಅತ್ತೆ ಮತ್ತು ಮಾವನಿಂದ ವರದಕ್ಷಿಣೆಗಾಗಿ ತೀವ್ರ ಮಾನಸಿಕ ಹಿಂಸೆಗೆ ಒಳಗಾಗಿದ್ದಳು. ಚಿನ್ನಾಭರಣ ಮತ್ತು ಹಣ ತರಲು ಒತ್ತಡ ಹೇರಿದ್ದ ಅವರು, ತನುವಿಗೆ ಕಿರುಕುಳ ನೀಡುತ್ತಿದ್ದರು. ಈ ಕಾರಣದಿಂದ ಬೇಸತ್ತು, ತನು ತನ್ನ ತವರು ಮನೆಗೆ ಹಿಂತಿರುಗಿದ್ದಳು. ಆದರೆ, ಏಪ್ರಿಲ್ನಿಂದ ಆಕೆಯ ಸುಳಿವು ಸಿಗದೇ ಇದ್ದಾಗ, ಆಕೆಯ ಸಹೋದರಿ ಪ್ರೀತಿ, ಅಕ್ಕನ ಗಂಡನ ಮನೆಯವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು.
ಪೊಲೀಸರು ತನಿಖೆ ಆರಂಭಿಸಿದಾಗ, ತನುವಿನ ಶವವು ಮನೆಯ ಎದುರಿನ ರಸ್ತೆಯ 10 ಅಡಿ ಗುಂಡಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಯಿತು. ಜೂನ್ 21ರ ಬೆಳಗ್ಗೆ 8 ಗಂಟೆಗೆ ಶವವನ್ನು ವಶಪಡಿಸಿಕೊಂಡ ಪೊಲೀಸರು, ಸಾವಿನ ನಿಖರ ಕಾರಣ ಮತ್ತು ಸಮಯವನ್ನು ಖಚಿತಪಡಿಸಲು ದೇಹವನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿದ್ದಾರೆ. ತನಿಖೆಯಲ್ಲಿ, ತನುವಿನ ಮಾವ ಭೂಪ್ ಸಿಂಗ್ ಕೊಲೆಯನ್ನು ಒಪ್ಪಿಕೊಂಡಿದ್ದಾನೆ.
ಏಪ್ರಿಲ್ 21-22ರ ತಡರಾತ್ರಿ, ಮನೆಯ ಮೊದಲ ಮಹಡಿಯಲ್ಲಿ ಮಲಗಿದ್ದ ಸೊಸೆಯನ್ನು ಉಸಿರುಗಟ್ಟಿಸಿ ಕೊಂದು, ಶವವನ್ನು ಮನೆ ಮುಂದಿನ ಗುಂಡಿಯಲ್ಲಿ ಹೂತಿದ್ದಾಗಿ ಆತ ತಿಳಿಸಿದ್ದಾನೆ. ಆ ಸಂದರ್ಭದಲ್ಲಿ ಆತನ ಹೆಂಡತಿ ಸೋನಿಯಾ ಮತ್ತು ಮಗ ಅರುಣ್ ಮನೆಯಲ್ಲಿ ಇರಲಿಲ್ಲ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ತನುವಿನ ಸಹೋದರಿ ಪ್ರೀತಿ, ಅಕ್ಕನ ಗಂಡನ ಮನೆಯವರು ಚಿನ್ನಾಭರಣ ಮತ್ತು ಹಣಕ್ಕಾಗಿ ಆಕೆಯನ್ನು ನಿರಂತರವಾಗಿ ಕಿರುಕುಳಕ್ಕೆ ನೀಡಿದ್ದ ವಿಷಯವನ್ನು ದೂರಿದ್ದಳು. “ಅವರು ತನುವಿಗೆ ಫೋನ್ ಕಾಲ್ ಅಥವಾ ಸಂದೇಶಗಳ ಮೂಲಕ ನಮ್ಮ ಜೊತೆ ಸಂಪರ್ಕದಲ್ಲಿರಲು ಬಿಡುತ್ತಿರಲಿಲ್ಲ. ಇದರಿಂದ ಆಕೆ ತೀರ ಬೇಸತ್ತಿದ್ದಳು. ತವರು ಮನೆಗೆ ಬಂದಿದ್ದಾಗ, ಧೈರ್ಯ ತುಂಬಿ ಮತ್ತೆ ಗಂಡನ ಮನೆಗೆ ಕಳುಹಿಸಿದ್ದೆವು. ಆದರೆ ಮತ್ತೆ ಹಿಂಸೆ ನೀಡುತ್ತಿದ್ದರು,” ಎಂದು ಪ್ರೀತಿ ಹೇಳಿದ್ದಾರೆ.
ಈ ಘಟನೆಯು ಹರಿಯಾಣದ ಫರಿದಾಬಾದ್ನ ವಸತಿ ಬೀದಿಯೊಂದರಲ್ಲಿ ನಡೆದಿದ್ದು, ತನುವಿನ ಕೊಲೆಯು ವರದಕ್ಷಿಣೆಯ ಕಿರುಕುಳದಿಂದ ಉಂಟಾದ ದುರಂತ ಎಂದು ಸಾಬೀತಾಗಿದೆ. ಪೊಲೀಸರ ತನಿಖೆಯಿಂದ ಆರೋಪಿಗಳಾದ ತನುವಿನ ಗಂಡ, ಅತ್ತೆ, ಮಾವ ಮತ್ತು ಸಂಬಂಧಿಯೊಬ್ಬನನ್ನು ಬಂಧಿಸಲಾಗಿದ್ದು, ಕಾನೂನು ಕ್ರಮಕ್ಕೆ ಒಳಪಡಿಸಲಾಗಿದೆ.