ಚೆನ್ನೈ: ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿದಳಪತಿ ವಿಜಯ್ಅವರು ಅಧಿಕಾರ ಸ್ವೀಕರಿಸಿ ನೀಡಿದ ಮೊದಲ ಭಾಷಣ ರಾಜ್ಯದಲ್ಲೇ ಸಂಚಲನ ಸೃಷ್ಟಿಸಿದೆ. ರಾಜಕೀಯ ಪ್ರವೇಶದ ನಂತರ ಮೊದಲ ಬಾರಿಗೆ ರಾಜ್ಯದ ಜನರನ್ನು ಮುಖ್ಯಮಂತ್ರಿ ಸ್ಥಾನದಿಂದ ಉದ್ದೇಶಿಸಿ ಮಾತನಾಡಿದ ವಿಜಯ್, ಭಾವನಾತ್ಮಕ ಮಾತುಗಳ ಮೂಲಕ ಜನರ ಮನ ಗೆದ್ದಿದ್ದಾರೆ. “ನಾನು ದೇವರಲ್ಲ, ನಿಮ್ಮ ಮನೆ ಮಗ. ಒಂದು ರೂಪಾಯಿಯನ್ನೂ ತಿನ್ನದೇ ಜನಸೇವೆ ಮಾಡ್ತೀನಿ” ಎಂದು ತಿಳಿಸಿದ್ದಾರೆ.
ಚೆನ್ನೈನಲ್ಲಿ ನಡೆದ ಭವ್ಯ ಪ್ರಮಾಣ ವಚನ ಸಮಾರಂಭದಲ್ಲಿ ಮಾತನಾಡಿದ ಸಿಎಂ ವಿಜಯ್, ತಾವು ಸಾಮಾನ್ಯ ಜನರ ಕಷ್ಟಗಳನ್ನು ಅರಿತಿರುವ ವ್ಯಕ್ತಿ ಎಂದು ಹೇಳಿದರು. “ಏನ್ ಹೇಳ್ಬೇಕು, ಯಾವ ರೀತಿ ಆರಂಭಿಸಬೇಕು ಅನ್ನೋದೇ ಗೊತ್ತಾಗ್ತಿಲ್ಲ. ನನಗೆ ಬಡತನ, ಕಷ್ಟ, ನೋವು ಏನು ಅನ್ನೋದು ಚೆನ್ನಾಗಿ ಗೊತ್ತಿದೆ. ನಾನು ನಿಮ್ಮ ಅಣ್ಣ, ತಮ್ಮ, ನಿಮ್ಮ ಮನೆಯ ಮಗ” ಎಂದು ಹೇಳಿದರು.
ರಾಜಕೀಯಕ್ಕೆ ಬಂದಿದ್ದು ಅಧಿಕಾರದ ಆಸೆಗೆ ಅಲ್ಲ, ಜನಸೇವೆಗೆ ಎಂದು ಸ್ಪಷ್ಟಪಡಿಸಿದ ವಿಜಯ್, “ನೀವು ಕರೆದಿದ್ದಕ್ಕೆ ನಾನು ಬಂದಿದ್ದೇನೆ. ನಿಮ್ಮ ನಂಬಿಕೆಗೆ ತಕ್ಕಂತೆ ಕೆಲಸ ಮಾಡುತ್ತೇನೆ” ಎಂದು ಹೇಳಿದರು. ತಮ್ಮ ಮೇಲೆ ಜನ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುವುದು ತಮ್ಮ ಮೊದಲ ಕರ್ತವ್ಯ ಎಂದು ಅವರು ತಿಳಿಸಿದರು.
ಭ್ರಷ್ಟಾಚಾರ ವಿರೋಧಿ ಆಡಳಿತದ ಭರವಸೆ ನೀಡಿದ ವಿಜಯ್, “ನಾನು ಒಂದು ರೂಪಾಯಿ ಕೂಡ ತಿನ್ನಲ್ಲ. ಭ್ರಷ್ಟಾಚಾರ ರಹಿತ ಸರ್ಕಾರ ಕೊಡ್ತೀನಿ” ಎಂದು ಘೋಷಿಸಿದರು. ಹಿಂದಿನ ಸರ್ಕಾರ ರಾಜ್ಯದ ಮೇಲೆ ಲಕ್ಷಾಂತರ ಕೋಟಿ ಸಾಲ ಹಾಕಿದೆ ಎಂದು ಆರೋಪಿಸಿದ ಅವರು, ಸುಳ್ಳು ಭರವಸೆ ನೀಡಿ ಜನರನ್ನು ಮೋಸ ಮಾಡುವುದಿಲ್ಲ ಎಂದರು. “ನನ್ನ ಕೈಲಿ ಆಗೋ ಕೆಲಸವನ್ನ ಮಾತ್ರ ಮಾಡ್ತೀನಿ. ಆಗದ ಕೆಲಸಕ್ಕೆ ಸುಳ್ಳು ಹೇಳಲ್ಲ” ಎಂಬ ಅವರ ನೇರ ಮಾತು ಜನರಿಂದ ಭಾರೀ ಮೆಚ್ಚುಗೆ ಪಡೆದಿದೆ.
ತಮಿಳುನಾಡಿನ ಅಭಿವೃದ್ಧಿಗೆ ಸಾಮಾಜಿಕ ನ್ಯಾಯ ಮತ್ತು ಜಾತ್ಯತೀತ ಆಡಳಿತ ಅಗತ್ಯ ಎಂದು ಹೇಳಿದ ಸಿಎಂ ವಿಜಯ್, “ಈ ಸರ್ಕಾರ ಎಲ್ಲರದ್ದು. ಜಾತಿ, ಧರ್ಮ ನೋಡದೇ ಆಡಳಿತ ನಡೆಸುತ್ತೇವೆ” ಎಂದು ಭರವಸೆ ನೀಡಿದರು. ಯುವಜನತೆ, ಮಹಿಳೆಯರು ಮತ್ತು ಬಡವರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಹೇಳಿದರು.
ಕಾನೂನು ಮತ್ತು ಸುವ್ಯವಸ್ಥೆ ವಿಷಯದಲ್ಲೂ ಕಠಿಣ ಸಂದೇಶ ನೀಡಿದ ವಿಜಯ್, “ತಪ್ಪು ಮಾಡಿದವರು ಯಾರೇ ಆಗಿದ್ದರೂ ಬಿಡೋದಿಲ್ಲ. ನಮ್ಮವರೇ ತಪ್ಪು ಮಾಡಿದ್ರೂ ಕ್ರಮ ಕೈಗೊಳ್ಳುತ್ತೇನೆ. ಯಾರೇ ತಪ್ಪು ಮಾಡಿದ್ರೂ ಕ್ಷಣದಲ್ಲೇ ಅರೆಸ್ಟ್ ಮಾಡಿಸ್ತೀನಿ” ಎಂದು ಎಚ್ಚರಿಕೆ ನೀಡಿದರು.
ತಮ್ಮ ವಿರುದ್ಧ ಟೀಕೆ ಮಾಡಿದವರನ್ನೂ ತಮ್ಮವರೇ ಎಂದು ಕರೆದು ಮಾತನಾಡಿದ ವಿಜಯ್, “ನನ್ನ ವಿರುದ್ಧ ಮಾತಾಡಿದವರೂ ನನ್ನವರು. ತಮಿಳುನಾಡಿನ 8 ಕೋಟಿ ಜನರೂ ನನ್ನ ಕುಟುಂಬ” ಎಂದು ಹೇಳಿದರು.
ಸರ್ಕಾರ ರಚನೆಗೆ ಬೆಂಬಲ ನೀಡಿದ ಎಲ್ಲಾ ಪಕ್ಷಗಳಿಗೆ ಧನ್ಯವಾದ ತಿಳಿಸಿದ ವಿಜಯ್, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರಿಗೆ ವಿಶೇಷ ಕೃತಜ್ಞತೆ ಸಲ್ಲಿಸಿದರು. ಜೊತೆಗೆ ಸಿಪಿಐ(ಎಂ), ಸಿಪಿಐ ಮತ್ತು ಮುಸ್ಲಿಂ ಲೀಗ್ ಪಕ್ಷಗಳ ಬೆಂಬಲವನ್ನೂ ಸ್ಮರಿಸಿದರು.




