ನವದೆಹಲಿ: ದೆಹಲಿಯಲ್ಲಿ ಪಕ್ಷದ ಕಾರ್ಯಕರ್ತರ ಸಭೆ ನಡೆಸಲು ಸ್ಥಳಾವಕಾಶ ಸಿಗದಿರುವುದು ಹಾಗೂ ಕೊನೆಯ ಕ್ಷಣದಲ್ಲಿ ಸಭಾಂಗಣದ ಬುಕಿಂಗ್ ರದ್ದಾಗಿರುವುದರ ಹಿಂದೆ ಆಡಳಿತಾರೂಢ ಬಿಜೆಪಿ ಒತ್ತಡವಿದೆ ಎಂದು ಕಾಕ್ರೋಚ್ ಜನತಾ ಪಾರ್ಟಿ ಆರೋಪ ಮಾಡಿದೆ. ಈ ಹಿನ್ನೆಲೆ CJP, ಶೀಘ್ರದಲ್ಲೇ ‘ಜಂತರ್ ಮಂತರ್ ಸೀಸನ್ 2’ ಹೋರಾಟ ಆರಂಭಿಸುವುದಾಗಿ ಘೋಷಿಸಿದೆ.
CJP ನಾಯಕ ಅಭಿಜೀತ್ ದಿಷ್ಠೆ ಮಾತನಾಡಿ, ಜಂತರ್ ಮಂತರ್ನಲ್ಲಿ ನಡೆದಿದ್ದ ಪಕ್ಷದ ಮೊದಲ ಹಂತದ ಹೋರಾಟದ ಮುಂದುವರಿದ ಭಾಗ ಯಾವಾಗ ಆರಂಭವಾಗಲಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಪ್ರಶ್ನಿಸುತ್ತಿದ್ದಾರೆ. ಈ ಹಿನ್ನೆಲೆ ‘ಜಂತರ್ ಮಂತರ್ ಸೀಸನ್ 2’ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಪಕ್ಷದ ಸಭೆ ಆಯೋಜಿಸಲು ದೆಹಲಿಯಲ್ಲಿ ಹಲವು ಸ್ಥಳಗಳನ್ನು ಸಂಪರ್ಕಿಸಲಾಗಿತ್ತು. ಆದರೆ ಸಭಾಂಗಣ ನೀಡಲು ಯಾರೂ ಮುಂದೆ ಬರಲಿಲ್ಲ. ಸಭಾಂಗಣದ ಮಾಲೀಕರು ಹಾಗೂ ನಿರ್ವಹಣಾ ಸಿಬ್ಬಂದಿ ತಮ್ಮ ಮೇಲೆ ಮೇಲಿನಿಂದ ಒತ್ತಡವಿದೆ ಎಂದು ಹೇಳುತ್ತಿದ್ದರು ಎಂದು ದಿಪ್ಕೆ ಆರೋಪಿಸಿದ್ದಾರೆ. ಅಂತಿಮವಾಗಿ ಒಂದು ಸಭಾಂಗಣವನ್ನು ಕಾಯ್ದಿರಿಸಲಾಗಿತ್ತು. ಆದರೆ ಕಾರ್ಯಕ್ರಮ ನಡೆಯಬೇಕಿದ್ದ ದಿನದ ಬೆಳಗ್ಗೆಯೇ ಅದರ ಮಾಲೀಕರ ಮೇಲೂ ಒತ್ತಡ ಹೇರಲಾಗಿದೆ ಎಂದು ಅವರು ದೂರಿದ್ದಾರೆ.
CJP ಸಭೆಗೆ ಅವಕಾಶ ನೀಡಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸಭಾಂಗಣದ ಮಾಲೀಕರಿಗೆ ಬೆದರಿಕೆ ಹಾಕಲಾಗಿದೆ ಎಂಬ ಗಂಭೀರ ಆರೋಪವನ್ನೂ ದಿಪ್ಕೆ ಮಾಡಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಹಿಂದೆ ಬಿಜೆಪಿ ಇದೆ ಎಂದು ಅವರು ಆರೋಪಿಸಿದ್ದು, ಇಂತಹ ಒತ್ತಡಗಳಿಂದ ಪಕ್ಷದ ಕಾರ್ಯಕರ್ತರನ್ನು ಹಿಂಜರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಆದರೆ CJP ಮಾಡಿರುವ ಈ ಆರೋಪಗಳಿಗೆ ಬಿಜೆಪಿ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ದೇಶಾದ್ಯಂತ ‘ಲಿಸನಿಂಗ್ ಟೂರ್’
CJPಯ ಮುಂದಿನ ಹಂತದ ಸಂಘಟನಾ ಚಟುವಟಿಕೆಗಳು ಈಗಾಗಲೇ ಆರಂಭವಾಗಿವೆ ಎಂದು ಪಕ್ಷದ ಮುಖ್ಯ ವಕ್ತಾರ ಸೌರವ್ ದಾಸ್ ಹೇಳಿದ್ದಾರೆ. ದೇಶದ ವಿವಿಧ ಭಾಗಗಳಲ್ಲಿ ‘ಲಿಸನಿಂಗ್ ಟೂರ್’ ನಡೆಸಿ ಜನರ ಅಭಿಪ್ರಾಯ ಸಂಗ್ರಹಿಸಲು ಪಕ್ಷ ಮುಂದಾಗಿದೆ ಎಂದು ಅವರು ತಿಳಿಸಿದ್ದಾರೆ.
ಸ್ವಾತಂತ್ರ್ಯ ದಿನದಿಂದ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಹೆಚ್ಚಿನ ಆದ್ಯತೆ ನೀಡಿ ಅಭಿಯಾನ ನಡೆಸಲು ಉದ್ದೇಶಿಸಲಾಗಿದೆ. ಇದೇ CJPಯ ‘ಸೀಸನ್ 2’ ಆಗಿದ್ದು, ದೇಶದ ವಿವಿಧ ಭಾಗಗಳಲ್ಲಿ ಸರ್ಕಾರ ಮತ್ತು ಅಧಿಕಾರಿಗಳ ವಿರುದ್ಧ ಪ್ರತಿಭಟನೆಗಳನ್ನು ನಡೆಸಲಾಗುವುದು ಎಂದು ದಾಸ್ ಹೇಳಿದ್ದಾರೆ.
36 ದಿನ ನಡೆದಿದ್ದ ಜಂತರ್ ಮಂತರ್ ಹೋರಾಟ
NEET ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಪ್ರಮುಖ ವಿಚಾರವನ್ನಾಗಿ ಮಾಡಿಕೊಂಡು CJP ನೇತೃತ್ವದಲ್ಲಿ ದೆಹಲಿಯ ಜಂತರ್ ಮಂತರ್ನಲ್ಲಿ 36 ದಿನಗಳ ಕಾಲ ಪ್ರತಿಭಟನೆ ನಡೆದಿತ್ತು. ಈ ಹೋರಾಟದಲ್ಲಿ ವಿದ್ಯಾರ್ಥಿಗಳು, ಯುವ ಕಾರ್ಯಕರ್ತರು ಹಾಗೂ ವಿವಿಧ ಪ್ರತಿಪಕ್ಷಗಳ ನಾಯಕರು ಭಾಗವಹಿಸಿದ್ದರು.
ಜೂನ್ 28ರಂದು ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅನಿರ್ದಿಷ್ಟಾವಧಿ ಉಪವಾಸ ಆರಂಭಿಸಿದ್ದರು. ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡ ಹಿನ್ನೆಲೆ ಅವರನ್ನು ಸಫರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಜುಲೈ 20ರಂದು ಪ್ರತಿಭಟನಾಕಾರರು ಸಂಸತ್ ಭವನದತ್ತ ಮೆರವಣಿಗೆ ನಡೆಸಲು ಯತ್ನಿಸಿದ ಸಂದರ್ಭದಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದರು. ಬಳಿಕ ಸರ್ಕಾರದೊಂದಿಗೆ ನಡೆದ ಮಾತುಕತೆ ಹಾಗೂ ಪ್ರಮುಖ ಬೇಡಿಕೆಗಳ ಕುರಿತು ದೊರೆತ ಭರವಸೆಗಳ ಹಿನ್ನೆಲೆಯಲ್ಲಿ ಜುಲೈ 25ರಂದು ಹೋರಾಟ ಅಂತ್ಯಗೊಂಡಿತ್ತು. ಇದಾದ ಬಳಿಕ CJP ತನ್ನ ರಾಷ್ಟ್ರೀಯ ತಂಡವನ್ನು ರಚಿಸಿ, ಅಭಿಜೀತ್ ದಿಪ್ಕೆ ಅವರನ್ನು ರಾಷ್ಟ್ರೀಯ ಸಂಚಾಲಕರನ್ನಾಗಿ ನೇಮಿಸಿತ್ತು.





