ಬೆಂಗಳೂರು, ನವೆಂಬರ್ 9: ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಚಟುವಟಿಕೆಗಳ ಬಗ್ಗೆ ವಿವಾದ ಮರುಕಳಿಸಿರುವ ಸಂದರ್ಭದಲ್ಲಿ, “RSS ನೋಂದಣಿ ಆಗಿಲ್ಲ” ಎಂಬ ಆರೋಪಗಳಿಗೆ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಖಡಕ್ ಉತ್ತರ ನೀಡಿದ್ದಾರೆ. ಹೊಸಕೆರೆಹಳ್ಳಿಯ ಪಿಇಎಸ್ ಕಾಲೇಜು ಸಭಾಂಗಣದಲ್ಲಿ ನಡೆದ ಉಪನ್ಯಾಸದಲ್ಲಿ ಮಾತನಾಡಿದ ಭಾಗವತ್, ಸಂಘದ ಇತಿಹಾಸ, ಉದ್ದೇಶ ಹಾಗೂ ಅದರ ಕಾನೂನುಬದ್ಧತೆಯ ಕುರಿತು ಸ್ಪಷ್ಟನೆ ನೀಡಿದ್ದಾರೆ.
“RSS ಸ್ಥಾಪನೆ ಆಗಿದ್ದು 1925ರಲ್ಲಿ, ಆಗ ಭಾರತ ಬ್ರಿಟಿಷರ ಆಡಳಿತದಲ್ಲಿತ್ತು. ಅಂದಿನ ಕಾಲದಲ್ಲಿ ನಾವು ನಮ್ಮ ಸಂಘವನ್ನು ಬ್ರಿಟಿಷರ ಬಳಿ ನೋಂದಣಿ ಮಾಡಿಕೊಳ್ಳಬೇಕಿತ್ತಾ?” ಎಂದು ಪ್ರಶ್ನೆ ಮಾಡಿದರು. ನಂತರ ಸ್ವಾತಂತ್ರ್ಯ ಬಂದರೂ ಭಾರತ ಸರ್ಕಾರವೂ ನಾಗರಿಕ ಸಂಘಟನೆಗಳ ನೋಂದಣಿಯನ್ನು ಕಡ್ಡಾಯ ಮಾಡಿರಲಿಲ್ಲ. ಹೀಗಾಗಿ ನಮ್ಮ ಸಂಘವು ಸ್ವತಂತ್ರವಾಗಿ, ಕಾನೂನುಬದ್ಧವಾಗಿ ಮುಂದುವರಿದಿದೆ.” ಎಂದು ಭಾಗವತ್ ಹೇಳಿದ್ದಾರೆ.
“ಹಿಂದೂ ಧರ್ಮಕ್ಕೂ ನೋಂದಣಿ ಇಲ್ಲ. ಹಾಗಿದ್ದರೆ ಹಿಂದೂ ಧರ್ಮ ಅಕ್ರಮವೆಂದು ಯಾರಾದರೂ ಹೇಳುತ್ತಾರೆಯಾ? ಹಾಗೆಯೇ RSS ಕೂಡಾ ಕಾನೂನುಬದ್ಧ ಮತ್ತು ಸಂವಿಧಾನಾತ್ಮಕ ಸಂಸ್ಥೆ.” ಎಂದು ಅವರು ಮತ್ತಷ್ಟು ಹೇಳಿದರು.
ಮೋಹನ್ ಭಾಗವತ್ RSS ನ ಹಣಕಾಸು ಹಾಗೂ ಆಡಳಿತದ ಬಗ್ಗೆ ಕೂಡ ಸ್ಪಷ್ಟನೆ ನೀಡಿದರು. “RSS ಕಾನೂನುಬದ್ಧವಾಗಿ ಕಾರ್ಯನಿರ್ವಹಿಸುತ್ತಿದೆ. ನಮ್ಮಲ್ಲಿ ಸಂಪೂರ್ಣ ಪಾರದರ್ಶಕ ಹಣಕಾಸು ವ್ಯವಸ್ಥೆ ಇದೆ. ನಾವು ಆದಾಯ ತೆರಿಗೆ ಇಲಾಖೆಗೆ ನಿಯಮಿತವಾಗಿ ತೆರಿಗೆ ಸಲ್ಲಿಸುತ್ತೇವೆ,” ಎಂದು ಅವರು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಸೇರಿದಂತೆ ಕೆಲವು ಪಕ್ಷಗಳಿಂದ RSS ಮೇಲೆ ಆಗುತ್ತಿರುವ “ಕಾನೂನು ಮೀರಿದ ಚಟುವಟಿಕೆ” ಎಂಬ ಆರೋಪಗಳಿಗೆ ಪ್ರತಿಕ್ರಿಯೆ ನೀಡುತ್ತಾ, “RSS ನಿಷೇಧದ ಮಾತುಗಳು ಕೇಳಿಬಂದಿವೆ. ಆದರೆ ನ್ಯಾಯಾಲಯ ಅದನ್ನು ತಿರಸ್ಕರಿಸಿದೆ. ನ್ಯಾಯಾಂಗವೇ ನಮ್ಮ ಧಾರ್ಮಿಕ, ಸಾಮಾಜಿಕ ಮತ್ತು ದೇಶಭಕ್ತಿಯ ಚಟುವಟಿಕೆಗಳು ಸಂವಿಧಾನಾತ್ಮಕ ಎಂದು ಒಪ್ಪಿದೆ,” ಎಂದು ಭಾಗವತ್ ಹೇಳಿದರು.
“ಯಾವುದೇ ಧರ್ಮದವರು RSS ಗೆ ಸೇರಬಹುದು”
ಮುಸ್ಲಿಂ, ಕ್ರೈಸ್ತ ಅಥವಾ ಅಲ್ಪಸಂಖ್ಯಾತರು RSS ಗೆ ಸೇರಬಹುದುನಾ? ಎಂಬ ಪ್ರಶ್ನೆಗೆ ಭಾಗವತ್ ಸ್ಪಷ್ಟನೆ ನೀಡಿದರು. “ನಮ್ಮಲ್ಲಿ ಜಾತಿ, ಪಂಥ, ಧರ್ಮದ ಭೇದವಿಲ್ಲ. ಯಾರೇ ಆಗಿರಲಿ, ಭಾರತ ಮಾತೆಯ ಮಕ್ಕಳಾಗಿ ಶಾಖೆಗೆ ಬರಬೇಕು. ಆದರೆ ಶಾಖೆಯಲ್ಲಿ ಧರ್ಮದ ಗುರುತು ಬಿಡಬೇಕು. ಹಿಂದೂ ಸಮಾಜದ ಅಂತರಾಳವನ್ನು ಒಪ್ಪಿಕೊಂಡು, ರಾಷ್ಟ್ರಪ್ರೇಮದಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.





