ಬೆಂಗಳೂರು: ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿರುವ ತುಂಗಭದ್ರಾ ಅಣೆಕಟ್ಟಿನ (TB Dam) ಎಲ್ಲಾ 33 ಕ್ರಸ್ಟ್ ಗೇಟ್ಗಳನ್ನು ಬದಲಿಸುವ ಐತಿಹಾಸಿಕ ಕಾರ್ಯವು ಭರದಿಂದ ಸಾಗುತ್ತಿದ್ದು, ಬರುವ ಮೇ ತಿಂಗಳ ವೇಳೆಗೆ ಈ ಎಲ್ಲಾ ಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭರವಸೆ ನೀಡಿದ್ದಾರೆ.
ಗುರುವಾರ ವಿಧಾನ ಪರಿಷತ್ತಿನ ಶೂನ್ಯ ವೇಳೆಯಲ್ಲಿ ಜೆಡಿಎಸ್ ಸದಸ್ಯ ಟಿ.ಎ. ಶರವಣ ಅವರು ಎತ್ತಿದ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್, ಅಣೆಕಟ್ಟಿನ ಸುರಕ್ಷತೆಯ ದೃಷ್ಟಿಯಿಂದ ಸರ್ಕಾರವು ತೀವ್ರಗತಿಯಲ್ಲಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಕಳೆದ ವರ್ಷ ತುಂಗಭದ್ರಾ ಅಣೆಕಟ್ಟಿನ 19ನೇ ಕ್ರಸ್ಟ್ ಗೇಟ್ ತುಂಡಾದಾಗ ಎದುರಾಗಿದ್ದ ಆತಂಕವನ್ನು ಸ್ಮರಿಸಿದ ಡಿಸಿಎಂ, ಗೇಟ್ ತುಂಡಾದಾಗ ಅಣೆಕಟ್ಟೆಯೇ ಅಲ್ಲಾಡಿದಂತಹ ಭೀಕರ ಸನ್ನಿವೇಶವಿತ್ತು. ಆದರೆ ನಮ್ಮ ಸರ್ಕಾರ ಕೇವಲ ಏಳು ದಿನಗಳಲ್ಲಿ ತಾತ್ಕಾಲಿಕ ಗೇಟ್ ಅಳವಡಿಸಿ ಯಶಸ್ವಿಯಾಗಿತ್ತು. ಆಗ ಹಲವರು ಟೀಕೆಗಳನ್ನು ಮಾಡಿದ್ದರು, ಆದರೆ ನಾನು ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂದು ಹೇಳಿದ್ದೆ. ಅದರಂತೆ ಈಗ ರಾಜ್ಯದ ಎಲ್ಲಾ ಹಳೆಯ ಅಣೆಕಟ್ಟುಗಳ ಗೇಟ್ಗಳನ್ನು ಬದಲಿಸಲು ತೀರ್ಮಾನಿಸಲಾಗಿದ್ದು, ಮೊದಲ ಹಂತದಲ್ಲಿ ತುಂಗಭದ್ರಾ ಅಣೆಕಟ್ಟನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರು.
ಕಾಮಗಾರಿಯ ಪ್ರಸ್ತುತ ಸ್ಥಿತಿ
ಅಣೆಕಟ್ಟಿನ ಗೇಟ್ ಬದಲಾವಣೆ ಪ್ರಕ್ರಿಯೆಯ ತಾಂತ್ರಿಕ ವಿವರಗಳನ್ನು ನೀಡಿದ ಸಚಿವ, ಅಹಮದಾಬಾದ್ ಮೂಲದ ಸಂಸ್ಥೆಯೊಂದಿಗೆ 34.48 ಕೋಟಿ ರೂ. ವೆಚ್ಚದಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿದ್ದು, 15 ತಿಂಗಳ ಕಾಲಾವಧಿಯಲ್ಲಿ ಕೆಲಸ ಮುಗಿಸುವ ಗುರಿ ಹೊಂದಲಾಗಿದೆ. ಈವರೆಗೆ 14 ಕ್ರಸ್ಟ್ ಗೇಟ್ಗಳ ಅಳವಡಿಕೆ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿದೆ. ಉಳಿದ 25 ಗೇಟ್ಗಳ ಫ್ಯಾಬ್ರಿಕೇಶನ್ ಕೆಲಸ ಮುಗಿದಿದ್ದು, 3 ಗೇಟ್ಗಳ ಅಳವಡಿಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ತಜ್ಞರ ಪ್ರಕಾರ ಒಂದು ಗೇಟ್ ಅಳವಡಿಕೆಗೆ ಕನಿಷ್ಠ 7 ದಿನ ಬೇಕು. ಆದರೆ ಏಕಕಾಲಕ್ಕೆ ಹಲವು ಗೇಟ್ಗಳ ಕೆಲಸ ನಡೆಯುತ್ತಿರುವುದರಿಂದ ಮೇ ಅಂತ್ಯದೊಳಗೆ 33 ಗೇಟ್ಗಳೂ ಹೊಸದಾಗಿ ರಾರಾಜಿಸಲಿವೆ.
ತುಂಗಭದ್ರಾ ಅಣೆಕಟ್ಟಿನಲ್ಲಿ ಹೂಳು ತುಂಬಿರುವುದರಿಂದ ನೀರಿನ ಸಂಗ್ರಹ ಸಾಮರ್ಥ್ಯ ಕುಸಿಯುತ್ತಿದೆ. ಇದಕ್ಕೆ ಪರ್ಯಾಯವಾಗಿ ನವಲಿ ಸಮತೋಲಿತ ಜಲಾಶಯ ನಿರ್ಮಿಸುವ ಯೋಜನೆಗೆ ಆಂಧ್ರಪ್ರದೇಶ ಸರ್ಕಾರದ ಸಹಕಾರ ಸಿಗುತ್ತಿಲ್ಲ ಎಂದು ಡಿಸಿಎಂ ಬೇಸರ ವ್ಯಕ್ತಪಡಿಸಿದರು. ಆಂಧ್ರ ಸಿಎಂ ಅವರು ಈ ಬಗ್ಗೆ ಚರ್ಚಿಸಲು ಸಮಯ ನೀಡುತ್ತಿಲ್ಲ. ಇದು ಮೂರು ರಾಜ್ಯಗಳಿಗೆ ಸಂಬಂಧಿಸಿದ ವಿಷಯವಾಗಿದ್ದು, ಸಮುದ್ರಕ್ಕೆ ಹರಿದು ಹೋಗುವ ನೀರನ್ನು ಉಳಿಸಲು ರಾಜಕೀಯ ಬದ್ಧತೆ ಅಗತ್ಯವಿದೆ ಎಂದು ಅವರು ತಿಳಿಸಿದರು. ಅಲ್ಲದೆ, ಅಣೆಕಟ್ಟಿನ ಹಿನ್ನೀರಿನಿಂದ ಭೂಮಿ ಕಳೆದುಕೊಂಡ ರೈತರಿಗೆ ಬಾಕಿ ಇರುವ ಪರಿಹಾರವನ್ನು ಶೀಘ್ರವಾಗಿ ವಿತರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಅವರು ಸ್ಪಷ್ಟಪಡಿಸಿದರು.





