ಬೆಂಗಳೂರು: ತೊಗರಿ ಬೆಂಬಲ ಬೆಲೆ ಖರೀದಿ ಅವಧಿಯನ್ನು ವಿಸ್ತರಿಸಲಾಗಿದ್ದು, ಮೇ ತಿಂಗಳ ಅಂತ್ಯದವರೆಗೆ ಖರೀದಿ ನಡೆಯಲಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ.
ಮೂಲತಃ ಮೇ 1, 2025ಕ್ಕೆ ಖರೀದಿ ಅವಧಿ ಮುಗಿಯಬೇಕಿತ್ತು. ಆದರೆ, ನಿಗದಿತ ಖರೀದಿ ಪ್ರಮಾಣವು ಇನ್ನೂ ಪೂರ್ಣಗೊಳ್ಳದ ಕಾರಣ, ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿ ಒಂದು ತಿಂಗಳ ವಿಸ್ತರಣೆ ಪಡೆಯಲಾಗಿದೆ.
ಕೇಂದ್ರ ಸರ್ಕಾರವು ಕನಿಷ್ಠ ಬೆಂಬಲ ಬೆಲೆಯಡಿ 3.06 ಲಕ್ಷ ಮೆಟ್ರಿಕ್ ಟನ್ ತೊಗರಿ ಖರೀದಿಗೆ ಅನುಮತಿ ನೀಡಿದೆ. ಇದುವರೆಗೆ ಬೆಂಬಲ ಬೆಲೆ ಖರೀದಿ ಕೇಂದ್ರಗಳಲ್ಲಿ 1.83 ಲಕ್ಷ ಮೆಟ್ರಿಕ್ ಟನ್ ತೊಗರಿ ಖರೀದಿಸಲಾಗಿದೆ. ರೈತರು 2.70 ಲಕ್ಷ ಮೆಟ್ರಿಕ್ ಟನ್ ತೊಗರಿಯನ್ನು ನೋಂದಣಿ ಮಾಡಿಕೊಂಡಿದ್ದು, ಇನ್ನೂ ಸುಮಾರು 93,000 ಮೆಟ್ರಿಕ್ ಟನ್ ಖರೀದಿಸಬೇಕಾಗಿದೆ ಎಂದು ಸಚಿವ ಶಿವಾನಂದ ಪಾಟೀಲ್ ವಿವರಿಸಿದ್ದಾರೆ.
ಕೇಂದ್ರ ಸರ್ಕಾರವು ಪ್ರತಿ ಟನ್ಗೆ ₹7,550 ಬೆಂಬಲ ಬೆಲೆ ನಿಗದಿಪಡಿಸಿತ್ತು. ಆದರೆ, ಈ ಬೆಲೆ ಕಡಿಮೆ ಎಂದು ರೈತರು ಹೆಚ್ಚಿನ ಬೆಲೆಗೆ ಬೇಡಿಕೆ ಇಟ್ಟಿದ್ದರು. ಈ ಬೇಡಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಾಗ, ಅವರು ಪ್ರತಿ ಕ್ವಿಂಟಾಲ್ಗೆ ₹450 ಪ್ರೋತ್ಸಾಹ ಧನ ಘೋಷಿಸಿದ್ದಾರೆ. ಇದರಿಂದ, ಪ್ರತಿ ಕ್ವಿಂಟಾಲ್ಗೆ ಒಟ್ಟು ₹8,000 ದರದಲ್ಲಿ ತೊಗರಿ ಖರೀದಿಸಲಾಗುತ್ತಿದೆ.
“ರೈತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು, ಬೆಂಬಲ ಬೆಲೆ ಖರೀದಿ ಕೇಂದ್ರಗಳಲ್ಲಿ ತೊಗರಿ ಮಾರಾಟ ಮಾಡಬಹುದು,” ಎಂದು ಸಚಿವ ಶಿವಾನಂದ ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.