ಕೋಲಾರ: ಕರ್ನಾಟಕದ ಹೆಸರಾಂತ ಬಾಡಿ ಬಿಲ್ಡರ್ ಅಮೆರಿಕದಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಸುರೇಶ್ ಕುಮಾರ್ (42) ಎಂಬ ಖ್ಯಾತ ಬಾಡಿ ಬಿಲ್ಡರ್ ಮೃತ ದುರ್ದೈವಿ. ತಮ್ಮ ಕುಟುಂಬವನ್ನು ಅಮೆರಿಕಕ್ಕೆ ಕರೆದೊಯ್ದಿದ್ದ ಸುರೇಶ್, ಕೆಲಸದ ನಿಮಿತ್ತ ಫ್ಲೋರಿಡಾದಿಂದ ಟೆಕ್ಸಾಸ್ಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಕೋಲಾರದ ಗಾಂಧಿನಗರದ ಚಲಪತಿ ಮತ್ತು ಮುನಿಯಮ್ಮ ದಂಪತಿಯ ಪುತ್ರನಾಗಿದ್ದ ಸುರೇಶ್, ತಮ್ಮ ವೃತ್ತಿಜೀವನದಲ್ಲಿ ದೇಹದಾರ್ಢ್ಯ, ರೂಪದರ್ಶನ ಮತ್ತು ಫಿಸಿಯೋಥೆರಪಿಯ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದರು.
ಸುರೇಶ್ ಕುಮಾರ್ ಅವರು ಫ್ಲೋರಿಡಾದಿಂದ ಟೆಕ್ಸಾಸ್ಗೆ ಕಾರಿನಲ್ಲಿ ತೆರಳುತ್ತಿದ್ದಾಗ ರಸ್ತೆ ಅಪಘಾತ ಸಂಭವಿಸಿದೆ. ಈ ಭೀಕರ ಅಪಘಾತದಿಂದ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು. ಮೂರು ದಿನಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದರೂ, ತೀವ್ರವಾದ ಗಾಯಗಳಿಂದಾಗಿ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಕೊನೆಗೆ ಸುರೇಶ್ ಕುಮಾರ್ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದರು.
ಸುರೇಶ್ ಕುಮಾರ್ ತಮ್ಮ ವೈಯಕ್ತಿಕ ಜೀವನದಲ್ಲೂ ಯಶಸ್ವಿಯಾಗಿದ್ದರು. ದೆಹಲಿ ಮೂಲದ ಯುವತಿಯನ್ನು ಪ್ರೀತಿಸಿ, ವಿವಾಹವಾಗಿದ್ದ ಅವರು, ತಮ್ಮ ಕುಟುಂಬದೊಂದಿಗೆ ಸಂತೋಷದ ಜೀವನ ನಡೆಸುತ್ತಿದ್ದರು. ಇತ್ತೀಚೆಗಷ್ಟೇ ಕೋಲಾರಕ್ಕೆ ಭೇಟಿ ನೀಡಿ, ತಮ್ಮ ಪತ್ನಿ ಮತ್ತು ಮಕ್ಕಳನ್ನು ಅಮೆರಿಕಕ್ಕೆ ಕರೆದೊಯ್ದಿದ್ದರು.