ಶಿವಮೊಗ್ಗ, ನವೆಂಬರ್ 21: ಶಿವಮೊಗ್ಗದ ಸೋಗಾನೆಯಲ್ಲಿರುವ ಜಿಲ್ಲಾ ಕಾರಾಗೃಹಕ್ಕೆ ಬಾಳೆಗೊನೆಯಲ್ಲಿ ಗಾಂಜಾ ಮತ್ತು ಸಿಗರೇಟ್ ಸಪ್ಲೈ ಮಾಡುತ್ತಿದ್ದ ದುಷ್ಕರ್ಮಿಗಳ ತಂತ್ರ ಬೆಳಕಿಗೆ ಬಂದಿದೆ. ಇದರಿಂದ ಜೈಲು ಸಿಬ್ಬಂದಿಗಳೇ ಶಾಕ್ ಆಗಿದ್ದಾರೆ.
ಆಟೋ ಚಾಲಕ ಸೋಗಾನೆ ಜೈಲಿನ ಮುಖ್ಯ ಗೇಟ್ ಬಳಿ ಬಂದು ಇದು ಜೈಲು ಕ್ಯಾಂಟೀನ್ಗೆ ಬೇಕಾದ ಬಾಳೆಗೊನೆ ಎಂದು ಹೇಳಿ ಒಂದು ದೊಡ್ಡ ಗೊನೆಯನ್ನು ಇಳಿಸಿದ್ದಾನೆ. ಆದರೆ ಜೈಲು ಸಿಬ್ಬಂದಿಗಳಿಗೆ ಸ್ವಲ್ಪ ಅನುಮಾನ ಬಂದಿದ್ದರಿಂದ ಕೆ.ಎಸ್.ಐ.ಎಸ್.ಎಫ್ ಇನ್ಸ್ಪೆಕ್ಟರ್ ಜಗದೀಶ್ ನೇತೃತ್ವದ ತಂಡವನ್ನು ಕರೆಸಿ ಬಾಳೆಗೊನೆಯನ್ನು ಸಂಪೂರ್ಣ ಪರಿಶೀಲಿಸಲಾಯಿತು.
ಪರಿಶೀಲನೆ ವೇಳೆ ಪೊಲೀಸ್ ಸಿಬ್ಬಂದಿಗಳೇ ಹೌಹಾರಿದ್ದಾರೆ. ಏಕೆಂದರೆ ಬಾಳೆ ದಿಂಡುಗಳನ್ನು ಚಾಕುವಿನಿಂದ ಕೊರೆದು, ಒಳಗೆ ಗಾಂಜಾ ಪ್ಯಾಕೆಟ್ಗಳು ಮತ್ತು ಸಿಗರೇಟ್ಗಳನ್ನು ಎಚ್ಚರಿಕೆಯಿಂದ ಸುತ್ತಿ ತುಂಬಿಸಲಾಗಿತ್ತು. ಒಟ್ಟು 25,000 ರೂ ಮೌಲ್ಯದ 120 ಗ್ರಾಂ ಗಾಂಜಾ ಮತ್ತು 40 ಸಿಗರೇಟ್ಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಕ್ಷಣ ಆಟೋ ಚಾಲಕನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಅವನು ಆಘಾತಕಾರಿ ಮಾಹಿತಿ ನೀಡಿದ್ದಾನೆ. ಜೈಲು ಕ್ಯಾಂಟೀನ್ನವರು ಫೋನ್ ಮಾಡಿ ಈ ಬಾಳೆಗೊನೆ ತರಲು ಹೇಳಿದ್ದರು. ನನಗೆ ಒಳಗೆ ಏನಿದೆ ಎಂದು ಗೊತ್ತಿರಲಿಲ್ಲ ಎಂದು ಹೇಳಿಕೊಂಡಿದ್ದಾನೆ. ಆದರೆ ಪೊಲೀಸರು ಇದನ್ನು ನಂಬದೇ ಆತನ ಮೊಬೈಲ್ ಕಾಲ್ ಡೀಟೇಲ್ಸ್ ಪರಿಶೀಲಿಸಿದಾಗ, ಕಳೆದ ಒಂದು ವಾರದಿಂದಲೂ ಜೈಲಿನೊಳಗಿನನ ಒಬ್ಬ ಖೈದಿಯ ಮನೆಯವರ ಜೊತೆ ಆಟೋಚಾಲಕ ಸಂಪರ್ಕದಲ್ಲಿದ್ದ ಎಂಬ ಮಾಹಿತಿ ಬಯಲಾಗಿದೆ
ಈ ಬಗ್ಗೆ ಮಾತನಾಡಿದ ಜೈಲು ಸೂಪರಿಂಟೆಂಡೆಂಟ್ ರಾಜಣ್ಣ ಇದೊಂದು ಚತುರ ತಂತ್ರ. ಬಾಳೆಗೊನೆಯನ್ನು ಯಾರೂ ಅನುಮಾನ ಪಡುವುದಿಲ್ಲ ಎಂಬ ಲೆಕ್ಕಾಚಾರದಲ್ಲಿ ದುಷ್ಕರ್ಮಿಗಳು ಇಂತಹ ಕೆಲಸ ಮಾಡಿದ್ದಾರೆ. ಆದರೆ ನಮ್ಮ ಸಿಬ್ಬಂದಿಗಳ ಎಚ್ಚರಿಕೆಯಿಂದ ಈ ರೀತಿ ಡ್ರಗ್ಸ್ ಒಳಗೆ ಹೋಗುವುದನ್ನು ತಡೆಯಲಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ ಇದೇ ಜೈಲಿನಲ್ಲಿ ಮೂರು ಬಾರಿ ಮೊಬೈಲ್ ಫೋನ್, ಚಾರ್ಜರ್ ಮತ್ತು ಡ್ರಗ್ಸ್ ಪತ್ತೆಯಾಗಿವೆ. ಈ ಹಿಂದೆ ಒಬ್ಬ ಕೈದಿ ತನ್ನ ಗಾಯದ ಮೇಲೆ ಹಾಕುವ ಬ್ಯಾಂಡೇಜ್ನೊಳಗೆ ಸಿಮ್ ಕಾರ್ಡ್ ಮತ್ತು ಮೊಬೈಲ್ ಭಾಗಗಳನ್ನು ಮರೆಮಾಚಿ ತಂದಿದ್ದ ಘಟನೆ ನಡೆದಿತ್ತು.
ತಕ್ಷಣ ಜೈಲು ಆಡಳಿತ ಈ ಕುರಿತು ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, NDPS ಆಕ್ಟ್ ಮತ್ತು ಕರ್ನಾಟಕ ಪ್ರಿಸನ್ ಆಕ್ಟ್ ಅಡಿಯಲ್ಲಿ ಕೇಸ್ ರಿಜಿಸ್ಟರ್ ಮಾಡಲಾಗಿದೆ. ಆಟೋ ಚಾಲಕನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.
ಶಿವಮೊಗ್ಗ ಎಸ್ಪಿ ಜಿ.ಕೆ. ಮಿಥುನ್ ಕುಮಾರ್ ಮಾತನಾಡಿ, ಜೈಲಿನೊಳಗೆ ಡ್ರಗ್ಸ್ ಸಪ್ಲೈ ತಡೆಯಲು ಹೊಸ ಭದ್ರತಾ ಕ್ರಮಗಳನ್ನು ಜಾರಿಗೊಳಿಸುತ್ತೇವೆ. ಎಲ್ಲಾ ಸಂದರ್ಶಕರ ವಾಹನಗಳು ಮತ್ತು ಸಾಮಗ್ರಿಗಳ ಮೇಲೆ ಕಟ್ಟುನಿಟ್ಟಿನ ಪರಿಶೀಲನೆ ಇರುತ್ತದೆ ಎಂದು ತಿಳಿಸಿದ್ದಾರೆ.





