ಬೆಂಗಳೂರು: ಹೂಡಿಕೆದಾರರಿಗೆ 10ರಿಂದ 20 ಪರ್ಸೆಂಟ್ ಲಾಭದ ಆಮಿಷ ತೋರಿಸಿ ಕೋಟಿ ಕೋಟಿ ರೂಪಾಯಿ ಸಂಗ್ರಹಿಸಿದ್ದ “ಸ್ಮಾರ್ಟ್ ವೈಸ್ ಕ್ವಾಂಟ್” ಎಂಬ ಹೂಡಿಕೆ ಕಂಪನಿ ಇದೀಗ ಕಚೇರಿಗೆ ಬೀಗ ಹಾಕಿ ಪರಾರಿಯಾಗಿರುವ ಆರೋಪ ಕೇಳಿಬಂದಿದೆ. ಗ್ಯಾರಂಟಿ ನ್ಯೂಸ್ ಈ ಕಂಪನಿಯ ಕಾರ್ಯವೈಖರಿಯ ಬಗ್ಗೆ ವರದಿ ಪ್ರಸಾರ ಮಾಡಿದ ಬೆನ್ನಲ್ಲೇ ಕಂಪನಿ ಕಚೇರಿ ಬಂದ್ ಮಾಡಿ ಎಸ್ಕೇಪ್ ಆಗಿದ್ದಾರೆ.
ಆರ್.ಟಿ.ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈ ಕಂಪನಿ ಕಳೆದ ಒಂದೂವರೆ ತಿಂಗಳಿನಿಂದ ಸಾವಿರಾರು ಜನರನ್ನು ಹೂಡಿಕೆಗೆ ಸೆಳೆಯುತ್ತಿತ್ತು. “ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ” ಎಂಬ ಘೋಷಣೆಯಡಿ ಜನರಿಗೆ ಹೂಡಿಕೆ ಮಾಡಲು ಪ್ರೇರೇಪಿಸಲಾಗುತ್ತಿತ್ತು. 10 ರಿಂದ 20 ಪರ್ಸೆಂಟ್ ವರೆಗೆ ಖಚಿತ ಲಾಭ ನೀಡುವುದಾಗಿ ಹೇಳಿ ಜನರ ವಿಶ್ವಾಸ ಗೆದ್ದಿದ್ದ ಕಂಪನಿ, ಇದೀಗ ಏಕಾಏಕಿ ಬಾಗಿಲು ಮುಚ್ಚಿ ನಾಪತ್ತೆಯಾಗಿದೆ.
ಹೂಡಿಕೆದಾರರ ಮಾಹಿತಿಯ ಪ್ರಕಾರ, ರಾಜ್ಯದ ವಿವಿಧ ಭಾಗಗಳಿಂದ ಮಾತ್ರವಲ್ಲದೆ ಹೊರರಾಜ್ಯಗಳಿಂದಲೂ ಜನರು ಹಣ ಹೂಡಿಕೆ ಮಾಡಿದ್ದರು. ಸುಮಾರು 12 ಲಕ್ಷ ಹೂಡಿಕೆದಾರರಿಗೆ ಈ ಕಂಪನಿ ನಾಮ ಹಾಕಿರುವ ಶಂಕೆ ವ್ಯಕ್ತವಾಗಿದೆ. ಕೆಲವರು ಲಕ್ಷಾಂತರ ರೂಪಾಯಿ ಹಣವನ್ನು ಹೂಡಿಕೆ ಮಾಡಿದ್ದಾರೆ ಎನ್ನಲಾಗಿದೆ.
ಗ್ಯಾರಂಟಿ ನ್ಯೂಸ್ ತಂಡ ಕಂಪನಿಯ ಕಚೇರಿಗೆ ತೆರಳಿ, “ಹೂಡಿಕೆ ಹಣಕ್ಕೆ 20 ಪರ್ಸೆಂಟ್ ಲಾಭ ಹೇಗೆ ಕೊಡ್ತೀರಾ?” ಎಂದು ಪ್ರಶ್ನಿಸಿತ್ತು. ಆ ವೇಳೆ ಕಂಪನಿಯ ಮ್ಯಾನೇಜರ್, “ನಮ್ಮಿಂದ ಮೋಸ ಆಗುವ ಪ್ರಶ್ನೆಯೇ ಇಲ್ಲ” ಎಂದು ಸ್ಪಷ್ಟನೆ ನೀಡಿದ್ದರು. ಆದರೆ ಸುದ್ದಿ ಪ್ರಸಾರವಾದ ಕೆಲವೇ ಗಂಟೆಗಳಲ್ಲಿ ಕಂಪನಿ ಕಚೇರಿಗೆ ಬೀಗ ಹಾಕಲಾಗಿದ್ದು, ಸಿಬ್ಬಂದಿ ಹಾಗೂ ನಿರ್ವಹಣಾ ತಂಡ ನಾಪತ್ತೆಯಾಗಿದ್ದಾರೆ.
ಈ ಘಟನೆ ಬಳಿಕ ಹಲವಾರು ಹೂಡಿಕೆದಾರರು ಆರ್.ಟಿ.ನಗರ ಪೊಲೀಸ್ ಠಾಣೆಗೆ ದೌಡಾಯಿಸಿ ದೂರು ನೀಡಿದ್ದಾರೆ. ಕಂಪನಿಯ ಬ್ರಾಂಚ್ ಮ್ಯಾನೇಜರ್ ಹಾಗೂ ಸಿಬ್ಬಂದಿ ವಿರುದ್ಧ ವಂಚನೆ ಪ್ರಕರಣದಡಿ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕಂಪನಿಯ ಕಾರ್ಯಾಚರಣೆಯ ಹಿಂದೆ ಅರುಣಾಚಲಂ ಹಾಗೂ ಪಾರ್ವತೀಸ್ ಸಿಮ್ರಾನ್ ಪಾಲ್ ಎಂಬವರ ಹೆಸರು ಕೇಳಿಬರುತ್ತಿದ್ದು, ತಮಿಳುನಾಡು ಹಾಗೂ ಆಂಧ್ರ ಪ್ರದೇಶ ಮೂಲದ ವ್ಯಕ್ತಿಗಳು ಈ ಸಂಸ್ಥೆಯನ್ನು ನಡೆಸುತ್ತಿದ್ದರು ಎನ್ನಲಾಗಿದೆ.
ಹೂಡಿಕೆದಾರರಿಗೆ ಆರಂಭದಲ್ಲಿ ಸಣ್ಣ ಪ್ರಮಾಣದ ಲಾಭ ನೀಡಿ ವಿಶ್ವಾಸ ಹುಟ್ಟಿಸಿ, ನಂತರ ಹೆಚ್ಚಿನ ಮೊತ್ತದ ಹಣ ಹೂಡಿಕೆ ಮಾಡಿಸಿಕೊಳ್ಳಲಾಗುತ್ತಿತ್ತು ಎಂಬ ಆರೋಪವೂ ಕೇಳಿಬಂದಿದೆ.





