ಬೆಂಗಳೂರು, ಸೆಪ್ಟೆಂಬರ್ 25: ಕನ್ನಡ ಸಾಹಿತ್ಯ ಲೋಕದ ದಿಗ್ಗಜ ಮತ್ತು ಪದ್ಮವಿಭೂಷಣ ಪುರಸ್ಕೃತ ಎಸ್.ಎಲ್. ಭೈರಪ್ಪನವರ ಪಾರ್ಥಿವ ಶರೀರಕ್ಕೆ ಇಂದು ಬೆಂಗಳೂರಿನ ಜೆ.ಸಿ. ರಸ್ತೆಯ ರವೀಂದ್ರ ಕಲಾಕ್ಷೇತ್ರದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಂತಿಮ ನಮನ ಸಲ್ಲಿಸಿದರು. ಭೈರಪ್ಪನವರ ಅಗಲಿಕೆ ಕನ್ನಡ ಸಾಹಿತ್ಯಕ್ಕೆ ತುಂಬಲಾರದ ನಷ್ಟವನ್ನುಂಟುಮಾಡಿದೆ ಎಂದು ಡಿಸಿಎಂ ಶಿವಕುಮಾರ್ ಭಾವುಕವಾಗಿ ನುಡಿದರು.
ಎಸ್.ಎಲ್. ಭೈರಪ್ಪ ಅವರ ಕಾದಂಬರಿಗಳು ಕೇವಲ ಕನ್ನಡ ಓದುಗರಿಗೆ ಮಾತ್ರವಲ್ಲದೆ, ದೇಶ-ವಿದೇಶಗಳಲ್ಲಿ ಅನೇಕ ಭಾಷೆಗಳಿಗೆ ಅನುವಾದಗೊಂಡು ಜಾಗತಿಕ ಮನ್ನಣೆ ಗಳಿಸಿವೆ. ‘ಪರ್ವ’, ‘ದಾಟು’, ‘ಗೃಹಭಂಗ’ ಮುಂತಾದ ಕಾದಂಬರಿಗಳು ಭಾರತೀಯ ಸಂಸ್ಕೃತಿಯ ಆಳವಾದ ಚಿಂತನೆಯನ್ನು ಪ್ರತಿಬಿಂಬಿಸುತ್ತವೆ. ಅವರ ಬರವಣಿಗೆಯ ಶೈಲಿ, ದಿಟ್ಟವಾದ ವಿಚಾರಗಳು ಮತ್ತು ಸತ್ಯಕ್ಕೆ ಬದ್ಧವಾದ ನಿಲುವು ಓದುಗರ ಮನಸ್ಸನ್ನು ಸೆಳೆಯಿತು.
1984ರಲ್ಲಿ ಕನಕಪುರದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭೈರಪ್ಪನವರನ್ನು ಬನಶಂಕರಿಯಿಂದ ಮೆರವಣಿಗೆಯಲ್ಲಿ ಕರೆತಂದಿದ್ದ ಘಟನೆಯನ್ನು ಸ್ಮರಿಸಿದ ಡಿಸಿಎಂ ಶಿವಕುಮಾರ್, ಅವರ ದಿಟ್ಟ ಮತ್ತು ನಿರ್ಭೀತ ವ್ಯಕ್ತಿತ್ವವನ್ನು ಕೊಂಡಾಡಿದರು. “ಅವರ ಬರವಣಿಗೆಯಲ್ಲಾಗಲಿ, ಮಾತಿನಲ್ಲಾಗಲಿ ಎಂದಿಗೂ ಸತ್ಯದಿಂದ ವಿಮುಖರಾಗಲಿಲ್ಲ. ಅವರ ಕಾದಂಬರಿಗಳು ಕನ್ನಡ ಸಾಹಿತ್ಯದ ಗಡಿಯನ್ನು ಮೀರಿ ಜಾಗತಿಕವಾಗಿ ಗೌರವ ಗಳಿಸಿವೆ,” ಎಂದು ಶಿವಕುಮಾರ್ ಹೇಳಿದರು.
ಭೈರಪ್ಪನವರಿಗೆ ಪದ್ಮಶ್ರೀ, ಪದ್ಮವಿಭೂಷಣ ಸೇರಿದಂತೆ ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ. ಅವರ ಕೃತಿಗಳು ಭಾರತೀಯ ಸಂಸ್ಕೃತಿಯನ್ನು ಎತ್ತಿಹಿಡಿದವು. ದೇಶದ ಅನೇಕ ಗಣ್ಯರು ಅವರ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ.
ಡಿಸಿಎಂ ಶಿವಕುಮಾರ್ ಕನ್ನಡ ಮಾಧ್ಯಮದವರಿಗೆ ಅಭಿನಂದನೆ ಸಲ್ಲಿಸಿದರು. “ಒಬ್ಬ ಪ್ರಧಾನಿ ಅಥವಾ ರಾಷ್ಟ್ರಪತಿಗೆ ಸಲ್ಲಿಸುವ ಗೌರವದಂತೆ, ನೀವು ನಮ್ಮ ಕನ್ನಡದ ದಿಗ್ಗಜರಿಗೆ ಗೌರವ ಸಲ್ಲಿಸಿದ್ದೀರಿ. ಇದು ಕನ್ನಡಿಗರ ಹೆಮ್ಮೆಯ ಕ್ಷಣ,” ಎಂದರು. ಭೈರಪ್ಪನವರ ಸ್ಮಾರಕದ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಮೈಸೂರಿನಲ್ಲಿ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಸಂಸ್ಕಾರ ನಡೆಯಲಿದೆ.





