ಒಳ ಮೀಸಲಾತಿಗಾಗಿ ರಾಜ್ಯದಲ್ಲಿ ನಡೆದ ಸುದೀರ್ಘ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮೀಸಲಾತಿ ಹಂಚಿಕೆಯ ಐತಿಹಾಸಿಕ ತೀರ್ಮಾನ ಕೈಗೊಳ್ಳಲಾಗಿದ್ದು, ಸಮಾನ ಹಂಚಿಕೆಯ ತತ್ವವನ್ನು ಅಳವಡಿಸಿಕೊಳ್ಳಲಾಗಿದೆ.
ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಕುರಿತು ಸುದೀರ್ಘ ಚರ್ಚೆಗಳು ನಡೆದವು. ರೋಸ್ಟರ್ ಪಾಯಿಂಟ್ಗಳ ಹಂಚಿಕೆಯಲ್ಲಿ ತಾಂತ್ರಿಕ ತೊಂದರೆಯಾಗಬಹುದು ಎಂಬ ಕಾರಣಕ್ಕೆ ದಲಿತ ಸಚಿವರ ನಡುವೆ ಸಣ್ಣ ಮಟ್ಟದ ವಾಗ್ವಾದಗಳು ನಡೆದವು. ಕೊನೆಗೆ ಎಲ್ಲರಿಗೂ ನ್ಯಾಯ ಒದಗಿಸಬೇಕು ಮತ್ತು ಕಾನೂನು ಅಡಚಣೆಗಳಾಗಬಾರದು ಎಂಬ ಉದ್ದೇಶದಿಂದ 5:5:5 ಅನುಪಾತದ ಸೂತ್ರವನ್ನು ಅಂತಿಮಗೊಳಿಸಲಾಯಿತು.
ಹಂಚಿಕೆಯಾದ ರೀತಿ ಇಲ್ಲಿದೆ:
ರಾಜ್ಯ ಸರ್ಕಾರವು ಒಟ್ಟು 101 ದಲಿತ ಉಪಜಾತಿಗಳನ್ನು ಒಳಗೊಂಡಂತೆ ಈ ಕೆಳಗಿನಂತೆ ಮೀಸಲಾತಿ ಹಂಚಿಕೆ ಮಾಡಿದೆ:
ದಲಿತ ಎಡಗೈ ಸಮುದಾಯ (18 ಜಾತಿಗಳು): ಶೇ. 5
ದಲಿತ ಬಲಗೈ ಸಮುದಾಯ (20 ಜಾತಿಗಳು): ಶೇ. 5
ಸ್ಪೃಶ್ಯ ಹಾಗೂ ಇತರೆ (63 ಜಾತಿಗಳು): ಶೇ. 5
ವಿಧಾನಸೌಧದಲ್ಲಿ ಸಂಭ್ರಮ:
ಒಳ ಮೀಸಲಾತಿ ಹಂಚಿಕೆಯಾಗುತ್ತಿದ್ದಂತೆಯೇ ದಲಿತ ಸಮುದಾಯದ ನಾಯಕರು ಮತ್ತು ಅಭಿಮಾನಿಗಳು ವಿಜಯೋತ್ಸವ ಆಚರಿಸಿದರು. ಮಾಜಿ ಸಚಿವ ಹೆಚ್. ಆಂಜನೇಯ ಅವರು ವಿಧಾನಸೌಧದ ಕೆಂಗಲ್ ಗೇಟ್ ಬಳಿ ಸಚಿವ ಬೋಸರಾಜು ಹಾಗೂ ಅಭಿಮಾನಿಗಳಿಗೆ ಸಿಹಿ ಹಂಚಿ ಸಂಭ್ರಮಿಸಿದರು. ದಶಕಗಳ ಕಾಲದ ಹೋರಾಟಕ್ಕೆ ಪ್ರತಿಫಲ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಈ ಹಿಂದೆ ರೋಸ್ಟರ್ ಪಾಯಿಂಟ್ ಗೊಂದಲ ಹಾಗೂ ಅಲೆಮಾರಿ ಸಮುದಾಯದವರು ಕೋರ್ಟ್ ಮೆಟ್ಟಿಲೇರಿದ್ದರಿಂದ ಮೀಸಲಾತಿ ಜಾರಿ ವಿಳಂಬವಾಗಿತ್ತು. ಅಲ್ಲದೆ ಬೈಎಲೆಕ್ಷನ್ ನೀತಿ ಸಂಹಿತೆಯೂ ಅಡ್ಡಿಯಾಗಿತ್ತು. ಆದರೆ ಈ ಬಾರಿ ತಾಂತ್ರಿಕ ಸಮಸ್ಯೆಗಳು ಬಾರದಂತೆ ಸರ್ಕಾರ ಅಳೆದು ತೂಗಿ ಸಮಾನ ಹಂಚಿಕೆಯ ನಿರ್ಧಾರ ಕೈಗೊಂಡಿದೆ.





