ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ರಾಜ್ಯದಲ್ಲಿ ಕಮಿಷನ್ ವ್ಯವಸ್ಥೆಯ ಬಗ್ಗೆ ಸ್ಪೋಟಕ ಹೇಳಿಕೆ ನೀಡಿದ್ದಾರೆ. “ಕಮಿಷನ್ ಹಿಂದೆಯೂ ಇತ್ತು, ಈಗಲೂ ಇದೆ, ಮುಂದೆಯೂ ಇರುತ್ತದೆ. ಅದನ್ನು ಪತ್ತೆಹಚ್ಚುವುದು ಸಾಧ್ಯವಿಲ್ಲ” ಎಂದು ಅವರು ಹೇಳಿದರು.
ಗುತ್ತಿಗೆದಾರರು ಕಾಮಗಾರಿ ಬಿಲ್ ಪಾವತಿಗೆ ಕಮಿಷನ್ ಕೇಳುತ್ತಿದ್ದಾರೆ ಎಂಬ ಆರೋಪಗಳ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, “ಪರಿಹಾರ ಕಂಡುಕೊಳ್ಳಲು ದಾರಿ ಹುಡುಕಬೇಕಲ್ಲವೇ? ಗುತ್ತಿಗೆದಾರರು ಈ ವಿಷಯವನ್ನು ಮುಖ್ಯಮಂತ್ರಿ ಮತ್ತು ಲೋಕಾಯುಕ್ತರ ಗಮನಕ್ಕೆ ತರಲಿ” ಎಂದು ಸಲಹೆ ನೀಡಿದರು.
ಬಿಜೆಪಿ ಸರ್ಕಾರದ ತಪ್ಪು ಎಂದ ಆರೋಪ ಸಚಿವರು ಮುಂದುವರೆದು, “ಬಿಲ್ ಮೊತ್ತ ಏಕೆ ಇಷ್ಟೊಂದು ಬಾಕಿ ಉಳಿದಿದೆ ಎಂಬುದರ ಬಗ್ಗೆ ಚಿಂತನೆ ಆಗಬೇಕು. ಬಜೆಟ್ ಬೆಂಬಲ ಇಲ್ಲದೇ ಬಿಜೆಪಿ ಸರ್ಕಾರ ತನ್ನ ಅವಧಿಯಲ್ಲಿ ಕಾಮಗಾರಿಗಳಿಗೆ ಟೆಂಡರ್ ಕರೆದಿತ್ತು. ಕಾಮಗಾರಿ ಮುಗಿದರೂ ಹಣ ಪಾವತಿಸಲು ಸಮಯ ಬೇಕು. ಇದು ಹಿಂದಿನ ಸರ್ಕಾರದ ತಪ್ಪು. ನೀರಾವರಿ ಮತ್ತು ಲೋಕೋಪಯೋಗಿ ಇಲಾಖೆಯಲ್ಲಿ ಹೆಚ್ಚಿನ ಮೊತ್ತ ಬಾಕಿ ಉಳಿದಿದೆ. ಕಾಮಗಾರಿ ನಿಲ್ಲಿಸಲು ಸಾಧ್ಯವಿಲ್ಲ. ಗುತ್ತಿಗೆದಾರರು ತಮಗೆ ಸೂಕ್ತವೆನಿಸಿದ ಕಡೆ ಟೆಂಡರ್ನಲ್ಲಿ ಭಾಗವಹಿಸುತ್ತಾರೆ” ಎಂದು ವಿವರಿಸಿದರು.
₹12 ಸಾವಿರ ಕೋಟಿ ಬಾಕಿ – ₹3 ಸಾವಿರ ಕೋಟಿ ಪಾವತಿ ಲೋಕೋಪಯೋಗಿ ಇಲಾಖೆಯಲ್ಲಿ ₹12 ಸಾವಿರ ಕೋಟಿ ಬಾಕಿ ಇತ್ತು ಎಂದು ತಿಳಿಸಿದ ಸಚಿವರು, “ಈಗ ₹3 ಸಾವಿರ ಕೋಟಿ ಪಾವತಿಸಲಾಗಿದೆ. ಬಾಕಿ ಉಳಿಯಲು ಅಧಿಕಾರಿಗಳು ಕಾರಣರಲ್ಲ. ಹಿಂದಿನ ಬಿಜೆಪಿ ಸರ್ಕಾರವೇ ಕಾರಣ” ಎಂದು ಆರೋಪಿಸಿದರು.
ಕಮಿಷನ್ ನಿಯಂತ್ರಣಕ್ಕೆ ಒತ್ತಡ “ಬೇರೆ ಸಚಿವರ ವಿಚಾರದಲ್ಲಿ ನಾನು ಉತ್ತರ ಕೊಡಲಾರೆ. ಅವರೇ ಸ್ಪಷ್ಟನೆ ನೀಡಬೇಕು. ಒಬ್ಬರು ಇನ್ನೊಬ್ಬರ ಮೇಲೆ ಆರೋಪ ಮಾಡುತ್ತಾರೆ. ಅದನ್ನು ಬಿಟ್ಟು ಕಮಿಷನ್ ನಿಯಂತ್ರಣ ಮಾಡಬೇಕು ಅಷ್ಟೆ” ಎಂದು ಸತೀಶ ಜಾರಕಿಹೊಳಿ ಹೇಳಿದರು.
ಗುತ್ತಿಗೆದಾರರ ಬಿಲ್ ಬಾಕಿ ಮತ್ತು ಕಮಿಷನ್ ಆರೋಪಗಳು ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿವೆ. ಸಚಿವರ ಈ ಹೇಳಿಕೆಯಿಂದ ವಿರೋಧ ಪಕ್ಷಗಳು ಮತ್ತಷ್ಟು ಆಕ್ರಮಣಕ್ಕೆ ಇಳಿಯುವ ಸಾಧ್ಯತೆ ಇದೆ.





