ಹುಬ್ಬಳ್ಳಿ: ಭವ್ಯ ಭಾರತದ ಪ್ರತಿಭಾನ್ವಿತ ನಾಗರಿಕರನ್ನು ನಿರ್ಮಾಣ ಮಾಡುವಂಥ ಶಾಲಾಭಿವೃದ್ಧಿ ಕಾರ್ಯದಲ್ಲಿ ತೊಡಗಿರುವ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಎಲೈಟ್ನ ಕಾರ್ಯ ಸ್ತುತ್ಯಾರ್ಹವಾಗಿದೆ ಎಂದು ಸ್ವರ್ಣ ಸಮೂಹ ಸಂಸ್ಥೆ ಸಂಸ್ಥಾಪಕ ನಿರ್ದೇಶಕ , ರೋಟೇರಿಯನ್ ಡಾ.ವಿಎಸ್ವಿ ಪ್ರಸಾದ ಮೆಚ್ಚುಗೆ ವ್ಯಕ್ತಪಡಿಸಿದರು.
ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಎಲೈಟ್ ಹಾಗೂ ಸ್ವರ್ಣ ಸಮೂಹ ಸಂಸ್ಥೆಯಿಂದ ವಿದ್ಯಾನಗರದ ನೆಕಾರ್ ಕಾಲೋನಿಯ ಹ್ಯಾಪಿ ಸ್ಕೂಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಾಗಿ ರೂಪಿಸಿದ್ದ ಮೂರು ಅರ್ಥಪೂರ್ಣ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸ್ವರ್ಣ ಸಂಸ್ಥೆಯಿಂದ 2,000 ಚದರ ಅಡಿ ಪೇವರ್ಸ್ ಅಳವಡಿಸಲಾಗಿದೆ.
ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಸುರಕ್ಷಿತ ಹಾಗೂ ಸ್ವಚ್ಛವಾದ ನಡೆ ದಾರಿ ಹಾಗೂ ಎರಡು ತರಗತಿ ಕೊಠಡಿಗಳಿಗೆ ಸಂಪೂರ್ಣವಾಗಿ ಬಣ್ಣ ಹಚ್ಚುವುದರ ಜೊತೆಗೆ ಕಾರ್ಯಕ್ರಮ ನಡೆಯುವ ಮಳೆ ಗಾಳಿ , ಬಿಸಿಲು ಬಡಿಯದಂತೆ ಮಕ್ಕಳಿಗಾಗಿ ವೇದಿಕೆಯ ಮೇಲೆ ಹೊಸ ಶೆಡ್ ಕೂಡ ನಮ್ಮ ಸಂಸ್ಥೆಯಿಂದ ನಿರ್ಮಿಸಿದ್ದು ಇದರಿಂದ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು, ಸಭೆಗಳನ್ನು ಆಯೋಜಿಸಲು ಹಾಗೂ ಇತರ ಶಾಲಾ ಕಾರ್ಯಕ್ರಮಗಳಿಗೆ ಅನುಕೂಲಕರ ಮತ್ತು ಸುರಕ್ಷಿತ ವ್ಯವಸ್ಥೆ ಕಲ್ಪಿಸಲಾಗಿದೆ.
ಸರ್ಕಾರಿ ಶಾಲೆಗಳಿಗೆ ಸರ್ಕಾರ ಸರಿಯಾಗಿ ಅನುದಾನ ನೀಡದಿರುವ ಸಂದರ್ಭದಲ್ಲಿ ರೋಟರಿ ಸಂಸ್ಥೆ ಮುಂದೆ ಬಂದು ಶಾಲೆಗೆ ಅಗತ್ಯವಾದ ಸೌಲಭ್ಯಗಳನ್ನು ಕಲ್ಪಿಸುತ್ತಿರುವುದು ಸಾರ್ಥಕವಾದ ಸೇವೆ, ಇಂಥ ಕಾರ್ಯಗಳಿಗೆ ನಾನೂ ಕೂಡ ನನ್ನ ಕೈಲಾದ ಸಹಾಯ ಸಹಕಾರ ನೀಡಿದ್ದೇನೆ , ಮುಂದಿನ ದಿನಗಳಲ್ಲೂ ಕ್ಲಬ್ನ ಸಾಮಾಜಮುಖಿ ಕಾರ್ಯಗಳಿಗೆ ನಮ್ಮ ಸಂಸ್ಥೆಯಿಂದ ಸಹಕಾರ ನೀಡುವುದಾಗಿ ಡಾ. ಪ್ರಸಾದ ಭರವಸೆ ನೀಡಿದರು.
ಇದೇ ಸಮಯದಲ್ಲಿ 3170 ಡಿಸ್ಟ್ರಿಕ್ಟ್ ಜಿಲ್ಲಾ ಗೌರ್ವನರ್ ಅರುಣ ಭಂಡಾರೆ ಮಾತನಾಡಿ , ನಗರದಲ್ಲಿ 10 ಕ್ಕೂ ಹೆಚ್ಚು ಹಿರಿಯ ಕ್ಲಬ್ಗಳ ಜೊತೆಗೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಸಾಮಾಜ ಸೇವೆಯಲ್ಲಿ ರೋಟರಿ ಕ್ಲಬ್ ಹುಬ್ಬಳ್ಳಿ ಎಲೈಟ್ ತೊಡಗಿಕೊಂಡಿದ್ದು ಇದರ ಸೇವೆಯನ್ನು ಶ್ಲಾಘಿಸಿದರು. ಹೀಗೆ ಮುಂದಿನ ದಿನಗಳಲ್ಲೂ ಸಹ ಸಮಾಜ ಸೇವೆ ಮುಂದುವರೆಸೊಕೊಂಡು ಹೋಗಲು ಸಲಹೆ ನೀಡಿದರು. ಸಮಾಜಿಕ ಕೆಲಸಗಳಿಗೆ ನಮ್ಮ 3170 ಡಿಸ್ಟ್ರಿಕ್ಟ್ನಿಂದ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಎಜಿ ರೋಟೇರಿಯನ್ ರಾಧಿಕಾ ಗೋಖಲೆ , ಕ್ಲಬ್ನ ಅಧ್ಯಕ್ಷ ಅವಿನಾಶ ಕುರ್ತಕೋಟಿ, ಕಾರ್ಯದರ್ಶಿ ಅಂಬಾಪ್ರಸಾದ ಮಲ್ಯ, ಹ್ಯಾಪಿ ಸ್ಕೂಲ್ ಚೇರ್ಮನ್ ಶರದ್ ಜಾಧವ, ಪ್ರಾಜೆಕ್ಟ್ ಕೋ-ಆರ್ಡಿನೇಟರ್ ಆರು ಗೌತಮಿ ಸೇರಿದಂತೆ ಕ್ಲಬ್ನ ಸದಸ್ಯರು ಪಾಲ್ಗೊಂಡಿದ್ದರು.





