ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ಕರ್ನಾಟಕ ರಾಜಕಾರಣದಲ್ಲಿ ಭಾರೀ ಗದ್ದಲ ಸೃಷ್ಟಿಸಿದೆ. ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಮಲ್ಲಿಕಾರ್ಜುನ್ ಮತ್ತು ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಟಿ. ದಾಸಕರಿಯಪ್ಪ ನಡುವಿನ ಪೈಪೋಟಿಗಿಳಿದಿದ್ದಾರೆ.. ಆದರೆ ಟಿಕೆಟ್ ವಂಚನೆಯಿಂದ ಮುಸ್ಲಿಂ ಸಮುದಾಯದಲ್ಲಿ ತೀವ್ರ ಅಸಮಾಧಾನ ಮೂಡಿದೆ. ಕ್ಷೇತ್ರ ಪ್ರತ್ಯೇಕವಾದಾಗಿನಿಂದಲೂ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರೇ ಟಿಕೆಟ್ ಪಡೆಯುತ್ತಾ ಬಂದಿದ್ದರು. 2008, 2013, 2018, 2023 ನಾಲ್ಕೂ ಚುನಾವಣೆಗಳಲ್ಲಿ ಅವರು ಗೆದ್ದ ಹಿನ್ನೆಲೆ ಈ ಬಾರಿ ಪುತ್ರನನ್ನು ಕಣಕ್ಕಿಳಿಸಲಾಗಿದೆ. ಇದರಿಂದ ಮುಸ್ಲಿಂ ಸಮುದಾಯ ನಿರಾಶೆಗೊಂಡಿದ್ದು, ಹಲವರು ಕಾಂಗ್ರೆಸ್ ವಿರೋಧಿಗಳಾಗಿದ್ದಾರೆ.
ಕೆಪಿಸಿಸಿಯಲ್ಲಿ ಅಲ್ಪಸಂಖ್ಯಾತರ ಬಂಡಾಯ
ಚುನಾವಣೆ ನಡುವೆಯೇ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಜಬ್ಬಾರ್ ರಾಜೀನಾಮೆ ನೀಡಿದ್ದು, ಸಿಎಂ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಅವರನ್ನು ಹುದ್ದೆಯಿಂದ ವಜಾ ಮಾಡಲಾಗಿದೆ. ಈ ಬೆಳವಣಿಗೆಗಳು ದಾವಣಗೆರೆಯಲ್ಲಿ ಕಾಂಗ್ರೆಸ್ ಪರಿಸ್ಥಿತಿ ಮತ್ತಷ್ಟು ಹದಗೆಡಿಸಿವೆ. ಕಾಂಗ್ರೆಸ್ ಪಾಳಯದಲ್ಲೇ ಕೋಲಾಹಲ ಸೃಷ್ಟಿಯಾಗಿದೆ.
ಪ್ರಶಾಂತ್ ಕಿಣಿ ರೋಚಕ ಭವಿಷ್ಯ
ಈ ನಡುವೆ ಖ್ಯಾತ ಜ್ಯೋತಿಷಿ ಪ್ರಶಾಂತ್ ಕಿಣಿ ಅವರು ಹೊಸ ಭವಿಷ್ಯವಾಣಿ ನುಡಿದಿದ್ದಾರೆ. ಉಪಚುನಾವಣೆ ಫಲಿತಾಂಶದ ಬಳಿಕ ಕರ್ನಾಟಕ ಕಾಂಗ್ರೆಸ್ ಎರಡು ಭಾಗವಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಹುದ್ದೆಯನ್ನು ಕಳೆದುಕೊಳ್ಳಲಿದ್ದಾರೆ. ಮೈಸೂರು ಪ್ರದೇಶ ತೊಂದರೆಗಳನ್ನು ಎದುರಿಸಲಿದೆ. ಭವಿಷ್ಯದಲ್ಲಿ ಕರ್ನಾಟಕವೇ ಎರಡು ಭಾಗವಾಗುವ ಸೂಚನೆ ನೀಡಿದ್ದಾರೆ. ಕೆಲವು ಕಾಂಗ್ರೆಸ್ ನಾಯಕರು ತಮ್ಮ ನಿಷ್ಠೆಯನ್ನು ಬದಲಾಯಿಸುವ ಸಾಧ್ಯತೆಯಿದೆ. ಬಿಜೆಪಿ ಕರ್ನಾಟಕ ರಾಜಕೀಯಕ್ಕೆ ಒಬ್ಬ ‘ಯೋಗಿ’ಯನ್ನು ತರಲಿದೆ. ಅದು ಉತ್ತರ ಪ್ರದೇಶದ ಮಾದರಿಯಲ್ಲಿ ಎಂದು ಹೇಳಿದ್ದಾರೆ.
ದೆಹಲಿ ಭವಿಷ್ಯ ನಿಜವಾದಾಗಿನಿಂದ ಕುತೂಹಲ ಹೆಚ್ಚಳ
ಕಳೆದ ವರ್ಷ ಅಕ್ಟೋಬರ್ 13ರಂದು ಪ್ರಶಾಂತ್ ಕಿಣಿ ಅವರು ‘ದೆಹಲಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ, ಮಹಿಳೆಯೊಬ್ಬರು ಸಿಎಂ ಆಗಲಿದ್ದಾರೆ’ ಎಂದು ಟ್ವೀಟ್ ಮಾಡಿದ್ದರು. ಅದು ನಿಜವಾಯಿತು, ದೆಹಲಿ ಚುನಾವಣೆಯಲ್ಲಿ ಬಿಜೆಪಿ 48 ಸ್ಥಾನ ಗಳಿಸಿ 27 ವರ್ಷಗಳ ಬಳಿಕ ಅಧಿಕಾರ ಪಡೆದುಕೊಂಡಿತು. ಮೊದಲ ಬಾರಿ ಶಾಸಕಿ ರೇಖಾ ಗುಪ್ತಾ ಸಿಎಂ ಆದರು. ಹಿಂದೆಯೇ ಅವರು ‘ಲಕ್ಷ್ಮೀ ಹೆಬ್ಬಾಳ್ಕರ್ ರಾಜ್ಯದ ಮುಂದಿನ ಸಿಎಂ’ ಎಂದು ಭವಿಷ್ಯ ನುಡಿದಿದ್ದರು. ಆದರೆ ಕಳೆದ ವರ್ಷದ ಏಪ್ರಿಲ್ ವೇಳೆಗೆ ಅದು ಸುಳ್ಳಾಗಿತ್ತು. ಈಗ ಮತ್ತೆ ಅದೇ ಮಾತನ್ನು ಪುನರುಚ್ಚರಿಸಿದ್ದಾರೆ.
ಮುಂದೇನು? ಇನ್ನು ಕೆಲವೇ ದಿನಗಳಲ್ಲಿ ಸ್ಪಷ್ಟನೆ
ಪ್ರಶಾಂತ್ ಕಿಣಿ ಅವರ ಈ ಭವಿಷ್ಯವಾಣಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಾಂಗ್ರೆಸ್ ಇಬ್ಭಾಗವಾಗುವುದು, ಯೋಗಿ ಎಂಟ್ರಿ, ಸಿದ್ದರಾಮಯ್ಯ ಪತನ, ಈ ಹೇಳಿಕೆಗಳು ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿವೆ. ಉಪಚುನಾವಣೆಯ ಫಲಿತಾಂಶದೊಂದಿಗೆ ಈ ಭವಿಷ್ಯ ಎಷ್ಟು ನಿಜ ಎಂಬುದು ತಿಳಿಯಲಿದೆ. ಕಾಂಗ್ರೆಸ್ ನಾಯಕರು ಈ ಕುರಿತು ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಆದರೆ ಅಲ್ಪಸಂಖ್ಯಾತರ ಅಸಮಾಧಾನ, ಒಳಜಗಳಗಳು ಪಕ್ಷಕ್ಕೆ ತೊಂದರೆ ಸೃಷ್ಟಿಸುವ ಸಾಧ್ಯತೆ ಇದೆ. ಇನ್ನೇನು ಕೆಲವೇ ದಿನಗಳಲ್ಲಿ ದಾವಣಗೆರೆ ಫಲಿತಾಂಶ ಹೊರಬೀಳಲಿದೆ.





