ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರು 2029ರಲ್ಲಿ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಬಿಜೆಪಿಯವರನ್ನು ತಿಹಾರ್ ಜೈಲಿಗೆ ಕಳುಹಿಸುವುದಾಗಿ ಘೋಷಿಸಿದ್ದಾರೆ. ಕಾಂಗ್ರೆಸ್ ಶಾಸಕ ಸುಬ್ಬಾರೆಡ್ಡಿ ಮೇಲಿನ ಇಡಿ ರೇಡ್ ಪ್ರತಿಕ್ರಿಯೆಯಾಗಿ ಅವರು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಪ್ರದೀಪ್ ಈಶ್ವರ್ ಅವರು, ಸುಬ್ಬಾರೆಡ್ಡಿ ಅವರ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಸುಬ್ಬಾರೆಡ್ಡಿ ಸಾಹೇಬ್ರು ಕಷ್ಟಪಟ್ಟು ಮೇಲೆ ಬಂದವರು, ಪಕ್ಷ ಕಟ್ಟಿ ಬೆಳೆದವರು. ಅಂತಹವರ ಮೇಲೆ ಇಡಿ ರೇಡ್ ಮಾಡಿದ್ದಾರೆ. ಇಡಿಯವರಿಗೆ ಕಾಂಗ್ರೆಸ್ ಕಂಡರೆ ಯಾಕೋ ಪ್ರೀತಿ ಹೆಚ್ಚು ಅನಿಸುತ್ತಿದೆ,” ಎಂದು ಅವರು ವ್ಯಂಗ್ಯವಾಡಿದ್ದಾರೆ.
ಅವರು ಮುಂದುವರೆದು, ಅಮಿತ್ ಶಾ ಅವರ ಮಗ ಜಯ್ ಶಾ ಅವರ ಕಂಪನಿ ವ್ಯವಹಾರಗಳು ಮತ್ತು ನಿತಿನ್ ಗಡ್ಕರಿ ಅವರ 17 ಶುಗರ್ ಫ್ಯಾಕ್ಟರಿಗಳ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. “ಇವೆಲ್ಲವೂ ಇಡಿ ಮತ್ತು ಐಟಿಗೆ ಕಾಣುವುದಿಲ್ಲವೇ?” ಎಂದು ಸವಾಲು ಹಾಕಿದ್ದಾರೆ.
ಪ್ರದೀಪ್ ಈಶ್ವರ್ ಅವರು 2029ರ ಚುನಾವಣೆಯಲ್ಲಿ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ, ಬಿಜೆಪಿಯವರನ್ನು ಹುಡುಕಿ ಹುಡುಕಿ ತಿಹಾರ್ ಜೈಲಿಗೆ ಕಳುಹಿಸುವುದಾಗಿ ಹೇಳಿದ್ದಾರೆ. “ನೀವು ಎಷ್ಟು ಟಾರ್ಗೆಟ್ ಮಾಡಿದರೂ ನಾವು ಹೆದರುವುದಿಲ್ಲ. ಬರೀ ಕಾಂಗ್ರೆಸ್ನ್ನೇ ಟಾರ್ಗೆಟ್ ಮಾಡಿದರೆ ರಾಜಕೀಯ ಎಲ್ಲಿಗೆ ಹೋಗುತ್ತದೆ? ಅವರು ಕಲ್ಲು ಹಾಕಿದರೆ ನಾವು ಫ್ಲವರ್ ಹಾಕುತ್ತೇವೆಯೇ? 2029ಕ್ಕೆ ನಾವು ಕೇಂದ್ರದಲ್ಲಿ ಬಂದರೆ ಬಿಜೆಪಿಯವರನ್ನು ಜೈಲಿಗೆ ಕಳುಹಿಸುತ್ತೇವೆ,” ಎಂದು ಘೋಷಿಸಿದ್ದಾರೆ.
ಈ ಹೇಳಿಕೆಗೆ ಪ್ರತಿಕ್ರಿಯೆಯಾಗಿ, ಮಾಧ್ಯಮದವರು “ನೀವು ಈ ಹಿಂದೆ ಕಲ್ಲು ಹಾಕಿದ್ದೀರಾ? ಅದಕ್ಕೇ ಬಿಜೆಪಿಯವರು ಈಗ ಕಲ್ಲು ಹಾಕುತ್ತಿದ್ದಾರೆಯೇ?” ಎಂದು ಪ್ರಶ್ನಿಸಿದಾಗ, ಪ್ರದೀಪ್ ಈಶ್ವರ್, “ನಾವು ಯಾರನ್ನೂ ಟಾರ್ಗೆಟ್ ಮಾಡಿರಲಿಲ್ಲ” ಎಂದು ಹಾರಿಕೆಯ ಉತ್ತರ ನೀಡಿದ್ದಾರೆ. ಈ ಹೇಳಿಕೆಯು ರಾಜಕೀಯ ಕ್ಷೇತ್ರದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.





