ಯುಗಾದಿ ಹಬ್ಬದ ಸಂಭ್ರಮದ ನಡುವೆ ರೈತರಿಗೆ ದೊಡ್ಡ ಶಾಕ್ ಎದುರಾಗಿದೆ. ದಾವಣಗೆರೆ ಮಾರುಕಟ್ಟೆಯಲ್ಲಿ ಈರುಳ್ಳಿ ದರ ತೀವ್ರ ಕುಸಿತ ಕಂಡುಬಂದಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಉತ್ತಮ ಬೆಲೆ ನಿರೀಕ್ಷೆಯಲ್ಲಿ ಬೆಳೆದ ಬೆಳೆಗೆ ತಕ್ಕ ಮೌಲ್ಯ ಸಿಗದೆ, ರೈತರಲ್ಲಿ ಆತಂಕ ಹೆಚ್ಚಾಗಿದೆ.
ಮಾರುಕಟ್ಟೆಯಲ್ಲಿ ಈರುಳ್ಳಿ ಪ್ರತಿ ಕಿಲೋಗ್ರಾಂಗೆ ಕೇವಲ 6ರಿಂದ 12 ರೂಪಾಯಿವರೆಗೆ ಮಾತ್ರ ಮಾರಾಟವಾಗುತ್ತಿದೆ. ದೊಡ್ಡ ಗಾತ್ರದ ಉತ್ತಮ ಗುಣಮಟ್ಟದ ಈರುಳ್ಳಿಗೂ 10ರಿಂದ 12 ರೂಪಾಯಿ ದರ ಸಿಗುತ್ತಿದ್ದರೆ, ಸಣ್ಣ ಗಾತ್ರದ ಈರುಳ್ಳಿಗೆ 6ರಿಂದ 8 ರೂಪಾಯಿಗೂ ಮೀರದ ದರವೇ ಲಭ್ಯವಾಗುತ್ತಿದೆ. ಬೆಳೆ ಬೆಳೆದ ವೆಚ್ಚಕ್ಕೂ ತಕ್ಕಂತೆ ಆದಾಯ ದೊರೆಯದ ಕಾರಣ ರೈತರು ಭಾರೀ ನಷ್ಟ ಅನುಭವಿಸುತ್ತಿದ್ದಾರೆ.
ಈರುಳ್ಳಿ ಬೆಳೆ ಬೆಳೆಯಲು ಬೀಜ, ರಾಸಾಯನಿಕ ಗೊಬ್ಬರ, ನೀರಾವರಿ, ಕಾರ್ಮಿಕ ವೆಚ್ಚ ಸೇರಿದಂತೆ ಹಲವು ಖರ್ಚುಗಳು ಆಗುತ್ತವೆ. ಆದರೆ ಇಂದಿನ ದರದಲ್ಲಿ ಮಾರಾಟ ಮಾಡಿದರೆ ಆ ವೆಚ್ಚಗಳನ್ನೇ ವಾಪಸ್ ಪಡೆಯುವುದು ಕಷ್ಟವಾಗುತ್ತಿದೆ. ಕೆಲ ರೈತರು ಮಾರುಕಟ್ಟೆಗೆ ತಂದ ಈರುಳ್ಳಿಯನ್ನು ಮಾರಾಟ ಮಾಡುವುದಕ್ಕಿಂತ ಹೊಲದಲ್ಲೇ ಬಿಟ್ಟುಬಿಡುವುದೇ ಒಳಿತು ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಮಾರುಕಟ್ಟೆಯಲ್ಲಿ ದರ ಕುಸಿತಕ್ಕೆ ಹಲವು ಕಾರಣಗಳು ಕಾಣಿಸಿಕೊಂಡಿವೆ. ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಅನಿಶ್ಚಿತ ಪರಿಸ್ಥಿತಿ ಹಾಗೂ ಇಂಧನ ಮತ್ತು ಅಡುಗೆ ಅನಿಲದ ದರ ಏರಿಕೆ ಹೋಟೆಲ್ ಉದ್ಯಮದ ಮೇಲೆ ಪರಿಣಾಮ ಬೀರಿದೆ. ಇದರಿಂದ ಅನೇಕ ಹೋಟೆಲ್ಗಳು ತಮ್ಮ ವ್ಯವಹಾರವನ್ನು ಕಡಿತಗೊಳಿಸಿದ್ದು, ಈರುಳ್ಳಿಯ ಬೇಡಿಕೆ ಸಹ ಕುಸಿತಗೊಂಡಿದೆ. ಬೇಡಿಕೆ ಕಡಿಮೆಯಾಗುತ್ತಿದ್ದಂತೆ ಮಾರುಕಟ್ಟೆಯಲ್ಲಿ ಖರೀದಿ ಚಟುವಟಿಕೆ ನಿಧಾನಗೊಂಡು ದರಗಳು ಕುಸಿಯುತ್ತಿವೆ.
ಇದರ ಜೊತೆಗೆ, ಆಂಧ್ರಪ್ರದೇಶ ಮತ್ತು ತೆಲಂಗಾಣ ಸೇರಿದಂತೆ ರಾಜ್ಯದ ಕೊಪ್ಪಳ, ಬಳ್ಳಾರಿ, ವಿಜಯಪುರ ಹಾಗೂ ಹೊಸಪೇಟೆ ಭಾಗಗಳಿಂದಲೂ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಮಾರುಕಟ್ಟೆಗೆ ಆಗಮಿಸುತ್ತಿದೆ. ಪೂರೈಕೆ ಹೆಚ್ಚಾದರೆ ದರ ಕಡಿಮೆಯಾಗುವುದು ಸಹಜ. ಇದೇ ಪರಿಸ್ಥಿತಿ ಈಗ ನಿರ್ಮಾಣವಾಗಿದೆ. ನೂರಾರು ಕ್ವಿಂಟಾಲ್ ಈರುಳ್ಳಿ ಒಂದೇ ಸಮಯದಲ್ಲಿ ಮಾರುಕಟ್ಟೆಗೆ ಬರುತ್ತಿರುವುದರಿಂದ ದರ ಇನ್ನಷ್ಟು ಕುಸಿದಿದೆ.
ಇನ್ನೊಂದು ದೊಡ್ಡ ಸಮಸ್ಯೆ ಎಂದರೆ ಪ್ಯಾಕಿಂಗ್ ವೆಚ್ಚ. ಈರುಳ್ಳಿಯನ್ನು ಸಾಗಿಸಲು ಬಳಸುವ ಖಾಲಿ ಚೀಲಗಳ ದರವೇ 18ರಿಂದ 20 ರೂಪಾಯಿಗೆ ಏರಿಕೆಯಾಗಿದೆ. ಅಂದರೆ, ಒಂದು ಚೀಲದ ಬೆಲೆ ಈರುಳ್ಳಿಯ ಬೆಲೆಯಿಗಿಂತಲೂ ಹೆಚ್ಚಾಗಿದೆ. ಇದರಿಂದ ರೈತರು ಈರುಳ್ಳಿಯ ಜೊತೆಗೆ ಚೀಲವನ್ನೇ ಉಚಿತವಾಗಿ ಕೊಡಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ಸ್ಥಳೀಯ ರೈತರು ಇನ್ನೊಂದು ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಹೊರರಾಜ್ಯಗಳಿಂದ, ಮಹಾರಾಷ್ಟ್ರದ ನಾಸಿಕ್ ಭಾಗದಿಂದ ಬರುವ ಈರುಳ್ಳಿಗೆ ಹೆಚ್ಚು ದರ ಸಿಗುತ್ತಿರುವುದು, ಸ್ಥಳೀಯವಾಗಿ ಬೆಳೆದ ಈರುಳ್ಳಿಗೆ ಅರ್ಧ ದರವೂ ಸಿಗದಿರುವುದು ಅವರ ಬೇಸರಕ್ಕೆ ಕಾರಣವಾಗಿದೆ. ಇದರಿಂದ ಸ್ಥಳೀಯ ರೈತರು ತೀವ್ರ ಅನ್ಯಾಯ ಅನುಭವಿಸುತ್ತಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.





