ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ವ್ಯಾಪ್ತಿಯ ಬಸ್ ನಿಲ್ದಾಣಗಳು ಹಾಗೂ ಬಸ್ಗಳಲ್ಲಿ ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ಸಾರಿಗೆ ಸಂಸ್ಥೆ ಇದೀಗ ಕಠಿಣ ಕ್ರಮಕ್ಕೆ ಮುಂದಾಗಿದೆ. ಇನ್ಮುಂದೆ ಬಸ್ಗಳಲ್ಲಿ ಅಥವಾ ಬಸ್ ನಿಲ್ದಾಣದ ಆವರಣದಲ್ಲಿ ತಂಬಾಕು, ಗುಟ್ಕಾ, ಪಾನ್ ಮಸಾಲ, ಪಾನ್ ಬೀಡಾ ಸೇವಿಸಿ ಉಗುಳುವ ಪ್ರಯಾಣಿಕರು ಮಾತ್ರವಲ್ಲದೆ, ಸಂಸ್ಥೆಯ ಚಾಲಕರು ಮತ್ತು ನಿರ್ವಾಹಕರಿಗೂ ದಂಡ ವಿಧಿಸಲು ನಿರ್ಧರಿಸಲಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದರಿಂದ ಬಸ್ ನಿಲ್ದಾಣಗಳು ಹಾಗೂ ಬಸ್ಗಳ ಗೋಡೆ, ಮೂಲೆಗಳು ಕೆಂಪು ಕಲೆಗಳಿಂದ ಹಾಳಾಗುತ್ತಿರುವುದು ಸಾಮಾನ್ಯವಾಗಿದೆ. ಇದರಿಂದ ನಿಲ್ದಾಣಗಳ ಸ್ವಚ್ಛತೆಗೆ ಧಕ್ಕೆಯಾಗುವುದರ ಜೊತೆಗೆ ಸಾರ್ವಜನಿಕ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಹಿನ್ನೆಲೆ NWKRTC ಸ್ವಚ್ಛತಾ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಲು ಮುಂದಾಗಿದೆ.
ಸಿಬ್ಬಂದಿಗೂ ಅನ್ವಯವಾಗಲಿದೆ ಸ್ವಚ್ಛತಾ ನಿಯಮ
ಇಲ್ಲಿಯವರೆಗೆ ಬಸ್ ನಿಲ್ದಾಣ ಹಾಗೂ ಬಸ್ಗಳ ಒಳಗೆ ಉಗುಳುವ ಪ್ರಯಾಣಿಕರು ಮತ್ತು ಸಾರ್ವಜನಿಕರ ವಿರುದ್ಧ ದಂಡದ ಕ್ರಮ ಕೈಗೊಳ್ಳಲಾಗುತ್ತಿತ್ತು. ಆದರೆ, ಕರ್ತವ್ಯದ ಸಮಯದಲ್ಲಿ ಕೆಲವು ಸಿಬ್ಬಂದಿಯೂ ತಂಬಾಕು ಉತ್ಪನ್ನಗಳನ್ನು ಸೇವಿಸಿ ಬಸ್ ಅಥವಾ ನಿಲ್ದಾಣದ ಆವರಣದಲ್ಲಿ ಉಗುಳುತ್ತಾರೆ ಎಂಬ ದೂರುಗಳು ಕೇಳಿಬಂದ ಹಿನ್ನೆಲೆ ಇದೀಗ ನಿಯಮವನ್ನು ಸಿಬ್ಬಂದಿಗೂ ಅನ್ವಯಿಸಲು ನಿರ್ಧರಿಸಲಾಗಿದೆ.
NWKRTC ರೂಪಿಸಿರುವ ಕರಡು ಅಧಿಸೂಚನೆಯ ಪ್ರಕಾರ, ಕರ್ತವ್ಯದಲ್ಲಿರುವಾಗ ಅಥವಾ ಬಸ್ ನಿಲ್ದಾಣದ ಆವರಣದಲ್ಲಿ ತಂಬಾಕು ಅಥವಾ ಪಾನ್ ಬೀಡಾ ಜಗಿದು ಉಗುಳುವ ಚಾಲಕರು ಮತ್ತು ನಿರ್ವಾಹಕರಿಗೆ ಮೊದಲ ಬಾರಿಗೆ ₹200 ದಂಡ ವಿಧಿಸಲಾಗುತ್ತದೆ. ಈ ಮೂಲಕ ಸಂಸ್ಥೆಯ ಸಿಬ್ಬಂದಿಯೂ ಸಾರ್ವಜನಿಕರಿಗೆ ಮಾದರಿಯಾಗಬೇಕು ಎಂಬ ಸಂದೇಶವನ್ನು ಸಾರಿಗೆ ಸಂಸ್ಥೆ ನೀಡಿದೆ.
ಪ್ರಯಾಣಿಕರಿಗೆ ₹100 ದಂಡ
ಬಸ್ ನಿಲ್ದಾಣದ ಆವರಣದಲ್ಲಿ ಅಥವಾ ಬಸ್ನೊಳಗೆ ಉಗುಳುವ ಪ್ರಯಾಣಿಕರು ಹಾಗೂ ಸಾರ್ವಜನಿಕರಿಗೆ ₹100 ದಂಡ ವಿಧಿಸುವ ನಿಯಮ ಮುಂದುವರಿಯಲಿದೆ. ಸ್ವಚ್ಛತಾ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಯಾವುದೇ ರೀತಿಯ ವಿನಾಯಿತಿ ನೀಡದಿರಲು ಸಂಸ್ಥೆ ನಿರ್ಧರಿಸಿದೆ.
ಇದೇ ತಪ್ಪನ್ನು ಸಿಬ್ಬಂದಿ ಮರುಕಳಿಸಿದರೆ ಹೆಚ್ಚಿನ ಮೊತ್ತದ ದಂಡ ವಿಧಿಸುವುದರ ಜೊತೆಗೆ ಇಲಾಖಾ ಮಟ್ಟದಲ್ಲಿ ಶಿಸ್ತುಕ್ರಮ ಕೈಗೊಳ್ಳುವ ಬಗ್ಗೆಯೂ ಆಡಳಿತ ಮಂಡಳಿ ಚಿಂತನೆ ನಡೆಸಿದೆ. ಮರು-ಉಲ್ಲಂಘನೆಗೆ ಸಂಬಂಧಿಸಿದ ಹೆಚ್ಚುವರಿ ದಂಡ ಹಾಗೂ ಶಿಸ್ತುಕ್ರಮಗಳ ಕುರಿತು ಅಂತಿಮ ಮಾರ್ಗಸೂಚಿ ಪ್ರಕಟಿಸುವ ನಿರೀಕ್ಷೆಯಿದೆ.
ಅಧಿಕಾರಿಗಳಿಗೆ ದಂಡ ವಸೂಲಿ ಹೊಣೆ
ಹೊಸ ನಿಯಮವನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಬಸ್ ನಿಲ್ದಾಣದ ನಿಯಂತ್ರಕರು, ಭದ್ರತಾ ಸಿಬ್ಬಂದಿ ಹಾಗೂ ಹಿರಿಯ ಅಧಿಕಾರಿಗಳಿಗೆ ದಂಡ ವಸೂಲಿ ಮಾಡುವ ಅಧಿಕಾರ ನೀಡಲು ಸಂಸ್ಥೆ ಮುಂದಾಗಿದೆ.





