ಬೆಂಗಳೂರು: ಸ್ಯಾಂಡಲ್ವುಡ್ ನಟಿ ರನ್ಯಾರಾವ್ (Ranya Rao) ವಿರುದ್ಧ ದಾಖಲಾಗಿರುವ ಚಿನ್ನ ಕಳ್ಳಸಾಗಣೆ ಪ್ರಕರಣ (Gold Smuggling Case) ಇದೀಗ ರಾಜ್ಯ ಪೊಲೀಸ್ ಇಲಾಖೆಯ ಉನ್ನತಾಧಿಕಾರಿಯವರೆಗೂ ತಲುಪಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ರಾಮಚಂದ್ರರಾವ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಂಬಂಧಪಟ್ಟ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.
ಈಗಾಗಲೇ ರಾಸಲೀಲೆ ಪ್ರಕರಣದ ಮೂಲಕ ಭಾರೀ ವಿವಾದಕ್ಕೆ ಗುರಿಯಾಗಿರುವ ರಾಮಚಂದ್ರರಾವ್ ಅವರಿಗೆ, ಇದೀಗ ಮಗಳು ರನ್ಯಾರಾವ್ ಸಂಬಂಧಿಸಿದ ಚಿನ್ನ ಕಳ್ಳಸಾಗಣೆ ಪ್ರಕರಣ ಮತ್ತೊಂದು ದೊಡ್ಡ ಸಂಕಷ್ಟ ತಂದೊಡ್ಡಿದೆ. ಈ ಪ್ರಕರಣದಲ್ಲಿ ಸರ್ಕಾರಿ ಸೌಲಭ್ಯಗಳು ಹಾಗೂ ಪ್ರೋಟೋಕಾಲ್ ದುರ್ಬಳಕೆ ಆಗಿದೆಯೇ ಎಂಬ ಅನುಮಾನ ವ್ಯಕ್ತವಾಗಿದ್ದು, ಅದನ್ನು ಸ್ಪಷ್ಟಪಡಿಸುವ ಉದ್ದೇಶದಿಂದ ಅಧಿಕಾರಿಗಳು ವಿಚಾರಣೆಗೆ ಕರೆಯಲಾಗಿದೆ.
ಈ ಹಿಂದೆ ರನ್ಯಾರಾವ್ ವಿರುದ್ಧ ದಾಖಲಾಗಿದ್ದ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಸರ್ಕಾರಿ ವಾಹನ ದುರ್ಬಳಕೆ ಮಾಡಿರುವ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ರಾಮಚಂದ್ರರಾವ್ ವಿರುದ್ಧ ಚಾರ್ಜ್ ಮೆಮೋ ಕೂಡ ನೀಡಲಾಗಿತ್ತು. ಡಿಜಿಪಿಯಾಗಿದ್ದ ಅಧಿಕಾರಿಯ ಮಗಳು ಸರ್ಕಾರಿ ವಾಹನ ಬಳಸಿದ್ದಾರೆಯೇ? ಅದಕ್ಕೆ ಅಧಿಕೃತ ಅನುಮತಿ ಇದೆಯೇ? ಎಂಬ ಪ್ರಶ್ನೆಗಳು ತನಿಖಾಧಿಕಾರಿಗಳ ಗಮನ ಸೆಳೆದಿವೆ.
ಇದೇ ವೇಳೆ, ಈ ಪ್ರಕರಣದ ತನಿಖೆ ನಡೆಸುತ್ತಿರುವ ಡೈರೆಕ್ಟರೇಟ್ ಆಫ್ ರೆವನು ಇಂಟೆಲಿಜೆನ್ಸ್ (DRI) ಅಧಿಕಾರಿಗಳು ಈಗಾಗಲೇ ರಾಮಚಂದ್ರರಾವ್ ಅವರನ್ನು ವಿಚಾರಣೆ ನಡೆಸಿದ್ದಾರೆ. ಈ ವಿಚಾರಣೆ ವೇಳೆ ರನ್ಯಾರಾವ್ ಮತ್ತು ರಾಮಚಂದ್ರರಾವ್ ಅವರ ನಡುವಿನ ಸಂಬಂಧ, ಚಿನ್ನ ಸಾಗಾಟದ ಸಂದರ್ಭದಲ್ಲಿ ಯಾವುದೇ ರೀತಿಯ ಸಹಾಯ ದೊರೆತಿದೆಯೇ, ಪ್ರೋಟೋಕಾಲ್ ಸೌಲಭ್ಯ ದುರ್ಬಳಕೆ ಮಾಡಿಕೊಂಡಿದ್ದಾರೆಯೇ ಎಂಬ ಅಂಶಗಳ ಬಗ್ಗೆ ಪ್ರಶ್ನಿಸಲಾಗಿದೆ ಎಂದು ತಿಳಿದುಬಂದಿದೆ.
ರನ್ಯಾರಾವ್ ಅವರು ಕಳೆದ ಎರಡು ತಿಂಗಳ ಅವಧಿಯಲ್ಲಿ 20ಕ್ಕೂ ಹೆಚ್ಚು ಬಾರಿ ದುಬೈಗೆ ಪ್ರಯಾಣ ಮಾಡಿರುವ ವಿಷಯ ಡಿಆರ್ಐ ಅಧಿಕಾರಿಗಳ ಗಮನ ಸೆಳೆದಿದೆ. ಈ ಪ್ರಯಾಣಗಳು ಚಿನ್ನ ಕಳ್ಳಸಾಗಣೆ ಜಾಲದ ಭಾಗವೇ? ಈ ಸಂದರ್ಭದಲ್ಲಿ ಯಾವುದೇ ಅಧಿಕಾರಿಗಳ ನೆರವು ದೊರೆತಿದೆಯೇ? ಎಂಬುದನ್ನು ಪತ್ತೆ ಹಚ್ಚಲು ತನಿಖೆ ಮುಂದುವರಿದಿದೆ.
ಇನ್ನೊಂದೆಡೆ, ರಾಮಚಂದ್ರರಾವ್ ವಿರುದ್ಧ ದಾಖಲಾಗಿರುವ ರಾಸಲೀಲೆ ಪ್ರಕರಣವನ್ನು ಕೂಡ ಗಂಭೀರವಾಗಿ ಪರಿಗಣಿಸಲಾಗಿದ್ದು, ಈ ಕುರಿತು ಪೊಲೀಸ್ ಮಹಾನಿರ್ದೇಶಕ ಸಲೀಂ ಅಹ್ಮದ್ ಅವರು ಇಲಾಖಾ ತನಿಖೆಗೆ ಆದೇಶಿಸಿದ್ದಾರೆ. ಐಜಿಪಿಯಾಗಿದ್ದ ಅವಧಿಯಲ್ಲಿ ಕಚೇರಿಯೊಳಗೆ ಸಮವಸ್ತ್ರದಲ್ಲಿಯೇ ಅನೈತಿಕ ವರ್ತನೆ ನಡೆಸಿದ್ದಾರೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಈ ಎಲ್ಲಾ ಬೆಳವಣಿಗೆಗಳು ರಾಜ್ಯ ಪೊಲೀಸ್ ಇಲಾಖೆಯ ಪ್ರತಿಷ್ಠೆಗೆ ಧಕ್ಕೆಯುಂಟು ಮಾಡಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿವೆ. ಉನ್ನತ ಹುದ್ದೆಯಲ್ಲಿರುವ ಅಧಿಕಾರಿಯೊಬ್ಬರು ಒಂದಾದ ಮೇಲೆ ಒಂದಾಗಿ ವಿವಾದಗಳಲ್ಲಿ ಸಿಲುಕಿರುವುದು ಸರ್ಕಾರಕ್ಕೂ ಮುಜುಗರ ಉಂಟುಮಾಡಿದೆ.





