ಬೆಂಗಳೂರು (ಜುಲೈ 24): ರಾಜ್ಯದ ಜನತೆ ಕೆಲ ತಿಂಗಳ ಹಿಂದಷ್ಟೇ ಹಾಲಿನ ದರ ಏರಿಕೆಯ ಹೊರೆ ಅನುಭವಿಸಿದ್ದರೆ, ಇದೀಗ ಮತ್ತೊಮ್ಮೆ ಹಾಲಿನ ಉತ್ಪನ್ನಗಳ ಬೆಲೆ ಏರಿಕೆಯ ಶಾಕ್ ಎದುರಾಗಿದೆ. ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಅಂಗಸಂಸ್ಥೆಯಾದ ಬೆಂಗಳೂರು ಹಾಲು ಒಕ್ಕೂಟ (ಬಮೂಲ್) ಪ್ರಸಿದ್ಧ ನಂದಿನಿ ಬ್ರ್ಯಾಂಡ್ನ ತುಪ್ಪ ಮತ್ತು ಬೆಣ್ಣೆಯ ದರವನ್ನು ಪರಿಷ್ಕರಿಸಿದ್ದು, ಹೊಸ ದರಗಳು ಇಂದಿನಿಂದ ಜುಲೈ 24ರಿಂದ ಜಾರಿಗೆ ಬರಲಿವೆ.
ಹೊಸ ದರದ ಪ್ರಕಾರ, ನಂದಿನಿ ತುಪ್ಪದ ಪ್ರತಿ ಕೆಜಿಗೆ 22 ರೂ , ಅಂತೆಯೇ ಅರ್ಧ ಕೆಜಿ ಬೆಣ್ಣೆ ಬೆಲೆ 15 ರೂಪಾಯಿ ಏರಿಕೆ ಮಾಡಲಾಗಿದೆ. ಇದರಿಂದಾಗಿ ಇದುವರೆಗೆ ₹700 ಇದ್ದ ತುಪ್ಪದ ದರ ₹715ಕ್ಕೆ ಏರಿಕೆಯಾಗಿದ್ದು, ₹710 ಇದ್ದ ಬೆಣ್ಣೆಯ ಬೆಲೆ ₹735ಕ್ಕೆ ತಲುಪಿದೆ. ಈ ದರ ಪರಿಷ್ಕರಣೆ ಬೆಂಗಳೂರು ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ತಕ್ಷಣದಿಂದಲೇ ಜಾರಿಗೆ ಬರಲಿದ್ದು, ಕೆಎಂಎಫ್ ಮಳಿಗೆಗಳಲ್ಲಿ ಪರಿಷ್ಕೃತ ದರದಲ್ಲೇ ಉತ್ಪನ್ನಗಳು ಲಭ್ಯವಾಗಲಿವೆ.
ಬೆಲೆ ಏರಿಕೆಗೆ ಕಾರಣವಾಗಿ ಉತ್ಪಾದನಾ ವೆಚ್ಚ, ಹಾಲಿನ ಸಂಸ್ಕರಣಾ ವೆಚ್ಚ ಹಾಗೂ ಸಾಗಾಣಿಕೆ ವೆಚ್ಚದಲ್ಲಿ ಗಣನೀಯ ಹೆಚ್ಚಳವಾಗಿರುವುದನ್ನು ಬಮೂಲ್ ಉಲ್ಲೇಖಿಸಿದೆ. ಇತ್ತೀಚಿನ ದಿನಗಳಲ್ಲಿ ಕಚ್ಚಾ ವಸ್ತುಗಳ ಬೆಲೆ ಏರಿಕೆ ಹಾಗೂ ಇಂಧನ ವೆಚ್ಚ ಹೆಚ್ಚಳದಿಂದಾಗಿ ಉತ್ಪಾದನಾ ವೆಚ್ಚ ನಿರಂತರವಾಗಿ ಏರುತ್ತಿದ್ದು, ಅದರ ಪರಿಣಾಮವಾಗಿ ದರ ಪರಿಷ್ಕರಣೆ ಅನಿವಾರ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬೆಲೆ ಏರಿಕೆಯ ಪರಿಣಾಮ ಕೇವಲ ಗೃಹ ಬಳಕೆದಾರರಿಗಷ್ಟೇ ಸೀಮಿತವಾಗುವುದಿಲ್ಲ. ಹೋಟೆಲ್, ಬೇಕರಿ, ಸಿಹಿತಿಂಡಿ ತಯಾರಿಕಾ ಘಟಕಗಳು ಸೇರಿದಂತೆ ತುಪ್ಪ ಮತ್ತು ಬೆಣ್ಣೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುವ ಉದ್ಯಮಗಳ ಮೇಲೂ ಇದರ ನೇರ ಪರಿಣಾಮ ಬೀಳಲಿದೆ. ಉತ್ಪಾದನಾ ವೆಚ್ಚ ಹೆಚ್ಚಾಗುವುದರಿಂದ ಆಹಾರ ಪದಾರ್ಥಗಳ ಬೆಲೆಯೂ ಏರಿಕೆಯಾಗುವ ಸಾಧ್ಯತೆ ಇದೆ. ಅಂತಿಮವಾಗಿ ಇದರ ಹೊರೆ ಗ್ರಾಹಕರ ಮೇಲೇ ಬೀಳುವ ಸಾಧ್ಯತೆ ಹೆಚ್ಚಿದೆ.
ಈಗಾಗಲೇ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಮಧ್ಯಮ ವರ್ಗದ ಕುಟುಂಬಗಳಿಗೆ ಈ ಬೆಳವಣಿಗೆ ಮತ್ತೊಂದು ಆರ್ಥಿಕ ಹೊರೆ ತಂದಿದೆ ಎಂಬುದರಲ್ಲಿ ಬೇರೆ ಮಾತಿಲ್ಲ. ಮಾಸಿಕ ಅಡುಗೆ ವೆಚ್ಚ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ. ಹಾಲು, ಮೊಸರು ಸೇರಿದಂತೆ ಹಾಲಿನ ಉತ್ಪನ್ನಗಳ ದರ ಏರಿಕೆಯ ಬಳಿಕ ಈಗ ತುಪ್ಪ ಮತ್ತು ಬೆಣ್ಣೆಯ ಬೆಲೆಯೂ ಹೆಚ್ಚಿರುವುದು ಗ್ರಾಹಕರ ಚಿಂತೆಯನ್ನು ಮತ್ತಷ್ಟು ಹೆಚ್ಚಿಸಿದೆ.





