ಮೈಸೂರು: ಅಮಾವಾಸ್ಯೆ ಹಿನ್ನೆಲೆ ಮೈಸೂರಿನ ನಂಜನಗೂಡು ತಾಲೂಕಿನ ಗೋಳೂರು ಗ್ರಾಮದಲ್ಲಿ ನಡೆದಿರುವ ವಿಚಿತ್ರ ಘಟನೆಯೊಂದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಗ್ರಾಮದ ನಡುರಸ್ತೆಯಲ್ಲಿ ಮಾನವನ ಬುರುಡೆ, ಮೂಳೆಗಳು, ಅರಿಶಿನ, ಕುಂಕುಮ ಹಾಗೂ ನಿಂಬೆಹಣ್ಣುಗಳು ಪತ್ತೆಯಾಗಿದ್ದು, ಇದು ವಾಮಾಚಾರದ ಕೃತ್ಯವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಬೆಳಗ್ಗೆ ಎಂದಿನಂತೆ ಗ್ರಾಮಸ್ಥರು ತಮ್ಮ ಕೆಲಸಗಳಿಗೆ ಹೊರಬಂದಾಗ ರಸ್ತೆಯ ಮಧ್ಯದಲ್ಲೇ ಬಿದ್ದಿದ್ದ ಬುರುಡೆ ಹಾಗೂ ಮೂಳೆಗಳನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಜನರು ಓಡಾಡುವ ರಸ್ತೆಯಲ್ಲೇ ಈ ವಸ್ತುಗಳು ಪತ್ತೆಯಾಗಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಅಮಾವಾಸ್ಯೆ ಹಿನ್ನೆಲೆ ವಾಮಾಚಾರದ ಶಂಕೆ
ನಿನ್ನೆ ಅಮಾವಾಸ್ಯೆ ಇದ್ದ ಹಿನ್ನೆಲೆ ಕೆಲವರು ರಾತ್ರಿ ವೇಳೆ ಈ ಕೃತ್ಯ ನಡೆಸಿರಬಹುದು ಎಂದು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಸಾಮಾನ್ಯವಾಗಿ ಇಂತಹ ಆಚರಣೆಗಳನ್ನು ಜನವಸತಿ ಇಲ್ಲದ ಪ್ರದೇಶಗಳಲ್ಲಿ ಮಾಡಲಾಗುತ್ತದೆ. ಈ ಬಾರಿ ಗ್ರಾಮದ ನಡುರಸ್ತೆಯಲ್ಲೇ ಇಂತಹ ವಸ್ತುಗಳನ್ನು ಇಟ್ಟು ಹೋಗಿರುವುದು ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ.
ಸ್ಮಶಾನದಿಂದ ತಂದಿದ್ದಾರಾ ಬುರುಡೆ?
ಪತ್ತೆಯಾದ ಮಾನವನ ಬುರುಡೆ ಮತ್ತು ಮೂಳೆಗಳು ಸ್ಮಶಾನದಿಂದ ತರಲಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಬುರುಡೆಯ ಸುತ್ತ ಅರಿಶಿನ, ಕುಂಕುಮ ಹಾಗೂ ನಿಂಬೆಹಣ್ಣುಗಳನ್ನು ಇಟ್ಟಿರುವುದು ಕಂಡುಬಂದಿದೆ. ಇದರಿಂದ ಇದು ಉದ್ದೇಶಪೂರ್ವಕವಾಗಿ ಮಾಡಿರುವ ಕೃತ್ಯವಾಗಿರಬಹುದು ಎಂದು ಗ್ರಾಮಸ್ಥರು ಹೇಳಿದ್ದಾರೆ.
ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ
ಘಟನೆ ಬೆಳಕಿಗೆ ಬಂದ ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡುವಂತೆ ಒತ್ತಾಯಿಸಿದ್ದಾರೆ. ಇಂತಹ ಘಟನೆಗಳು ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಸುವುದರಿಂದ, ಕಿಡಿಗೇಡಿಗಳನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಮಾನವನ ಬುರುಡೆ ಹಾಗೂ ಮೂಳೆಗಳು ಎಲ್ಲಿಂದ ಬಂದವು? ಇದನ್ನು ಯಾರು ತಂದಿಟ್ಟರು? ಇದರ ಹಿಂದೆ ನಿಜವಾಗಿಯೂ ವಾಮಾಚಾರದ ಉದ್ದೇಶವಿದೆಯೇ ಅಥವಾ ಜನರಲ್ಲಿ ಭಯ ಹುಟ್ಟಿಸಲು ಮಾಡಿದ ಕೃತ್ಯವೇ ಎಂಬುದು ತನಿಖೆಯಿಂದ ಮಾತ್ರ ತಿಳಿದುಬರಬೇಕಿದೆ.





