ಮಂಡ್ಯ: ಇನ್ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದ ಮಹಿಳೆಯ ಹತ್ಯೆ ಮಾಡಿ ಶವವನ್ನು ತನ್ನ ಜಮೀನಿನಲ್ಲಿ ಮುಚ್ಚಿಟ್ಟು ಆರೋಪಿ ಪರಾರಿಯಾಗಿರುವ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಕರೋಟಿ ಗ್ರಾಮದಲ್ಲಿ ಘಟನೆ ನಡೆದಿದೆ. ಹಾಸನ ಜಿಲ್ಲೆಯ ಹೊಸಕೊಪ್ಪಲು ಗ್ರಾಮದ ಪ್ರೀತಿ (35) ಕೊಲೆಯಾದ ಗೃಹಿಣಿಯಾಗಿದ್ದು, ಕರೋಟಿ ಗ್ರಾಮದ ಪುನೀತ್ (28) ಕೊಲೆ ಆರೋಪಿಯಾಗಿದ್ದಾನೆ. ಈ ಪ್ರಕರಣ ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಘಟನೆಯ ಹಿನ್ನೆಲೆ
ಪುನೀತ್ ಮತ್ತು ಪ್ರೀತಿ ಇನ್ಸ್ಟಾಗ್ರಾಮ್ನಲ್ಲಿ ಕೇವಲ ಹತ್ತು ದಿನಗಳ ಹಿಂದೆ ಪರಿಚಯವಾಗಿದ್ದರು. ಪ್ರೀತಿಗೆ ಗಂಡ ಮತ್ತು ಮಕ್ಕಳಿದ್ದರೂ, ಆಕೆ ಪುನೀತ್ನೊಂದಿಗೆ ಪ್ರೇಮ ಸಂಬಂಧ ಬೆಳೆಸಿಕೊಂಡಿದ್ದಳು. ಇಬ್ಬರೂ ಒಟ್ಟಿಗೆ ಸಮಯ ಕಳೆಯುತ್ತಿದ್ದರು. ಕಳೆದ ಭಾನುವಾರ, ಇವರು ಕಾರಿನಲ್ಲಿ ಮೈಸೂರು ಮತ್ತು ಮಂಡ್ಯದ ಕೆ.ಆರ್.ಎಸ್. ಸೇರಿದಂತೆ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿ ಆನಂದಿಸಿದ್ದರು. ಆದರೆ, ಪ್ರೀತಿಯ ಫೋನ್ಗೆ ಬಂದ ಕರೆಯೊಂದು ಇಬ್ಬರ ನಡುವಿನ ಸಂಬಂಧವನ್ನು ತಲೆಕೆಳಗಾಗಿಸಿತ್ತು.
ಭಾನುವಾರದಂದು ಮೈಸೂರಿನಿಂದ ಕೆ.ಆರ್.ಪೇಟೆಯ ಕತ್ತರಘಟ್ಟ ಅರಣ್ಯ ಪ್ರದೇಶಕ್ಕೆ ತೆರಳಿದಾಗ ಇವರಿಬ್ಬರ ನಡುವೆ ಜಗಳ ಉಂಟಾಯಿತು. ಈ ವಾಗ್ವಾದದ ವೇಳೆ ಪುನೀತ್, ಪ್ರೀತಿಯನ್ನು ಕೊಲೆಗೈದಿದ್ದಾನೆ. ಬಳಿಕ, ಆಕೆಯ ಮೈಮೇಲಿದ್ದ ಚಿನ್ನಾಭರಣಗಳನ್ನು ದೋಚಿದ್ದಾನೆ. ಕೊಲೆಯ ನಂತರ, ಶವವನ್ನು ಕರೋಟಿ ಗ್ರಾಮದ ತನ್ನ ಜಮೀನಿನ ಜೋಳದ ಕಡ್ಡಿಗಳ ಮಧ್ಯೆ ಮುಚ್ಚಿಟ್ಟಿದ್ದಾನೆ. ಚಿನ್ನಾಭರಣಗಳಿಗಾಗಿಯೇ ಈ ಕೊಲೆ ನಡೆದಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಪ್ರೀತಿಯ ಗಂಡ ಸುಂದರೇಶ್, ತನ್ನ ಪತ್ನಿ ನಾಪತ್ತೆಯಾಗಿರುವ ಬಗ್ಗೆ ಹಾಸನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಪ್ರೀತಿಯ ಮೊಬೈಲ್ ಸಂಖ್ಯೆಯ ಆಧಾರದ ಮೇಲೆ ಆರೋಪಿ ಪುನೀತ್ನನ್ನು ಪತ್ತೆಹಚ್ಚಿದರು. ಕಿಕ್ಕೇರಿ ಮತ್ತು ಹಾಸನ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ಚುರುಕುಗೊಂಡಿದೆ.