ಮದ್ದೂರು: ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯ ಸಂದರ್ಭದಲ್ಲಿ ಕಲ್ಲು ತೂರಾಟದ ಘಟನೆಯಿಂದ ಮದ್ದೂರು ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ. ಚನ್ನೇಗೌಡ ಬಡಾವಣೆಯ ಹಿಂದೂ ಮಹಿಳೆಯರು ಪೊಲೀಸರ ಎದುರು ತಮ್ಮ ಆತಂಕವನ್ನು ತೋಡಿಕೊಂಡಿದ್ದಾರೆ. “ನಮ್ಮ ಏರಿಯಾ ಮಿನಿ ಪಾಕಿಸ್ತಾನದಂತೆ ಆಗಿದೆ. ಮಸೀದಿ ಮುಂಭಾಗದಲ್ಲಿ ಓಡಾಡಲು ಬಿಡುವುದಿಲ್ಲ. ರಾತ್ರಿ ವೇಳೆ ಯುವಕರು ಮಚ್ಚು, ಲಾಂಗುಗಳೊಂದಿಗೆ ಓಡಾಡುತ್ತಾರೆ. ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ನಮ್ಮವರು ಸತ್ತರೂ ಶವದ ಮುಂದೆ ತಮಟೆ ಬಾರಿಸಲು ಬಿಡುವುದಿಲ್ಲ” ಎಂದು ಮಹಿಳೆಯರು ದೂರಿದ್ದಾರೆ.
ಸೋಮವಾರ ನಡೆದ ಪ್ರತಿಭಟನಾ ಮೆರವಣಿಗೆ ಮತ್ತು ಲಾಠಿ ಪ್ರಹಾರದಿಂದ ಪರಿಸ್ಥಿತಿ ಇನ್ನಷ್ಟು ಆತಂಕವನ್ನುಂಟು ಮಾಡಿತ್ತು. ಸೋಮವಾರ ಸಂಜೆಯ ವೇಳೆಗೆ ವಾತಾವರಣ ತಿಳಿಗೊಂಡಂತೆ ಕಂಡರೂ, ಸ್ಥಳೀಯರು ಇದನ್ನು “ಬೂದಿ ಮುಚ್ಚಿದ ಕೆಂಡ” ಎಂದು ವಿವರಿಸಿದ್ದಾರೆ. ಈ ಘಟನೆಯಿಂದ ಜನತೆಯಲ್ಲಿ ಭಯ ಮತ್ತು ಅಸಮಾಧಾನ ಮನೆ ಮಾಡಿದೆ.
ಮದ್ದೂರು ಶಾಸಕ ಕೆ.ಎಂ. ಉದಯ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. “ಗಣೇಶ ಮೆರವಣಿಗೆಯ ಸಂದರ್ಭದಲ್ಲಿ ನಡೆದ ಈ ಅಹಿತಕರ ಘಟನೆಯಿಂದ ಮನಸ್ಸಿಗೆ ತುಂಬಾ ನೋವಾಗಿದೆ. ಯಾರೇ ತಪ್ಪಿತಸ್ಥರಾದರೂ, ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ” ಎಂದು ಅವರು ಹೇಳಿದ್ದಾರೆ. ಜನತೆಗೆ ಆತಂಕಕ್ಕೆ ಒಳಗಾಗದಂತೆ ಮನವಿ ಮಾಡಿರುವ ಅವರು, “ನಮ್ಮ ತಾಲ್ಲೂಕಿನ ಜನತೆ ಶಾಂತಿ ಪ್ರಿಯರು. ಈ ಘಟನೆಯನ್ನು ಸರಿಪಡಿಸಿಕೊಳ್ಳೋಣ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಿ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇವೆ. ಎಲ್ಲರೂ ಶಾಂತಿ ಕಾಪಾಡಿ” ಎಂದು ಕೈಮುಗಿದು ಕೇಳಿಕೊಂಡಿದ್ದಾರೆ.





