ಬೆಂಗಳೂರು: ರಾಜ್ಯದ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಬರುವ ಎಲ್ಲ ಅನುಮೋದಿತ ಚಾರಣ ಪಥಗಳಲ್ಲಿ ಇನ್ನು ಮುಂದೆ ಪ್ರಕೃತಿ ಮಾರ್ಗದರ್ಶಕ (ನೇಚರ್ ಗೈಡ್) ಇಲ್ಲದೆ ಯಾರಿಗೂ ಚಾರಣಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಸ್ಪಷ್ಟಪಡಿಸಿದರು.
ಚಾರಣಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿರುವ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್.ಓ.ಪಿ.) ಅನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಹೊಸ ನಿಯಮಗಳ ಬಗ್ಗೆ ವಿವರಿಸಿದರು.
ಮುಖ್ಯ ನಿಯಮಗಳು:
- ಪ್ರತಿ 10 ಚಾರಣಿಗರಿಗೆ ಒಬ್ಬ ಸ್ಥಳೀಯ ನೇಚರ್ ಗೈಡ್ ಕಡ್ಡಾಯ
- ಚಾರಣಿಗರ ಮೊಬೈಲ್ಗೆ ಟ್ರ್ಯಾಕಿಂಗ್ ಆಪ್ ಅಳವಡಿಕೆ ಕಡ್ಡಾಯ
- ಗೈಡ್ಗಳಿಗೆ ಜಿಪಿಎಸ್ ಅಳವಡಿಸಿದ ವಾಕಿ ಟಾಕಿ ನೀಡಲಾಗುವುದು
- ಒಂದು ಬಸರಿಗೆ ಗರಿಷ್ಠ 150 ಜನರಿಗೆ ಮಾತ್ರ ಅನುಮತಿ
- ಚಾರಣಕ್ಕೆ ಆನ್ಲೈನ್ ನೋಂದಣಿ ಕಡ್ಡಾಯ
ಒಬ್ಬ ವ್ಯಕ್ತಿ ಮಾತ್ರ ನೋಂದಾಯಿಸಿದ್ದರೂ ಗೈಡ್ ಸೌಲಭ್ಯವನ್ನು ಒದಗಿಸಲಾಗುವುದು. ಗೈಡ್ ಇಲ್ಲದೆ ಯಾರಿಗೂ ಚಾರಣಕ್ಕೆ ಅನುಮತಿ ನೀಡಲಾಗುವುದಿಲ್ಲ ಎಂದು ಸಚಿವರು ಒತ್ತಿ ಹೇಳಿದರು.
ಇತ್ತೀಚೆಗೆ ಕೊಡಗಿನ ತಡಿಯಾಂಡಮೋಳ್ ಬೆಟ್ಟದಲ್ಲಿ ಕೇರಳದ ಮಹಿಳೆ ನಾಪತ್ತೆಯಾಗಿ 3 ದಿನಗಳ ಕಾಲ ಕಾಡಿನಲ್ಲಿ ಕಳೆಯುವಂತಾದ ಘಟನೆ ಹಾಗೂ ಚಿಕ್ಕಮಗಳೂರಿನ ಮಾಣಿಕ್ಯಧಾರಾ ಬಳಿ ಬಾಲಕಿ ನಾಪತ್ತೆಯಾಗಿ ಶವವಾಗಿ ಪತ್ತೆಯಾದ ಘಟನೆಗಳ ಹಿನ್ನೆಲೆಯಲ್ಲಿ ಈ ಎಸ್.ಓ.ಪಿ. ರೂಪಿಸಲಾಗಿದೆ ಎಂದು ಖಂಡ್ರೆ ತಿಳಿಸಿದರು.
ಇತರ ಮುಖ್ಯ ನಿಯಮಗಳು:
- ಅಪ್ರಾಪ್ತ ವಯಸ್ಕರಿಗೆ ಪೋಷಕರ ಅನುಮತಿ ಪತ್ರ ಕಡ್ಡಾಯ.
- ಹಿರಿಯ ನಾಗರಿಕರು ತಮ್ಮ ದೈಹಿಕ ಸಾಮರ್ಥ್ಯದ ಪ್ರಮಾಣಪತ್ರ ಸಲ್ಲಿಸಬೇಕು.
- ಚಾರಣಿಗರು ಹರಿತವಾದ ವಸ್ತುಗಳು, ಆಯುಧಗಳು ಹಾಗೂ ಕ್ಯಾಂಪ್ ಫೈರ್ ಮಾಡುವುದನ್ನು ನಿಷೇಧಿಸಲಾಗಿದೆ.
- ಏಕ ಬಳಕೆಯ ಪ್ಲಾಸ್ಟಿಕ್, ಕ್ಯಾರಿ ಬ್ಯಾಗ್ಗಳು ಮತ್ತು ಫ್ಲ್ಯಾಶ್ ಬಳಸಿ ಫೋಟೋ ತೆಗೆಯುವುದು ನಿಷೇಧ.
- ತ್ಯಾಜ್ಯವನ್ನು ಚಾರಣಿಗರು ತಂದು ಬೇಸ್ ಕ್ಯಾಂಪ್ನಲ್ಲೇ ವಿಲೇವಾರಿ ಮಾಡಬೇಕು.
- ಗೈಡ್ಗಳು ಪ್ರತಿ ಅರ್ಧ ಗಂಟೆಗೊಮ್ಮೆ ವಾಕಿ ಟಾಕಿ ಮೂಲಕ ಬೇಸ್ ಕ್ಯಾಂಪ್ನೊಂದಿಗೆ ಸಂವಹನ ನಡೆಸಬೇಕು.
ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಎಸ್.ಓ.ಪಿ. ಸಿದ್ಧಪಡಿಸಿದ ಅರಣ್ಯ ಇಲಾಖೆ ಅಧಿಕಾರಿಗಳನ್ನು ಅಭಿನಂದಿಸಿದರು. ಎಲ್ಲ ಚಾರಣ ಪಥಗಳನ್ನು https://aranyavihaara.karnataka.gov.in/ ವೆಬ್ಸೈಟ್ನಲ್ಲಿ ಸೇರ್ಪಡೆಗೊಳಿಸಿ ಮುಂಗಡ ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆಯನ್ನು ಜಾರಿಗೊಳಿಸುವಂತೆ ಸೂಚಿಸಿದ್ದಾರೆ.





