ಸುವರ್ಣಸೌಧ, ಡಿಸೆಂಬರ್ 11: ಆರ್ಟಿಒ ಕಚೇರಿಗಳಲ್ಲಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ಮಧ್ಯವರ್ತಿಗಳ (ದಲ್ಲಾಳಿಗಳ) ಹಾವಳಿಗೆ ಯಾವುದೇ ರೀತಿಯಲ್ಲಿ ಅವಕಾಶ ನೀಡಿದರೆ, ಆಯಾ ಕಚೇರಿಯ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಕಠಿಣ ಶಿಸ್ತುಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಗುರುವಾರ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಎಚ್ಚರಿಕೆ ನೀಡಿದ್ದಾರೆ.
ವಿಧಾನ ಪರಿಷತ್ ಸದಸ್ಯೆ ಡಾ. ಉಮಾಶ್ರೀ ಅವರು ಚುಕ್ಕೆ ಗುರುತಿನ ಪ್ರಶ್ನೆಯ ಮೂಲಕ ಆರ್ಟಿಒ ಕಚೇರಿಗಳಲ್ಲಿ ದಲ್ಲಾಳಿಗಳ ಹಾವಳಿ ಮತ್ತು ಜನರಿಗೆ ಆಗುತ್ತಿರುವ ತೊಂದರೆಯ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದರು. ಇದಕ್ಕೆ ಉತ್ತರಿಸಿದ ಸಚಿವ ರಾಮಲಿಂಗಾರೆಡ್ಡಿ, ಮಧ್ಯವರ್ತಿಗಳ ಸಮಸ್ಯೆ ಸಂಪೂರ್ಣ ನಿಯಂತ್ರಣಕ್ಕೆ ಬರುವಂತೆ ಸಾರಿಗೆ ಇಲಾಖೆಯು ಈಗಾಗಲೇ ಸೂಕ್ತ ಕ್ರಮಗಳನ್ನು ಕೈಗೊಂಡಿದೆ. ಯಾವುದೇ ಕಚೇರಿಯಲ್ಲಿ ದಲ್ಲಾಳಿಗಳು ಕಾಣಿಸಿಕೊಂಡರೆ ಅಲ್ಲಿನ ಆರ್ಟಿಒ ಸಿಬ್ಬಂದಿಯನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಆರ್ಟಿಒ ಕಚೇರಿಗಳಲ್ಲಿ ಶಿಸ್ತು ತರುವ ನಿಟ್ಟಿನಲ್ಲಿ ಸಾರಿಗೆ ಆಯುಕ್ತರು ಇತ್ತೀಚೆಗೆ ವಿಶೇಷ ಸುತ್ತೋಲೆ ಹೊರಡಿಸಿದ್ದಾರೆ. ಇದರ ಪ್ರಕಾರ:
- ಪ್ರತಿ ಅರ್ಜಿ ಮತ್ತು ಸ್ವೀಕೃತಿಯನ್ನೂ ಕಡ್ಡಾಯವಾಗಿ ನಿಗದಿತ ವಹಿ ನಮೂನೆಯಲ್ಲಿ ದಾಖಲಿಸಬೇಕು.
- ಪ್ರತಿ ವಾರ ಅಧೀಕ್ಷಕರು ವಹಿಗಳ ಪರಿಶೀಲನೆ ನಡೆಸಬೇಕು.
- ಪ್ರತಿ ತಿಂಗಳು ಮೇಜು ತಪಾಸಣೆ ನಡೆಸಿ, ವರದಿಯನ್ನು ಮೇಲಾಧಿಕಾರಿಗಳಿಗೆ ಸಲ್ಲಿಸಬೇಕು.
- ಕಚೇರಿ ಆವರಣದಲ್ಲಿ ಮಧ್ಯವರ್ತಿಗಳನ್ನು ಸಂಪರ್ಕಿಸಬೇಡಿ-ನೇರವಾಗಿ ಅಧಿಕಾರಿಗಳನ್ನು ಭೇಟಿಮಾಡಿ ಎಂಬ ಸೂಚನಾ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸಲಾಗಿದೆ.
- ಲೋಕಾಯುಕ್ತ ಕಚೇರಿಯ ವಿಳಾಸ ಮತ್ತು ದೂರವಾಣಿ ಸಂಖ್ಯೆಗಳನ್ನು ಪ್ರಮುಖವಾಗಿ ಪ್ರದರ್ಶಿಸಬೇಕು
ನವೆಂಬರ್ 1, 2021 ರಿಂದ ಸಾರಿಗೆ ಇಲಾಖೆಯು ಒಟ್ಟು 52 ಸೇವೆಗಳನ್ನು (ಡ್ರೈವಿಂಗ್ ಲೈಸೆನ್ಸ್ ನವೀಕರಣ, ವಾಹನ ನೋಂದಣಿ, ಪರ್ಮಿಟ್, ತೆರಿಗೆ ಪಾವತಿ ಇತ್ಯಾದಿ) ಸಂಪೂರ್ಣ ಆನ್ಲೈನ್ನಲ್ಲಿ ಒದಗಿಸುತ್ತಿದೆ. ಪರಿವಾಲಾ (Parivahan.gov.in) ಮತ್ತು ಕರ್ನಾಟಕ ಸಾರಿಗೆ ಇಲಾಖೆಯ ವೆಬ್ಸೈಟ್ ಮೂಲಕ ಮನೆಯಲ್ಲೇ ಕುಳಿತು ಈ ಸೇವೆಗಳನ್ನು ಪಡೆಯಬಹುದು. ಆನ್ಲೈನ್ ಸೇವೆಗಳನ್ನು ಜನರಿಗೆ ತಲುಪಿಸುವ ಮೂಲಕ ದಲ್ಲಾಳಿಗಳ ಹಾವಳಿಗಳನ್ನ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ.
ಸಾರ್ವಜನಿಕರು ದಲ್ಲಾಳಿಗಳಿಗೆ ಒಂದು ರೂಪಾಯಿ ಕೊಟ್ಟು ಮೋಸಹೋಗದಂತೆ ಎಚ್ಚರ ವಹಿಸಬೇಕು. ಯಾವುದೇ ಕೆಲಸಕ್ಕಾಗಿ ಆರ್ಟಿಒ ಕಚೇರಿಗೆ ಬಂದಾಗ ನೇರವಾಗಿ ಕೌಂಟರ್ಗೆ ಹೋಗಿ ಅರ್ಜಿ ಸಲ್ಲಿಸಿ. ಯಾರಾದರೂ ದಲ್ಲಾಳಿಯಾಗಿ ತೊಂದರೆ ಕೊಟ್ಟರೆ ತಕ್ಷಣ ಲೋಕಾಯುಕ್ತಕ್ಕೆ ದೂರು ನೀಡಿ ಎಂದು ಸಚಿವ ರಾಮಲಿಂಗಾರೆಡ್ಡಿ ಕರೆ ನೀಡಿದ್ದಾರೆ.
ಈ ಕ್ರಮಗಳಿಂದ ಕರ್ನಾಟಕದ ಎಲ್ಲ 66 ಆರ್ಟಿಒ ಕಚೇರಿಗಳಲ್ಲಿ ಪಾರದರ್ಶಕತೆ ಮತ್ತು ಜವಾಬ್ದಾರಿ ಹೆಚ್ಚಾಗಲಿದೆ ಎಂಬ ನಂಬಿಕೆ ಸಾರಿಗೆ ಇಲಾಖೆಯದ್ದಾಗಿದೆ.





