ಕರ್ನಾಟಕದಲ್ಲಿ ಮಕ್ಕಳ ಅಪಹರಣ ಮತ್ತು ಮಿಸ್ಸಿಂಗ್ ಕೇಸ್ಗಳು ಆತಂಕಕಾರಿ ಮಟ್ಟಕ್ಕೆ ಏರಿಕೆಯಾಗುತ್ತಿವೆ. ಕಳೆದ 5 ವರ್ಷಗಳಲ್ಲಿ (2020-2024) ರಾಜ್ಯಾದ್ಯಂತ 14,878 ಮಕ್ಕಳು ಕಿಡ್ನಾಪ್ ಆಗಿದ್ದಾರೆ ಎಂಬ ಮಾಹಿತಿ ಸರ್ಕಾರಿ ದಾಖಲೆಗಳಲ್ಲಿ ಬಹಿರಂಗವಾಗಿದೆ. ಇದರಲ್ಲಿ 13,542 ಮಕ್ಕಳನ್ನು ಪತ್ತೆಹಚ್ಚಿ ಕುಟುಂಬಕ್ಕೆ ಒಪ್ಪಿಸಲಾಗಿದ್ದರೂ, 1,336 ಮಕ್ಕಳು ಇನ್ನೂ ಕಣ್ಮರೆಯಾಗಿದ್ದಾರೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಶಾಸನಸಭೆಯಲ್ಲಿ ತಿಳಿಸಿದ್ದಾರೆ.
ಮಿಸ್ಸಿಂಗ್ ಮಕ್ಕಳ ಕಳೆದ 5 ವರ್ಷಗಳ ಅಂಕಿ-ಅಂಶಗಳ ವಿವರ :
- ಒಟ್ಟು ಅಪಹರಣ/ಮಿಸ್ಸಿಂಗ್ ಕೇಸ್ಗಳು : 14,878
- ಅಪ್ರಾಪ್ತೆಯರು (ಬಾಲಕಿಯರು) : 10,792
- ಪತ್ತೆಯಾದವರು : 9,789
- ಕಣ್ಮರೆಯಾದವರು : 1,000+
- ಬಾಲಕರು : 4,086
- ಪತ್ತೆಯಾದವರು : 3,753
- ಕಣ್ಮರೆಯಾದವರು : ಸುಮಾರು 333
- ಒಟ್ಟು ಪತ್ತೆಯಾದ ಮಕ್ಕಳು: 13,542 (ಸುಮಾರು 91%)
- ಇನ್ನೂ ಕಣ್ಮರೆಯಾಗಿರುವ ಮಕ್ಕಳು: 1,336
ಬೆಂಗಳೂರು ನಗರವು ಈ ಕೇಸ್ಗಳಲ್ಲಿ ಮುಂಚೂಣಿಯಲ್ಲಿದ್ದು, ಕಳೆದ ಮೂರು ವರ್ಷಗಳಲ್ಲಿ (2023-2025) ಸುಮಾರು 3,268 ಮಕ್ಕಳು ಮಿಸ್ಸಿಂಗ್ ಆಗಿದ್ದಾರೆ ಎಂದು ವರದಿಯಾಗಿದೆ. ರಾಜ್ಯಾದ್ಯಂತ ಸುಮಾರು 10,000ಕ್ಕೂ ಹೆಚ್ಚು ಮಕ್ಕಳು ಮಿಸ್ಸಿಂಗ್ ಆಗಿದ್ದಾರೆ ಎಂಬ ಆತಂಕಕಾರಿ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಪ್ರತಿಕ್ರಿಯೆ : “ಮಕ್ಕಳು ಮಿಸ್ಸಿಂಗ್ ಆದಾಗಲೆಲ್ಲಾ ಮಾಹಿತಿ ನೀಡಲಾಗುತ್ತದೆ. ನಾನು ರಿವ್ಯೂ ಮಾಡುವಾಗ ಇದನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಬಹಳಷ್ಟು ಜನರನ್ನು ಈಗಾಗಲೇ ಹುಡುಕಿ ಪತ್ತೆಹಚ್ಚಲಾಗಿದೆ. ಏನು ಕ್ರಮ ಕೈಗೊಳ್ಳಬೇಕೋ ಅದನ್ನು ತೆಗೆದುಕೊಳ್ಳುತ್ತೇವೆ” ಎಂದು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು.
ಪೋಷಕರಿಗೆ ಎಚ್ಚರಿಕೆ: ಪೋಷಕರು ಮಕ್ಕಳ ಮೇಲೆ ನಿಗಾ ಇರಿಸಬೇಕು. ಮಕ್ಕಳನ್ನು ಏಕಾಂಗಿಯಾಗಿ ಬಿಡಬಾರದು, ಅಪರಿಚಿತರೊಂದಿಗೆ ಮಾತನಾಡದಂತೆ ಎಚ್ಚರಿಕೆ ನೀಡಬೇಕು. ಮಿಸ್ಸಿಂಗ್ ಆದ ತಕ್ಷಣ ಪೊಲೀಸ್ಗೆ ದೂರು ನೀಡಿ, ಚೈಲ್ಡ್ಲೈನ್ (1098) ಅಥವಾ ತುರ್ತು ಸೇವೆಗಳನ್ನು ಸಂಪರ್ಕಿಸಿ. ಸರ್ಕಾರಿ ಮತ್ತು ಸ್ವಯಂಸೇವಾ ಸಂಸ್ಥೆಗಳು ಮಕ್ಕಳ ಸುರಕ್ಷತೆಗಾಗಿ ಹಲವು ಕ್ರಮಗಳನ್ನು ಕೈಗೊಂಡಿವೆಯಾದರೂ, ಪೋಷಕರ ಜಾಗೃತಿ ಅತ್ಯಗತ್ಯ.





