ಬೆಂಗಳೂರು: ದೆಹಲಿಯಲ್ಲಿ ಎಐಸಿಸಿ ನಾಯಕರ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಜಿ ಪರಮೇಶ್ವರ ಪ್ರತಿಕ್ರಿಯೆ ನೀಡಿದ್ದು, ನಾನು ಕದ್ದು ಮುಚ್ಚಿ ಮಾತಾನಾಡುವುದಿಲ್ಲ ಎಂದು ಹೇಳಿದರು.
ಸದಾಶಿವನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಖಾಸಗಿ ಕಾರ್ಯಕ್ರಮದ ನಿಮಿತ್ತ ನಾನು ಎರಡು ದಿನ ದೆಹಲಿಗೆ ತೆರಳಿದ್ದೆ, ಆದ್ರೆ ರಾಜಕೀಯ ಉದ್ದೇಶದಿಂದ ದೆಹಲಿಗೆ ಹೋಗಿರಲಿಲ್ಲ. ಎಐಸಿಸಿ ಹೊಸ ಕಟ್ಟಡ ಉದ್ಘಾಟನೆಗೆ ನಾನು ಹೋಗಿರಲಿಲ್ಲ. ಹೀಗಾಗಿ ಕಟ್ಟಡ ನೋಡಲು ಹೋದಾಗ ಕೆ.ಸಿ.ವೇಣುಗೋಪಾಲ್ ಭೇಟಿಯಾಗಿದ್ದೆ. ದೆಹಲಿ ಪ್ರವಾಸದ ಹಿಂದೆ ಯಾವುದೇ ರಾಜಕೀಯ ಅಜೆಂಡಾ ಇಟ್ಕೊಂಡು ಹೋಗಿರಲಿಲ್ಲ. ಇದರಲ್ಲಿ ಮುಚ್ಚಿಡುವುದಂತದ್ದು ಏನೂ ಇಲ್ಲ. ಒಂದು ವೇಳೆ ರಾಜಕೀಯ ಚರ್ಚೆ ಮಾಡಿದ್ರೆ, ಮಾಡಿದ್ದೆ ಅಂತ ಹೇಳ್ತೀನಿ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ , ಸಿಎಂ ಬದಲಾವಣೆ ಬಗ್ಗೆ ಎಲ್ಲೂ ಮಾತನಾಡಿಲ್ಲ. ಶೋಷಿತರ ಸಮಾವೇಶದ ವಿಚಾರ ಆಗಲಿ, ಯಾವುದೇ ರಾಜಕೀಯದ ಬಗ್ಗೆ ಮಾತನಾಡಿಲ್ಲ. ಕೆ.ಸಿ ವೇಣುಗೋಪಾಲ ಅವರನ್ನ ಹದಿನೈದು ನಿಮಿಷ ಭೇಟಿಯಾಗಿ ಬಂದೆ ಅಷ್ಟೇ ಎಂದರು.
ಇನ್ನೂ ಇದೇ ವೇಳೆ, ಮುಡಾ ಕೇಸ್ನಲ್ಲಿ ಸಿಎಂ ಕುಟುಂಬಕ್ಕೆ ಕ್ಲೀನ್ಚಿಟ್ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಪರಮೇಶ್ವರ್ ಅವರು, ಸಿಬಿಐ ಕೊಡುವ ವಿಚಾರದಲ್ಲಿ ಹೈಕೋರ್ಟ್ ಆದೇಶ ಮಾಡಿದೆ. ಕಾನೂನಿಗೆ ವಿರುದ್ದವಾಗಿ ಸಿಬಿಐಗೆ ಕೊಡಬಾರದು ಅಂತ ಹೇಳಿದೆ. ಈಗ ಕ್ಲೀನ್ಚಿಟ್ ಕೊಟ್ಟಿದ್ದಾರೆ ಅಂದ್ರೆ ಬಿಜೆಪಿಯವ್ರು ತನಿಖೆಯನ್ನೇ ಪ್ರಶ್ನೆ ಮಾಡ್ತಿದ್ದಾರೆ. ನಾವು ಈ ರೀತಿ ಮಾಡೋದು ಎಷ್ಟು ಸರಿ ಅಂತ ಅವರೇ ಪ್ರಶ್ನೆ ಮಾಡಿಕೊಳ್ಳಲಿ. ಹೈಕೋರ್ಟ್ ಹೇಳಿರುವಾಗ ಈ ರೀತಿ ಹೇಳೋದು ಅದೆಂತಾ ರಾಜಕೀಯ..? ತನಿಖೆಯಲ್ಲಿ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ, ಕ್ಲೀನ್ ಚಿಟ್ ಕೊಟ್ಟಿದ್ದಾರೆ. ಇವರಿಗೆ ಅನುಕೂಲ ಆದಾಗ ಎಲ್ಲವೂ ಸರಿ ಇರುತ್ತೆ. ಸರಿ ಇಲ್ಲ ಅಂದಾಗ ಯಾವುದೂ ಸರಿ ಇರಲ್ಲ. ಹೈಕೋರ್ಟ್ ಬೇಡ ಅಂದಾಗ ಮತ್ತೆ ಯಾಕೆ.? ಬಿಜೆಪಿಯವರು ಬೇಕಾದ್ರೆ ಕೋರ್ಟಿಗೆ ಹೋಗಲಿ. ಮತ್ತೆ ಮತ್ತೆ ಅದೇ ವಿಚಾರ ಯಾಕೆ ಪ್ರಸ್ತಾಪ ಮಾಡ್ತಾರೆ. ಲೋಕಾಯುಕ್ತದವರೇ ತನಿಖೆ ಮಾಡಬೇಕು ಅಂತ ಕೋರ್ಟ್ ಹೇಳಿದೆ. ಈಗ ಲೋಕಾಯುಕ್ತದವರು ತನಿಖೆ ಮಾಡಿ, ವರದಿ ಕೊಟ್ಟಿದ್ದಾರೆ. ಲೋಕಾಯುಕ್ತ ಒಂದು ಸ್ವಾಯತ್ತ ಸಂಸ್ಥೆ ಸರ್ಕಾರದ ಅಧೀನಕ್ಕೆ ಹೇಗೆ ಬರುತ್ತದೆ. ಸರ್ಕಾರ ಏನಾದರೂ ಡೈರಕ್ಷನ್ ಕೊಡುತ್ತಾ ಎಂದು ಬಿಜೆಪಿ ನಾಯಕರ ವಿರುದ್ದ ಪರಮೇಶ್ವರ್ ವಾಗ್ದಾಳಿ ನಡೆಸಿದರು.
ಅಲ್ಲದೇ ಇದೇ ವೇಳೆ, ಗೃಹ ಲಕ್ಷ್ಮೀ, ಅನ್ನಭಾಗ್ಯ ಹಣ ಬಿಡುಗಡೆ ವಿಳಂಬ ಹಿನ್ನೆಲೆ ಪ್ರತಿಕ್ರಿಯಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಒಂದೆರಡು ದಿನ ತಡವಾಗಿದೆ, ಬಿಡುಗಡೆ ಮಾಡ್ತೀವಿ ಅಂತ ಸಿಎಂ ಹೇಳಿದ್ದಾರೆ. ಕೆಲವು ಕಡೆ ವಿಳಂಬ ಆಗಿದೆ, ಇಲ್ಲ ಅಂತ ಹೇಳಲ್ಲ. ಮುಂದೆ ಈ ರೀತಿ ಆಗದಂತೆ ಸರಿಪಡಿಸಿಕೊಳ್ತೇವೆ. ರಾಜ್ಯದ ಹಣಕಾಸಿನ ನಿರ್ವಹಣೆ ಅಷ್ಟು ಸುಲಭವಲ್ಲ. ನಿರ್ವಹಣೆ ಮಾಡಿಕೊಂಡು ಹಣ ಬಿಡುಗಡೆ ಮಾಡೋದು ಸ್ವಲ್ಪ ತಡವಾಗುತ್ತದೆ. ನಾಡಿನ ಜನರಿಗೆ ನಾನು ಮನವಿ ಮಾಡ್ತೇನೆ, ಯಾವ ಸಂಶಯವೂ ಬೇಡ, ಸಂದರ್ಭ ಬಂದರೆ ಶ್ಚೇತಪತ್ರ ಹೊರಡಿಸುತ್ತೇವೆ. ಮುಂದಿನ ತಿಂಗಳು ಸಿಎಂ ಹದಿನಾರನೇ ಬಜೆಟ್ ಮಂಡಿಸುತ್ತಾರೆ. ಹಳೆ ಬಿಲ್ಗಳು, ಗ್ಯಾರೆಂಟಿಗಳನ್ನ ಕೊಟ್ಟು ಅಭಿವೃದ್ಧಿ ಮಾಡ್ಕೊಂಡು ಬರುತ್ತಿದ್ದೇವೆ.
ಹಣಕಾಸು ನಿರ್ವಹಣೆ ನಡುವೆ ಸ್ವಲ್ಪ ಸಮಯ ಹಿಡಿದಿದೆ ನಿಜ, ಸರಿ ಮಾಡುತ್ತೇವೆ ಎಂದರು.