ಕರ್ನಾಟಕ ಸರ್ಕಾರ ರಾಜ್ಯದ ಲಕ್ಷಾಂತರ ಆಸ್ತಿ ಮಾಲೀಕರಿಗೆ ಭಾರೀ ನಿಟ್ಟುಸಿರು ಬಿಡುವಂತಾದ ಗುಡ್ ನ್ಯೂಸ್ ನೀಡಿದೆ. ರಾಜ್ಯದ ನಗರ ಪ್ರದೇಶಗಳಲ್ಲಿ ಇರುವ ಎಲ್ಲಾ ‘ಬಿ’ ಖಾತಾ ಆಸ್ತಿಗಳಿಗೆ ‘ಎ’ ಖಾತಾ ಮಾನ್ಯತೆ ನೀಡುವ ಮಹತ್ವದ ತೀರ್ಮಾನಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ಮಾದರಿಯಲ್ಲಿ ಈ ವ್ಯವಸ್ಥೆಯನ್ನು ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೂ ವಿಸ್ತರಿಸಲಾಗುತ್ತಿದೆ.
ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ಈ ತೀರ್ಮಾನದ ಮೂಲಕ ರಾಜ್ಯದ ಮಹಾನಗರ ಪಾಲಿಕೆ, ನಗರಸಭೆ ಮತ್ತು ಇತರೆ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಇರುವ ಸುಮಾರು 10 ಲಕ್ಷಕ್ಕೂ ಹೆಚ್ಚು ಬಿ ಖಾತಾ ಆಸ್ತಿಗಳಿಗೆ ಎ ಖಾತಾ ಮಾನ್ಯತೆ ಸಿಗಲಿದೆ ಎಂದು ಅಂದಾಜಿಸಲಾಗಿದೆ.
ಸದ್ಯ ಬಿ ಖಾತಾ ಹೊಂದಿರುವ ನಿವೇಶನಗಳು, ಕಟ್ಟಡಗಳು, ಅಪಾರ್ಟ್ಮೆಂಟ್ಗಳು ಹಾಗೂ ಫ್ಲಾಟ್ಗಳಿಗೆ ಎ ಖಾತಾ ಮಾನ್ಯತೆ ಪಡೆಯುವ ಅವಕಾಶ ಕಲ್ಪಿಸಲಾಗುತ್ತದೆ. ಆದರೆ ಈ ಪರಿವರ್ತನೆ ಸಂಪೂರ್ಣ ಉಚಿತವಲ್ಲ. ಬಿ ಖಾತೆಯಿಂದ ಎ ಖಾತೆಗೆ ಪರಿವರ್ತಿಸಲು ಆಸ್ತಿ ಮಾಲೀಕರು ದಂಡವನ್ನು ಪಾವತಿಸಬೇಕಾಗುತ್ತದೆ. ಈ ದಂಡದ ಮೊತ್ತ ಎಷ್ಟಿರಬೇಕು ಎಂಬುದರ ಬಗ್ಗೆ ಸರ್ಕಾರ ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ.
ಈಗಾಗಲೇ ಜಿಬಿಎ ವ್ಯಾಪ್ತಿಯಲ್ಲಿ ಆಸ್ತಿಯ ಮಾರ್ಗಸೂಚಿ ಮೌಲ್ಯದ ಶೇ.5ರಷ್ಟು ದಂಡ ಪಾವತಿಸುವ ಮೂಲಕ ಎ ಖಾತಾ ಪಡೆಯಲು ಅವಕಾಶ ನೀಡಲಾಗಿತ್ತು. ಆದರೆ ಈ ಶೇ.5ರಷ್ಟು ದಂಡದ ಪ್ರಮಾಣ ಹೆಚ್ಚು ಎನ್ನುವ ಆಕ್ಷೇಪಗಳು ವ್ಯಕ್ತವಾಗಿದ್ದವು. ಸರ್ಕಾರ ನಿರೀಕ್ಷಿಸಿದಷ್ಟು ಅರ್ಜಿಗಳು ಸಲ್ಲಿಕೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ದಂಡದ ಪ್ರಮಾಣವನ್ನು ಇಳಿಸುವ ಕುರಿತು ಸರ್ಕಾರ ಮತ್ತೆ ಚರ್ಚೆ ನಡೆಸಲಿದೆ.
ಸರ್ಕಾರದ ಈ ಕ್ರಮದಿಂದ ಒಂದು ಕಡೆ ಆಸ್ತಿ ಮಾಲೀಕರಿಗೆ ಕಾನೂನು ಮಾನ್ಯತೆ ಸಿಗಲಿದ್ದು, ಮತ್ತೊಂದು ಕಡೆ ದಂಡ ರೂಪದಲ್ಲಿ ಸರ್ಕಾರದ ಬೊಕ್ಕಸಕ್ಕೂ ಮಹತ್ವದ ಆದಾಯ ಲಭಿಸುವ ನಿರೀಕ್ಷೆ ಇದೆ. ಶೀಘ್ರದಲ್ಲೇ ಈ ಸಂಬಂಧ ಸರ್ಕಾರ ಅಧಿಕೃತ ಆದೇಶವನ್ನು ಹೊರಡಿಸಲಿದೆ.
ಎ ಖಾತಾ ಮತ್ತು ಬಿ ಖಾತಾ ಎಂದರೇನು?
ಆಸ್ತಿಗಳ ನೋಂದಣಿ ಮತ್ತು ತೆರಿಗೆ ಉದ್ದೇಶಕ್ಕಾಗಿ ಎ ಖಾತಾ ಮತ್ತು ಬಿ ಖಾತಾ ಎಂಬ ಎರಡು ವರ್ಗೀಕರಣಗಳನ್ನು ಮಾಡಲಾಗುತ್ತದೆ. ಎ ಖಾತಾ ಸಂಪೂರ್ಣ ಕಾನೂನು ಮಾನ್ಯತೆ ಹೊಂದಿದ್ದು, ಬ್ಯಾಂಕ್ ಸಾಲ, ಕಟ್ಟಡ ನಿರ್ಮಾಣ ಪರವಾನಗಿ, ವ್ಯಾಪಾರ ಪರವಾನಗಿ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸುತ್ತದೆ.
ಇದಕ್ಕೆ ವಿರುದ್ಧವಾಗಿ ಬಿ ಖಾತಾ ಸಾಮಾನ್ಯವಾಗಿ ಸಕ್ರಮ ಪ್ರಾಧಿಕಾರದ ಅನುಮೋದನೆ ಇಲ್ಲದೆ ರಚಿಸಿದ ಬಡಾವಣೆಗಳು, ನಿಯಮ ಉಲ್ಲಂಘಿಸಿ ನಿರ್ಮಾಣಗೊಂಡ ಕಟ್ಟಡಗಳಿಗೆ ನೀಡಲಾಗುತ್ತದೆ. ಇದರಿಂದಾಗಿ ಬಿ ಖಾತಾ ಆಸ್ತಿಗಳಿಗೆ ಸಾಲ ಸಿಗುವುದು ಕಷ್ಟವಾಗುತ್ತದೆ ಮತ್ತು ಅನೇಕ ಕಾನೂನು ಅಡೆತಡೆಗಳು ಎದುರಾಗುತ್ತವೆ.
ಇತ್ತೀಚಿನ ಸರ್ಕಾರದ ತೀರ್ಮಾನದಿಂದಾಗಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯುವ ನಿರೀಕ್ಷೆ ಮೂಡಿದೆ.
ಸಿಎಂ ಕಚೇರಿಯಿಂದ ಸ್ಪಷ್ಟನೆ
ಈ ಕುರಿತು ಮುಖ್ಯಮಂತ್ರಿ ಕಚೇರಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, “ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಕ್ರಮ ಪ್ರಾಧಿಕಾರಗಳಿಂದ ಅನುಮೋದನೆ ಪಡೆಯದೇ ರಚಿಸಿರುವ ಅಥವಾ ಮಾರಾಟವಾಗುತ್ತಿರುವ ನಿವೇಶನಗಳನ್ನು ನಿಯಂತ್ರಿಸುವ ಉದ್ದೇಶದಿಂದ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ” ಎಂದು ತಿಳಿಸಿದೆ.





