ಬೆಂಗಳೂರು, ಜನವರಿ 14: ಜನವರಿ 22ರಿಂದ 31ರವರೆಗೆ ಕರ್ನಾಟಕ ವಿಧಾನಸಭೆಯ ವಿಶೇಷ ಅಧಿವೇಶನ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಬಿಜಿ ರಾಮ್ ಜಿ ಕಾಯ್ದೆ 2025 (VBJG Ram G Act) ರಾಜ್ಯ ಹಾಗೂ ಸಮಾಜದ ಮೇಲೆ ಬೀರುವ ಪರಿಣಾಮಗಳ ಕುರಿತು ಜಂಟಿ ಅಧಿವೇಶನದಲ್ಲಿ ಚರ್ಚೆ ನಡೆಸಿ ನಿರ್ಣಯ ಕೈಗೊಳ್ಳಲು ತೀರ್ಮಾನಿಸಲಾಗಿದೆ.
ವಿಧಾನಸೌಧದಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯ ಬಳಿಕ ಈ ಕುರಿತು ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ. ಪಾಟೀಲ್, “ವಿಶೇಷ ಅಧಿವೇಶನದಲ್ಲಿ ಒಟ್ಟು ಮೂರು ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ಅದರಲ್ಲೂ ವಿಬಿಜಿ ರಾಮ್ ಜಿ ಕಾಯ್ದೆಯ ಪರಿಣಾಮಗಳು, ರಾಜ್ಯದ ಹಿತಾಸಕ್ತಿ ಹಾಗೂ ಕೇಂದ್ರ-ರಾಜ್ಯ ಸಂಬಂಧಗಳ ಕುರಿತು ಚರ್ಚೆ ಪ್ರಮುಖವಾಗಲಿದೆ” ಎಂದು ತಿಳಿಸಿದರು.
ವಿಬಿಜಿ ರಾಮ್ ಜಿ ಕಾಯ್ದೆ ಬಗ್ಗೆ ಆತಂಕ
ಕೇಂದ್ರ ಸರ್ಕಾರ ಮನರೇಗಾ ಯೋಜನೆಯಲ್ಲಿ ಮಹತ್ವದ ಬದಲಾವಣೆಗಳನ್ನು ತರುವ ಉದ್ದೇಶದಿಂದ ವಿಬಿಜಿ ರಾಮ್ ಜಿ ಕಾಯ್ದೆಯನ್ನು ಜಾರಿ ಮಾಡಿದ್ದು, ಇದರಿಂದ ರಾಜ್ಯಗಳ ಅಧಿಕಾರ ಕುಂಠಿತವಾಗುವ ಆತಂಕ ಕಾಂಗ್ರೆಸ್ ಪಕ್ಷದಲ್ಲಿ ವ್ಯಕ್ತವಾಗಿದೆ. ಹೊಸ ಕಾಯ್ದೆಯಡಿ ಕೇಂದ್ರ ಸರ್ಕಾರ ಸೂಚಿಸುವ ಪ್ರದೇಶಗಳಲ್ಲಿ ಮಾತ್ರ ಕೆಲಸ ನಡೆಯಬೇಕು, ತಂತ್ರಜ್ಞಾನ ಆಧಾರಿತ ನಿಗಾವ್ಯವಸ್ಥೆ, ಜಿಪಿಎಸ್ ಟ್ರ್ಯಾಕಿಂಗ್ ಮತ್ತು ಎಐ ಮೇಲ್ವಿಚಾರಣೆ ಜಾರಿಯಾಗಲಿದೆ.
ನರೇಗಾ ಹೆಸರು ಬದಲಾವಣೆಗೆ ತೀವ್ರ ವಿರೋಧ
ಇತ್ತ, ನರೇಗಾ ಯೋಜನೆಯ ಹೆಸರು ಬದಲಾವಣೆ ಹಾಗೂ ಅನುದಾನ ಕಡಿತ ವಿಚಾರದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. “ಹಿಂದೆ ನರೇಗಾ ಯೋಜನೆಗೆ ಕೇಂದ್ರ ಸರ್ಕಾರ ಶೇ.100 ಹಣ ನೀಡುತ್ತಿತ್ತು. ಈಗ ಶೇ.40ರಷ್ಟು ಹಣವನ್ನು ರಾಜ್ಯವೇ ಭರಿಸಬೇಕಾಗಿದೆ. ಹೊಸ ಕಾಯ್ದೆಯಡಿ ಕೇಂದ್ರ ಹೇಳಿದಂತೆ ಕೆಲಸ ಮಾಡಬೇಕಾಗಿದೆ. ಇದು ನೇರವಾಗಿ ಬಡವರ ಮೇಲೆ ದ್ರೋಹ ಮಾಡಿದಂತೆ” ಎಂದು ಅವರು ಆರೋಪಿಸಿದರು.
ಇದೇ ವೇಳೆ ರಾಜಕೀಯ ವಾಗ್ದಾಳಿಗೂ ಅವರು ಮುಂದಾದರು. “ಬಿಜೆಪಿಗರು ಮತಕ್ಕಾಗಿ ರಾಮನ ಹೆಸರು ಬಳಸುತ್ತಾರೆ. ಆದರೆ ನಿಜವಾದ ರಾಮನ ಭಕ್ತರು ನಾವು. ದೇವಸ್ಥಾನಗಳನ್ನು ಕಟ್ಟಿದ್ದು ಕಾಂಗ್ರೆಸ್ ಸರ್ಕಾರಗಳೇ. ಬಿಜೆಪಿಯವರು ನಕಲಿ ಹಿಂದೂಗಳು” ಎಂದು ಕಿಡಿಕಾರಿದರು.
ಬಿಜೆಪಿ ಪ್ರತಿದಾಳಿ
ಕಾಂಗ್ರೆಸ್ ವಿರೋಧಕ್ಕೆ ಬಿಜೆಪಿ ತೀವ್ರ ಪ್ರತಿಕ್ರಿಯೆ ನೀಡಿದ್ದು, ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ಈ ಹಿಂದೆ ನೀಡಿದ್ದ ಹೇಳಿಕೆಯಲ್ಲಿ, “ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ನರೇಗಾ ಯೋಜನೆಯಲ್ಲಿ ಸುಮಾರು 11 ಲಕ್ಷ ಕೋಟಿ ರೂಪಾಯಿ ಭ್ರಷ್ಟಾಚಾರ ನಡೆದಿದೆ. ಈ ಅಕ್ರಮ ತಡೆಯಲೆಂದೇ ವಿಬಿಜಿ ರಾಮ್ ಜಿ ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ” ಎಂದು ಆರೋಪಿಸಿದ್ದರು.
ವಿಶೇಷ ಅಧಿವೇಶನದಲ್ಲಿ ಏನು ನಿರೀಕ್ಷೆ?
ಜನವರಿ 22ರಿಂದ ಆರಂಭವಾಗಲಿರುವ ವಿಶೇಷ ಅಧಿವೇಶನದಲ್ಲಿ ವಿಬಿಜಿ ರಾಮ್ ಜಿ ಕಾಯ್ದೆ, ನರೇಗಾ ಯೋಜನೆ ಬದಲಾವಣೆ, ಕೇಂದ್ರ-ರಾಜ್ಯ ಹಣಕಾಸು ಸಂಬಂಧಗಳು ಹಾಗೂ ರಾಜ್ಯದ ಹಿತಾಸಕ್ತಿ ಕುರಿತಂತೆ ತೀವ್ರ ಚರ್ಚೆ ನಡೆಯುವ ನಿರೀಕ್ಷೆಯಿದೆ.





