ನವದೆಹಲಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯ (Cabinet Expansion) ಕಸರತ್ತು ಇದೀಗ ಕ್ರೈಮ್ಯಾಕ್ಸ್ ಹಂತ ತಲುಪಿದ್ದು, ಇವತ್ತು ನೂತನ ಸಚಿವರ ಪಟ್ಟಿ ಹೊರಬೀಳುವ ಸಾಧ್ಯತೆಯಿದೆ. ಕಳೆದ ಕೆಲವು ದಿನಗಳಿಂದ ರಾಜ್ಯದ ರಾಜಕೀಯ ವಲಯದಲ್ಲಿ ಸಂಪುಟ ವಿಸ್ತರಣೆಯೇ ಪ್ರಮುಖ ಚರ್ಚೆಯ ವಿಷಯವಾಗಿದ್ದು, ಆಕಾಂಕ್ಷಿಗಳು ತಮ್ಮ ಬೆಂಬಲಿಗರೊಂದಿಗೆ ದೆಹಲಿ-ಬೆಂಗಳೂರಿನಲ್ಲಿ ತೀವ್ರ ಲಾಬಿ ನಡೆಸಿದ್ದರು.
ದೆಹಲಿಯಲ್ಲಿ ಅಂತಿಮ ಸಭೆ
ದೆಹಲಿಯಲ್ಲಿ ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದ ಹೈ-ವೋಲ್ವೇಜ್ ಸಭೆ ಸಾಕಷ್ಟು ಕುತೂಹಲ ಮೂಡಿಸಿದ್ದವು. ಈಗ ನಾಯಕರು ಒಮ್ಮತದ ತೀರ್ಮಾನಕ್ಕೆ ಬಂದಿದ್ದು, ಬಹುತೇಕ ಶುಕ್ರವಾರ ಅಥವಾ ಸೋಮವಾರ ಸಂಪುಟ ವಿಸ್ತರಣೆ ನಿಶ್ಚಿತವಾಗಿದೆ. ಆದರೆ, ಮೂಲಗಳ ಪ್ರಕಾರ ಇಂದು ಸಂಜೆಯೊಳಗೆ ಅಧಿಕೃತ ಪಟ್ಟಿ ಪ್ರಕಟವಾಗುವ ಸಾಧ್ಯತೆಗಳಿವೆ.
ಮಂಗಳವಾರ ರಾತ್ರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರ ನವದೆಹಲಿ ನಿವಾಸದಲ್ಲಿ ಹಿರಿಯ ನಾಯಕರ ಸುದೀರ್ಘ ಸಭೆ ನಡೆದಿದೆ. ಈ ಮಹತ್ವದ ಸಮಾಲೋಚನೆಯಲ್ಲಿ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳು ಹಾಗೂ ಹೊಸ ಮುಖಗಳಿಗೆ ಅವಕಾಶ ನೀಡುವ ಕುರಿತು ಚರ್ಚೆ ನಡೆಸಿ, ಪಟ್ಟಿಯನ್ನು ಅಂತಿಮಗೊಳಿಸುವ ಕೆಲಸ ಮಾಡಲಾಗಿದೆ. ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಡಿಸಿಸಿ ಅಧ್ಯಕ್ಷರು ಮತ್ತು ಇತರೆ ಪ್ರಮುಖ ನಾಯಕರು ಭಾಗವಹಿಸಿದ್ದರು.
ಸಂಪುಟ ಭರ್ತಿಗೆ ಸಂಬಂಧಿಸಿದಂತೆ ಇನ್ನು ಕೇವಲ ಒಂದೇ ಒಂದು ಹೆಜ್ಜೆ ಬಾಕಿ ಉಳಿದಿದೆ. ವರಿಷ್ಠರ ಮಟ್ಟದಲ್ಲಿ ಅಂತಿಮ ಸಮ್ಮತಿ ದೊರೆತ ತಕ್ಷಣವೇ, ಸಂಪುಟ ಸೇರಲಿರುವ ಶಾಸಕರ ಅಧಿಕೃತ ಪಟ್ಟಿಯನ್ನು ಕಾಂಗ್ರೆಸ್ ಹೈಕಮಾಂಡ್ ಪ್ರಕಟಿಸಲಿದೆ. ಸಚಿವ ಸ್ಥಾನಕ್ಕಾಗಿ ಶಾಸಕರಿಂದ ತೀವ್ರ ಪೈಪೋಟಿ ವ್ಯಕ್ತವಾಗಿತ್ತು. ಹೀಗಾಗಿ ಪ್ರಾದೇಶಿಕ ಪ್ರಾತಿನಿಧ್ಯ, ಜಾತಿ ಸಮೀಕರಣ ಮತ್ತು ಹಿರಿಯ-ಕಿರಿಯ ನಾಯಕರ ನಡುವೆ ಸಮತೋಲನ ಕಾಯ್ದುಕೊಳ್ಳುವುದು ವರಿಷ್ಠರಿಗೆ ಪ್ರಮುಖ ಸವಾಲಾಗಿತ್ತು. ಈ ಎಲ್ಲಾ ಪ್ರಮುಖ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಅಂತಿಮ ಪಟ್ಟಿ ಸಿದ್ಧಪಡಿಸಲಾಗಿದೆ.
ಯಾರೆಲ್ಲಾ ಪಟ್ಟಿಯಲ್ಲಿ? ಕುತೂಹಲ ಹೆಚ್ಚಿಸಿದ ಶಾಸಕರು
ಬಹುತೇಕ 20 ಮಂದಿ ಹೊಸ ಸಚಿವರ ಲಿಸ್ಟ್ ಫೈನಲ್ ಆಗಿದ್ದು, ಪಟ್ಟಿಯಲ್ಲಿ ಯಾರ್ಯಾರಿಗೆ ಅವಕಾಶ ಸಿಗಲಿದೆ ಎಂಬುದು ಕುತೂಹಲ ಮೂಡಿಸಿದೆ. ಸಿಎಂ ಡಿಕೆಶಿ ಹೊಸ ಹಾಗೂ ಡೈನಾಮಿಕ್ ಶಾಸಕರಿಗೆ ಮಣೆ ಹಾಕಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕೇವಲ ಅನುಭವಕ್ಕಷ್ಟೇ ಆದ್ಯತೆ ನೀಡದೆ, ಪಕ್ಷದ ಭವಿಷ್ಯದ ದೃಷ್ಟಿಯಿಂದ ಯುವ ನಾಯಕರು ಮತ್ತು ಮೊದಲ ಬಾರಿಗೆ ಗೆದ್ದು ಬಂದಿರುವ ಕ್ರಿಯಾಶೀಲ ಶಾಸಕರಿಗೂ ಈ ಬಾರಿ ಸಂಪುಟದಲ್ಲಿ ಅವಕಾಶ ಕಲ್ಪಿಸಲು ಹೈಕಮಾಂಡ್ ಸೂಚನೆ ನೀಡಿದೆ.
ಪ್ರಮಾಣ ವಚನ ಸಮಾರಂಭ ಎಲ್ಲಿ?
ಹೈಕಮಾಂಡ್ನಿಂದ ಪಟ್ಟಿಗೆ ಅಂತಿಮ ಅಂಕಿತ ಸಿಗುತ್ತಿದ್ದಂತೆ ಬೆಂಗಳೂರಿನ ರಾಜಭವನದಲ್ಲಿ ನೂತನ ಸಚಿವರ ಪ್ರಮಾಣ ವಚನ ಸಮಾರಂಭ ನಡೆಯಲಿದೆ. ಈಗಾಗಲೇ ರಾಜಭವನದಲ್ಲಿ ಸಿದ್ಧತೆಗಳು ಆರಂಭವಾಗಿದ್ದು, ಸಚಿವರ ಪ್ರಮಾಣ ವಚನಕ್ಕೆ ಅಗತ್ಯವಾದ ಎಲ್ಲಾ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೊಸ ಸಚಿವರಿಗೆ ಶುಭ ಹಾರೈಸಿದ್ದು, ಹೊಸ ತಂಡದೊಂದಿಗೆ ಜನರ ಸೇವೆಯಲ್ಲಿ ಮುಂದುವರಿಯುವ ಭರವಸೆ ನೀಡಿದ್ದಾರೆ.





